Archive for the 'ಟೆಲಿವಿಷನ್' Category

ಅಕ್ಷರ ಸಂಗಾತ ಮಾಸ ಪತ್ರಿಕೆಯು ಪ್ರಜಾವಾಣಿ ದಿನ ಪತ್ರಿಕೆಯ ಅಮೃತ ಮಹೋತ್ಸವದ ಸಂದರ್ಭಕ್ಕಾಗಿ ರಂಗಕರ್ಮಿ, ಚಿತ್ರ ತಯಾರಕ ಬಿ. ಸುರೇಶ ಅವರ ಜೊತೆಗೆ ನಡೆಸಿದ ಸಂವಾದ

ಅಕ್ಷರ ಸಂಗಾತ ಮಾಸ ಪತ್ರಿಕೆಯು ಪ್ರಜಾವಾಣಿ ದಿನ ಪತ್ರಿಕೆಯ ಅಮೃತ ಮಹೋತ್ಸವದ ಸಂದರ್ಭಕ್ಕಾಗಿ ರಂಗಕರ್ಮಿ, ಚಿತ್ರ ತಯಾರಕ ಬಿ. ಸುರೇಶ ಅವರ ಜೊತೆಗೆ ನಡೆಸಿದ ಸಂವಾದ

ವಿಶಾಖ ಎನ್ ಅವರ ಪ್ರಶ್ನೆಗಳು:

೧. ರಂಗಭೂಮಿ, ಹಿರಿತೆರೆ, ಕಿರುತೆರೆ ಮತ್ತೆ ಸಿನಿಮಾ….ನಿಮ್ಮ ಈ ಪಯಣದ ತಂತುವನ್ನೊಮ್ಮೆ ಮೆಲುಕು ಹಾಕಿ….

– ಅದೊಂದು ಹಲವು ಆಕಸ್ಮಿಕಗಳ ಸಂತೆ.
೧೯೭೨ರಲ್ಲಿ, ನಾನು ಒಂಬತ್ತು ವರ್ಷದವನಿದ್ದಾಗ, ಬಿ.ವಿ. ಕಾರಂತರ ನಿರ್ದೇಶನದ ಈಡಿಪಸ್ ನಾಟಕ ನೋಡಲು ತಾಯಿಯ ಜೊತೆಗೆ ಹೋಗಿದ್ದೆ. ಕುರುಡನನ್ನು ವೇದಿಕೆಗೆ ಕರೆದೊಯ್ಯುವ ಮಾತಿಲ್ಲದ ಸಣ್ಣ ಪಾತ್ರ ಮಾಡುತ್ತಿದ್ದ ಹುಡುಗನಿಗೆ ಅನಾರೋಗ್ಯವಾಗಿತ್ತು. ಹಾಗಾಗಿ ಸಭಾಂಗಣದಲ್ಲಿ ಅಮ್ಮನ ಪಕ್ಕದಲ್ಲಿದ್ದ ನಾನು ಆಕಸ್ಮಿವಾಗಿ ಆ ಪಾತ್ರ ಮಾಡುವಂತಾಗಿ, ಆ ಮೂಲಕ ರಂಗಪ್ರವೇಶ ಆಯಿತು. ಅಲ್ಲಿಂದಾಚೆಗೆ ಎಎಸ್‌ ಮೂರ್ತಿಯವರ ತಂಡದ ಹಲವು ನಾಟಕಗಳಲ್ಲಿ ಸಣ್ಣ, ದೊಡ್ಡ ಪಾತ್ರಗಳನ್ನು ಮಾಡುವ ಮೂಲಕ ರಂಗಸಾಂಗತ್ಯ ಮುಂದುವರೆಯಿತು. ಅಲ್ಲಿಂದ ಇಲ್ಲಿಯವರೆಗೆ ಸುಮಾರು ಐದು ದಶಕಗಳ ರಂಗಭೂಮಿ ಒಡನಾಟ. ಇವತ್ತಿಗೂ ರಂಗಭೂಮಿ ನನ್ನ ಮೊದಲ ಆದ್ಯತೆ. ನಾನು ನಟ ಆಗಲು, ನಾಟಕಕಾರ ಮತ್ತು ನಿರ್ದೇಶಕ ಆಗಲು ದಾರಿ ಮಾಡಿಕೊಟ್ಟಿದೆ. ನನ್ನ ವ್ಯಕ್ತಿತ್ವ ರೂಪಿಸಿದೆ. ಹಾಗಾಗಿ ರಂಗಭೂಮಿ ಯಾವತ್ತಿಗೂ ನನ್ನ ತವರು ಮನೆ ಅನ್ನಬಹುದು.



೧೯೭೫ರಲ್ಲಿ ನಾನು ಅಭಿನಯಿಸಿದ ಒಂದು ನಾಟಕವನ್ನು ಮತ್ತು ಬಿ.ವಿ. ಕಾರಂತರನ್ನು ದೆಹಲಿಯ ಎನ್‌ಎಸ್‌ಡಿಗೆ ಬೀಳ್ಕೊಡುವ ಸಮಾರಂಭದಲ್ಲಿ ನಾನು ಮಾಡಿದ ಭಾಷಣವನ್ನು ಕೇಳಿದ ಗಿರೀಶ್ ಕಾಸರವಳ್ಳಿ ಅವರು ತಮ್ಮ ನಿರ್ದೇಶನದ ಮೊದಲ ಚಿತ್ರ “ಘಟಶ್ರಾದ್ಧ” ದಲ್ಲಿ ಒಂದು ಪಾತ್ರಕ್ಕೆ ನನ್ನನ್ನು ಆರಿಸಿದರು. ಅಲ್ಲಿಂದ ನನ್ನ ಚಿತ್ರರಂಗದ ಸಾಂಗತ್ಯ ಆರಂಭವಾಯಿತು. ಅಲ್ಲಿಂದ ಇಲ್ಲಿಯವರೆಗೆ ಚಿತ್ರೋದ್ಯಮ ನನ್ನನ್ನು ನಟನಾಗಿ, ಬರಹಗಾರನಾಗಿ, ನಿರ್ದೇಶಕನಾಗಿ, ನಿರ್ಮಾಪಕನಾಗಿ ಹಲವು ವೇಷ ತೊಡುವ ಅವಕಾಶ ಒದಗಿಸಿದೆ.

ಕಿರುತೆರೆಗೆ ಪ್ರವೇಶ ಆಗಿದ್ದು ನಟನಾಗಿ. ನಾನು ಅಭಿನಯಿಸಿದ್ದ ʼಮ್ಯಾಕ್‌ಬೆತ್‌ʼ ನಾಟಕದ ಪಾತ್ರವನ್ನು ಕಂಡ ಶ್ಯಾಮಸುಂದರ್‌ ಮತ್ತು ಗುರುದತ್ ಅವರು (ಚಲನಚಿತ್ರ ಕಲಾವಿದೆ ಮೈನಾವತಿ ಅವರ ಮಕ್ಕಳು) ತಮ್ಮ “ಬಿಸಿಲುಕುದುರೆ” ಧಾರಾವಾಹಿಯಲ್ಲಿ ಪಾತ್ರ ಮಾಡಲು ಆಹ್ವಾನಿಸಿದರು. ಆ ಮೂಲಕ, ೧೯೮೭ರಲ್ಲಿ ಕಿರುತೆರೆಗೆ ಆಕ್ಸಮಿಕ ಎಂಬಂತೆ ಪ್ರವೇಶಿಸಿದೆ. ನಂತರ ರಂಗಾನುಭವದ ಹಿನ್ನೆಲೆಯು ಕಿರುತೆರೆಯ ಹಲವು ವಿಭಾಗದಲ್ಲಿ ದುಡಿಯುವ ಅವಕಾಶ ಒದಗಿಸಿತು. ಹಲವು ಹೊಸ ಪ್ರಯೋಗ ಮಾಡಲು ಕಿರುತೆರೆಯೇ ಅವಕಾಶ ನೀಡಿತು. ಕಿರುತೆರೆಯು ನನ್ನನ್ನು ಕೇವಲ ನಟನಾಗಿ ಉಳಿಸದೆ, ಬರಹಗಾರನನ್ನಾಗಿ ಮತ್ತು ನಿರ್ದೇಶಕನನ್ನಾಗಿ ಮಾಡಿದ್ದಲ್ಲದೆ ನಿರ್ಮಾಪಕನಾಗಿಯೂ ಬೆಳೆಸಿತು.

೨. ಶಂಕರ್‌ನಾಗ್, ರವಿಚಂದ್ರನ್ ಜತೆಗಿನ ನೆನಪು… ಕಲಿಕೆ
– ಶಂಕರ್‌ ನಾಗ್‌ ಅವರು ತಮ್ಮ ತಂಡದ ನಾಟಕದ ಕರಪತ್ರ, ಪ್ರಚಾರ ಸಾಮಗ್ರಿ, ಟಿಕೀಟುಗಳನ್ನು ಮುದ್ರಿಸಲು ನನ್ನಮ್ಮ ನಡೆಸುತ್ತಿದ್ದ ಮುದ್ರಣಾಲಯಕ್ಕೆ ಬರುತ್ತಿದ್ದರು. ಅಲ್ಲಿ ಅವರ ಪರಿಚಯ ಆಯಿತು. ನಂತರ ಕರಪತ್ರದ ಕರಡು ಪ್ರತಿಯನ್ನು ಅವರ ಮನೆಗೆ ತೆಗೆದುಕೊಂಡು ಹೋಗುತ್ತಿದ್ದೆನಾಗಿ ಅರುಂಧತಿ ನಾಗ್‌, ಪಿಂಟಿ ರಾವ್‌ ಹೀಗೆ ಹಲವರ ಪರಿಚಯ ಅವರ ಮನೆಯಲ್ಲಿ ಆಯಿತು. ನಾನೂ ಸಹ ರಂಗ ಸಾಂಗತ್ಯ ಇರುವವನು ಎಂದು ಗೊತ್ತಾದ ಶಂಕರ್‌ ನಾಗ್‌ ಅವರು ತಮ್ಮ ತಂಡದ ನಾಟಕಗಳಿಗೆ ಕೆಲಸ ಮಾಡಲು ಹಚ್ಚಿದರು. ಹಾಗೆ ನನ್ನ ಮತ್ತು ಶಂಕರ್ ನಾಗ್ ಅವರ ನಂಟು ಬೆಳೆಯಿತು, ಬಲಿಯಿತು. ಅವರು ಮಾಡುತ್ತಿದ್ದ ಆ್ಯಕ್ಸಿಡೆಂಟ್ ಮತ್ತು ಮಾಲ್ಗುಡಿ ಡೇಸ್‌ ತರಹದ ಯೋಜನೆಗಳಲ್ಲಿ ಸಣ್ಣಪುಟ್ಟ ಕೆಲಸ ಮಾಡುವ ಅವಕಾಶ ದೊರಕಿತು. ಆಕ್ಸಿಡೆಂಟ್‌ ಸಿನಿಮಾದ ಚಿತ್ರಕಥಾ ರಚನೆಯ ಹಂತದಲ್ಲಿ ಶಂಕರ್‌ನಾಗ್‌, ವಸಂತ ಮೊಕಾಶಿ, ನರಸಿಂಹನ್‌, ಕಾಶಿ, ರಂಗಣ್ಣಿ ಮುಂತಾದ ಗೆಳೆಯರು ಆಡುತ್ತಿದ್ದ ಮಾತುಗಳನ್ನು ಅಕ್ಷರಿಸುವ ಕೆಲಸ ಮಾಡಿದ್ದೆ. ಅವು ನನಗೆ ಸಿನಿಮಾ ಕಲಿಕೆಯ ಆರಂಭಿಕ ಪಾಠಗಳಾದವು ಎನ್ನಬಹುದು. ಆದರೆ ಅದು ಕಲಿಕೆ ಎಂದು ತಿಳಿಯದ ಕಾಪಿ ರೈಟರ್‌ ಕೆಲಸ ಆಗಿತ್ತು. ಅದಾದ ನಂತರ ಮಾಲ್ಗುಡಿ ಡೇಸ್‌ ಹಿಂದಿಯ ಧಾರಾವಾಹಿ ಶುರುವಾಯಿತು. ನನಗೆ ಹಿಂದಿ ಬರುತ್ತಿರಲಿಲ್ಲ. ಹೀಗಾಗಿ ಆ ಧಾರಾವಾಹಿಯ ಚಿತ್ರೀಕರಣದ ಕೆಲವು ಕಂತುಗಳಲ್ಲಿ ಜಾನ್‌ ದೇವರಾಜ್‌ ಎಂಬ ಬಾಲ್ಯ ಗೆಳೆಯನ ಜೊತೆಗೆ ಕಲಾ ನಿರ್ದೇಶನದ ತಂಡದಲ್ಲಿ ಸಹಾಯಕ ಆಗಿ ಕೆಲಸ ಮಾಡಿದ್ದೆ. ಜೊತೆಗೆ ಮತ್ತೊಬ್ಬ ಬಾಲ್ಯ ಗೆಳೆಯ ಸುರೇಶ್‌ ಅರಸ್‌ ಈ ಧಾರಾವಾಹಿಯ ಸಂಕಲನಕಾರ ಆಗಿದ್ದರು. ಅವರ ಸಂಕಲನ ತಂಡದಲ್ಲಿಯೂ ಸಹಾಯಕನಾಗಿ ಕೆಲಸ ಮಾಡಿದ್ದೆ. ಇದೆಲ್ಲವೂ ನನ್ನ ಬಿಡುವಿನ ವೇಳೆಯಲ್ಲಿ ಮಾಡಿದ ಕೆಲಸಗಳಾಗಿದ್ದವು. ಆದರೆ ನನಗೇ ತಿಳಿಯದಂತೆ ನಾನು ಸಿನಿಮಾದ ಹಲವು ವಿಭಾಗಗಳಲ್ಲಿ ಕೆಲಸ ಮಾಡುವ ಅವಕಾಶ ಒದಗಿ ಬಂದಿತ್ತು. ಆ ಅನುಭವ ಇವತ್ತಿಗೂ ನನಗೆ ಸಹಾಯ ಮಾಡುತ್ತಿದೆ. ವಿಶೇಷವಾಗಿ ಶಂಕರ್‌ ನಾಗ್‌ ಅವರು ಕೆಲಸವನ್ನು ಯೋಜಿಸುತ್ತಿದ್ದ ರೀತಿ, ನಿರ್ಧಾರ ತೆಗೆದುಕೊಳ್ಳುವ ವೇಗ, ಎಲ್ಲರನ್ನೂ ಸಮಾನರೆಂದು ಭಾವಿಸಿ ಸಾಗುತ್ತಿದ್ದ ನಾಯಕತ್ವದ ಗುಣವು ನಾನು ಮಾಡುವ ಕೆಲಸಗಳಲ್ಲಿಯೂ ಇಳಿದು ಬಂದಿದೆ. ನಾನು ಕೆಲಸ ಮಾಡುವ ತಂಡದಲ್ಲಿ ಹೈರಾರ್ಕಿಯನ್ನು ಪಾಲಿಸದೆ ಕೆಲಸ ಮಾಡುವ ಅಭ್ಯಾಸ ಈವರೆಗೆ ಉಳಿದ ಬಂದಿದೆ.  

Continue reading ‘ಅಕ್ಷರ ಸಂಗಾತ ಮಾಸ ಪತ್ರಿಕೆಯು ಪ್ರಜಾವಾಣಿ ದಿನ ಪತ್ರಿಕೆಯ ಅಮೃತ ಮಹೋತ್ಸವದ ಸಂದರ್ಭಕ್ಕಾಗಿ ರಂಗಕರ್ಮಿ, ಚಿತ್ರ ತಯಾರಕ ಬಿ. ಸುರೇಶ ಅವರ ಜೊತೆಗೆ ನಡೆಸಿದ ಸಂವಾದ’

ಸಿನಿಮಾ ತಯಾರಕರ ತಲೆಯ ಮೇಲೆ ತೂಗಲಿರುವ ಹೊಸ ಕತ್ತಿ

“ಹಾಗಾದರೆ ನಾನೀಗ ದುಡ್ಡು ಹೂಡಿ ಬಿಡುಗಡೆ ಮಾಡುವ ಸಿನಿಮಾವು ಪ್ರದರ್ಶನ ಮಂದಿರದಲ್ಲಿ ಉಳಿಯುತ್ತದೆ ಎಂಬುದಕ್ಕೆ ಖಾತ್ರಿ ಕೊಡುವವರು ಯಾರು” ಎಂದು ಪ್ರಶ್ನೆ ಕೇಳಿದವರು ಮಹೇಶ್‌ ಮೆಹತಾ, ತಮಿಳು-ಮಲೆಯಾಳಿ ಚಿತ್ರಗಳ ನಿರ್ಮಾಪಕರು ಹಾಗೂ ವಿತರಕರು. ಈ ಪ್ರಶ್ನೆ ಅವರು ಕೇಳಿದ್ದು ಸಿಐಐ (ಸೆಂಟ್ರಲ್‌ ಕಾನ್‌ಫಿಡೆರೇಷನ್‌ ಆಫ್‌ ಇಂಡಿಯನ್‌ ಇಂಡಸ್ಟ್ರೀಸ್‌) ನ ಮಾಧ್ಯಮ ವಲಯದ ಸಭೆಯಲ್ಲಿ. ಈ ಪ್ರಶ್ನೆ ಬರುವವರೆಗೆ ಕೇವಲ ಅಭಿವ್ಯಕ್ತಿ ಸ್ವಾತಂತ್ರ್ಯದ ಹಿನ್ನೆಲೆಯಲ್ಲಿ ಸಿನಿಮಾಟೋಗ್ರಾಫ್‌ ಆಕ್ಟ್‌ಗೆ ಸಂಬಂಧಿಸಿದ ತಿದ್ದುಪಡಿ ಕುರಿತು ಮಾತಾಡುತ್ತಾ ಇದ್ದ ಎಲ್ಲರೂ ಹಲವು ನಿಮಿಷಗಳ ಕಾಲ ಮೌನವಾಗಿದ್ದು ಸುಳ್ಳಲ್ಲ. ಇಂತಹ ಪ್ರಶ್ನೆ ಎದುರಾಗಲು ಕಾರಣವಾಗಿದ್ದು, ೧೯೫೨ರ ಸಿನಿಮಾಟೋಗ್ರಾಫ್‌ ಕಾಯ್ದೆಯ ತಿದ್ದುಪಡಿಗಳನ್ನು ಮಾಡಿ, ಜನರ ಅಭಿಪ್ರಾಯ/ಭಿನ್ನಾಭಿಪ್ರಾಯ ಮಂಡಿಸಲು ಜುಲೈ ೫ನೇಯ ತಾರೀಖನ್ನು ಗೊತ್ತುಪಡಿಸಿದ ಒಕ್ಕೂಟ ಸರ್ಕಾರದ ಆದೇಶ.  

ಭಾರತದಲ್ಲಿ ಚಲಿಸುವ ಚಿತ್ರಗಳನ್ನು ನಿರ್ವಹಿಸಲು/ನಿಯಂತ್ರಿಸಲು ೧೯೫೨ರಲ್ಲಿಯೇ ಸಿನಿಮಾಟೋಗ್ರಾಫ್‌ ಆಕ್ಟ್‌ ಎಂಬುದು ಜಾರಿಗೆ ಬಂದಿತ್ತು. ಆ ಕಾಯಿದೆಯೂ ಈ ಹಿಂದೆ ಇದ್ದ ವಸಾಹತುಶಾಹಿ ಸರ್ಕಾರವು ಮಾಡಿದ್ದ ಕಾಯಿದೆಗಳಿಗೆ ಸಣ್ಣಪುಟ್ಟ ತಿದ್ದುಪಡಿ ಮಾಡಿ ಹೊಸ ಹೆಸರಲ್ಲಿ ಜಾರಿಗೆ ಬಂದಿತ್ತು. ಅದಾಗಿ ಅರವತ್ತು ವರ್ಷಗಳ ನಂತರ ಅಂದರೆ ೨೦೧೩ರಲ್ಲಿ ಮುಕುಂದ್‌ ಮುದ್ಗಲ್‌ ಅವರ ನೇತೃತ್ವದಲ್ಲಿ ಸಮಿತಿಯೊಂದನ್ನು ರಚಿಸಿ, ಸದರಿ ಕಾಯಿದೆಯನ್ನು ಕಾಲೋಚಿತಗೊಳಿಸಲು ಸಲಹೆಗಳನ್ನು ನೀಡಲು ಸೂಚಿಸಲಾಯಿತು. ನಂತರ ೨೦೧೬ರಲ್ಲಿ ಶ್ಯಾಮ್‌ಬೆನಗಲ್‌ ಅವರ ನೇತೃತ್ವದಲ್ಲಿ ಮತ್ತೊಂದು ಸಮಿತಿಯನ್ನು ರಚಿಸಿ ಸಲಹೆಗಳನ್ನು ಆಹ್ವಾನಿಸಿತ್ತು. ಸದರಿ ಸಮಿತಿಗಳು ೨೦೧೮ರಲ್ಲಿಯೇ ವರದಿಗಳನ್ನು ನೀಡಿತ್ತಾದರೂ ಆ ವರದಿಯ ಬಗ್ಗೆ ಗಮನ ಹರಿಸದೆ ಸರ್ಕಾರಗಳು ಸುಮ್ಮನಿದ್ದವು. ಈಗ ೨೦೨೧ರಲ್ಲಿ ದಿಢೀರನೆ ಆ ವರದಿಯಲ್ಲಿನ ಕೆಲವು ಸಲಹೆಗಳನ್ನು ಸ್ವೀಕರಿಸಿ, ಮತ್ತಷ್ಟು ಹೊಸ ವಿಚಾರಗಳನ್ನು ಸೇರಿಸಿ “ಸಿನಿಮಾಟೋಗ್ರಾಫ್‌ ಆಕ್ಟ್‌ ೨೦೨೧” ಎಂಬ ತಿದ್ದುಪಡಿಯನ್ನು ಸಾರ್ವಜನಿಕರ ಮತ್ತು ಫಲಾನುಭವಿಗಳ ಸಲಹೆಗೆ ಎಂದು ಹೊರಡಿಸಲಾಗಿದೆ. ಅದಾಗಲೇ ಗೊತ್ಥಾಗಿರುವಂತೆ ಬರಲಿರುವ ಸಂಸತ್ತಿನ ಸಭೆಯಲ್ಲಿ ಈ ಕಾಯಿದೆ ಜಾರಿಗೆ ಬರಲಿದೆ.

ಕಾಯಿದೆಯಲ್ಲಿ ಏನಿದೆ

ಈ ತಿದ್ದುಪಡಿಯನ್ನು ಕುರಿತಂತೆ ಅದಾಗಲೇ ದೇಶಾದ್ಯಂತ ಎದ್ದಿರುವ ವಾದ, ವಿವಾದಗಳು ತಿಳಿದಿರುತ್ತವೆಯಾದರೂ, ಈ ಲೇಖನದ ಕಾರಣಕ್ಕಾಗಿ, ಸ್ಥೂಲವಾಗಿ ತಿದ್ದುಪಡಿಗಳಲ್ಲಿನ ಕೆಲವು ಅಂಶಗಳನ್ನು ತಿಳಿಯೋಣ.

೧. ಸಿನಿಮಾಟೋಗ್ರಾಫ್‌ ಕಾಯಿದೆ ಸೆಕ್ಷನ್‌ (೬)ರ ಸೆಕ್ಷನ್‌ ಒಂದನ್ನು ಸಂಪೂರ್ಣವಾಗಿ ತೆಗೆದುಹಾಕುವುದು.

೨.‌ ಸೆಕ್ಷನ್ (೬)ರ ಉಪವಿಭಾಗಕ್ಕೆ ಹೊಸ ವಿವರ ಸೇರಿಸಿ, ಕಾಯಿದೆಯ ಸೆಕ್ಷನ್‌ ೫೮ (೧)ರ ಉಲ್ಲಂಘನೆಯನ್ನು ತಡೆಯಲು ಸಿಬಿಎಫ್‌ಸಿಯು ನೀಡಿದ ಪ್ರಮಾಣಪತ್ರವನ್ನು ಹಿಂಪಡೆಯುವ ಅಧಿಕಾರವು ಸರ್ಕಾರಕ್ಕೆ ಇರುವಂತೆ ಮಾಡುವುದು ಅಥವಾ ಸಿಬಿಎಫ್‌ಸಿಯ ಅಧ್ಯಕ್ಷರ ಮೂಲಕ ಸದರಿ ಪ್ರಮಾಣೀಕರಣವನ್ನು ಮರುಪರಿಶೀಲಿಸಲು ಸೂಚಿಸುವುದು.

೩. ಪೈರಸಿ ತಡೆಗಟ್ಟಲು ಕಾನೂನುಬಾಹಿರವಾಗಿ ಯಾವುದೇ ಚಿತ್ರದ ನಕಲು ಮಾಡುವುದನ್ನು ಅಪರಾಧ ಎಂದು ಗುರುತಿಸುವುದು ಮತ್ತು ಆ ಬಗೆಯ ನಕಲುಗಳನ್ನು ಹಂಚುವ, ಪ್ರಸಾರ ಮಾಡುವವರಿಗೆ ದಂಡ ವಿಧಿಸುವುದು.

ಮೇಲ್ನೋಟಕ್ಕೆ ಈ ತಿದ್ದುಪಡಿಗಳು ಅಡ್ಡಿಇಲ್ಲ ಎನಿಸಿದರೂ ಇದರೊಳಗಡೆ ಯಾವುದೇ ಬಿಡುಗಡೆ ಆದ ಸಿನಿಮಾವನ್ನು, ಯಾವುದೇ ವ್ಯಕ್ತಿ/ಸಂಸ್ಥೆಯ ದೂರು ಬಂದಲ್ಲಿ, ಅಂತಹ ಸಿನಿಮಾದ ಸಿಬಿಎಫ್‌ಸಿ ಪ್ರಮಾಣ ಪತ್ರವನ್ನು ಹಿಂಪಡೆವ ಅಥವಾ ಮರುಪರಿಶೀಲಿಸುವ ಅಧಿಕಾರವನ್ನು ಒಕ್ಕೂಟ ಸರ್ಕಾರ ಪಡೆಯಲಿದೆ. ಇದು ಅಪಾಯ. ಮೊದಲಿಗೆ ಸರ್ಕಾರವೇ ನೇಮಿಸಿಸ ಚಲನಚಿತ್ರ ಪ್ರಮಾಣೀಕರಣ ಮಂಡಳಿ ಎಂಬ ಸ್ವಾಯತ್ತ ಸಂಸ್ಥೆಯ ನೆತ್ತಿಯ ಮೇಲೆ ಸ್ವತಃ ಸರ್ಕಾರವೇ ಕೂರುವುದು ಒಂದು ವಿಷಯವಾದರೆ, ಸಿನಿಮಾ ಒಂದರ ಬಗ್ಗೆ ಯಾರದ್ದೇ ಕ್ಲುಲಕ ಭಿನ್ನಾಭಿಪ್ರಾಯ ಇದ್ದರೂ ಸರ್ಕಾರ ಆ ಸಿನಿಮಾಕ್ಕೆ ನೀಡಿದ ಸರಾವಜನಿಕ ಪ್ರದರ್ಶನ ಪ್ರಮಾಣ ಪತ್ರವನ್ನು ಹಿಂಪಡೆಯುವ ಅಥವಾ ಮರುಪರಿಶೀಲಿಸುವ ಅಧಿಕಾರ ಪಡೆಯುತ್ತಿದೆ ಎಂಬುದು ನೇರವಾಗಿ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಒದಗಿದ ಹೊಸ ಆತಂಕವೇ ಆಗಿದೆ.

ಈ ಹಿಂದೆ “ಪದ್ಮಾವತ್”‌ ತರಹದ ಚಿತ್ರಗಳನ್ನು ಕುರಿತು ಬಂದಂತಹ ಒಂದು ಗುಂಪಿನ ವಿರೋಧವನ್ನೇ ಗಮನಿಸಿ. ಆ ಸಿನಿಮಾವನ್ನು ಸ್ವತಃ ನೋಡದೆ ಸಿನಿಮಾ ಬಿಡುಗಡೆಗೆ ಅಡ್ಡಿ ಉಂಟು ಮಾಡಲಾಗಿತ್ತು. ಆದರೆ ಆ ಸಿನಿಮಾದಲ್ಲಿ ಸದರಿ ವಿರೋಧಿಗಳು ತಿಳಿಸಿದ್ದ ಯಾವ ವಿವರಗಳೂ ಇರಲಿಲ್ಲ. ಇದರಿಂದಾಗಿ ಆ ಸಿನಿಮಾದ ವ್ಯಾಪಾರದಲ್ಲಿ ಅದೆಷ್ಟು ದೊಡ್ಡ ನಷ್ಟವಾಯಿತು ಎಂಬುದು ಅಂತರ್ಜಾಲ ತಾಣಗಳಲ್ಲಿ ಎಲ್ಲರಿಗೂ ಸಿಗುತ್ತದೆ. ಇಲ್ಲಿ ಪ್ರದರ್ಶನ ಪ್ರಮಾಣ ಪಡೆದು ಸಿನಿಮಾ ಬಿಡುಗಡೆ ಮಾಡಲಾಗಿದೆ ಎಂಬ ರಕ್ಷಣೆಯಾದರೂ ಆ ಸಿನಿಮಾ ತಯಾರಕರಿಗೆ ಇತ್ತು. ಈಗ ಆ ರಕ್ಷಣೆಯ ನೆತ್ತಿಯ ಮೇಲೆ ಸ್ವತಃ ಸರ್ಕಾರವೇ ಬಂದು ಕೂರಲು ಹೊರಟಿದೆ.  ಬಿಡುಗಡೆಯಾದ ಸಿನಿಮಾ ಒಂದು ಪ್ರದರ್ಶನ ಮಂದಿರದಲ್ಲಿ ಇರುವಾಗಲೇ ಸರ್ಕಾರವೂ ಆ ಸಿನಿಮಾವನ್ನು ಹಿಂಪಡೆಯಬಹುದು ಎಂದಾದರೆ ಆಗ ಕೇವಲ ಅಭಿವ್ಯಕ್ತಿ ಸ್ವಾತಂತ್ರ್ಯದ ಪ್ರಶ್ನೆಯಲ್ಲ ಜೊತೆಗೆ ಸಿನಿಮಾ ತಯಾರಕನಿಗೆ ಹೂಡಿದ ಹಣಕ್ಕೆ ಸಿಗುವ ರಕ್ಷಣೆಯಾದರೂ ಏನು ಎಂಬ ಪ್ರಶ್ನೆ ಬರುತ್ತದೆ. ಕೋಟ್ಯಾಂತರ ರೂಪಾಯಿ ಹಣ ಹೂಡಿ, ಸಿನಿಮಾ ತಯಾರಿಸಿ, ವಿತರಕರು/ಪ್ರದರ್ಶಕರಿಂದ ಮುಂಗಡ ಹಣ ಪಡೆದು ಸಿನಿಮಾ ಬಿಡುಗಡೆ ಮಾಡುವ ತಯಾರಕನು ಈಗ ಸಿಬಿಎಫ್‌ಸಿಯ ಪ್ರಮಾಣ ಪತ್ರ ಸಿಕ್ಕಿದೊಡನೆ ಬಿಡುಗಡೆ ಮಾಡಬೇಕು ಅಥವಾ ಸಾರ್ವಜನಿಕರು ಯಾರೂ ದೂರು ಸಲ್ಲಿಸದಿರಲಿ ಎಂದು ಪ್ರಾರ್ಥನೆ ಮಾಡುತ್ತಾ ಕೂರಬೇಕೋ? ಹಾಗೆಯೇ ಗಮನಿಸಿದರೆ ಕಳೆದ ಏಳು ವರ್ಷಗಳಲ್ಲಿ ಇಡೀ ದೇಶವೇ ಹಲವು ಬಣಗಳಾಗಿ ಒಡೆದಿದೆ. ಹೀಗಾಗಿ ಒಂದು ಬಣದವರು ತಯಾರಿಸಿದ ಸಿನಿಮಾ ಕುರಿತು ಮತ್ತೊಂದು ಬಣದವರು ವಿರೋಧ ಮಾಡುತ್ತಲೇ ಇರುತ್ತಾರೆ. ಇದರ ಜೊತೆಗೆ ಅಂತಹ ಭಿನ್ನಾಭಿಪ್ರಾಯ ಆಧರಿಸಿ ಸರ್ಕಾರವೂ ಸಹ ಬಿಡುಗಡೆ ಆದ ಸಿನಿಮಾ ಹಿಂಪಡೆಯುವ ಅಧಿಕಾರ ಪಡೆದರೆ ಏನಾಗಬಹುದು ಎಂದು ಊಹಿಸಲು ಭಾರೀ ಕಲ್ಪನೆ ಏನೂ ಬೇಕಾಗಿಲ್ಲ. ಈ ಹಿಂದೆ ವಿಶ್ವರೂಪಂ ಸಿನಿಮಾಕ್ಕೆ ಬಂದ ವಿರೋಧಗಳು, ಈಚೆಗೆ ಪೊಗರು ಎಂಬ ಸಿನಿಮಾಕ್ಕೆ ಒಂದು ಜಾತಿಯ ಜನ ವ್ಯಕ್ತಪಡಿಸಿದ ವಿರೋಧಗಳು ಆಯಾ ಸಿನಿಮಾಗಳ ವ್ಯಾಪಾರಕ್ಕೆ ಮಾಡಿದ ಹಾನಿ ದೊಡ್ಡದು. ಪೊಗರು ಸಿನಿಮಾದವರಂತೂ ತಮ್ಮ ಸಿನಿಮಾವನ್ನು ಮರುಸಂಕಲಿಸಿ ಬಿಡುಗಡೆ ಮಾಡಿದ್ದನ್ನು ಇಲ್ಲಿ ನೆನಪಿಸಿಕೊಳ್ಳಬಹುದು. ಸೆನ್ಸಾರ್‌ ಪ್ರಮಾಣ ಪತ್ರವಿದ್ದೂ ತೊಂದರೆ ಅನುಭವಿಸಿದವರ ಪಾಡು ಹೀಗಿರುವಾಗ ಯಾರದ್ದೇ ದೂರು ಬಂದರು ಸಾರ್ವಜನಿಕ ಪ್ರದರ್ಶನದಿಂದ ಸಿನಿಮಾ ಹಿಂತೆಗೆದುಕೊಳ್ಳುವ ಅಧಿಕಾರ ಸರ್ಕಾರದ ಕೈಗೆ ಬಂದರೆ…?

ಈ ನಿಲುವು ಮೂಲತಃ ಅಭಿವ್ಯಕ್ತಿ ಸ್ವಾತಂತ್ರ್ಯದ ಮೇಲಿನ ಹೊಡೆತವಾದರೂ ಅದಕ್ಕಿಂತ ದೊಡ್ಡ ಆಘಾತವಾಗುವುದು ಮೀಡಿಯಾ ಮತ್ತು ಮನರಂಜನೆಯ ಮಾಧ್ಯಮಗಳಿಗೆ. ಇಲ್ಲಿ ತಾರೆಯರನ್ನು ಇಟ್ಟುಕೊಂಡು ಕೋಟ್ಯಾಂತರ ಹಣ ಸುರಿದು ಸಿನಿಮಾ ಅಥವಾ ಯಾವುದಾದರೂ ರಿಯಾಲಿಟಿ ಷೋ ತಯಾರಿಸಿದವರಿಗೆ, ಅದು ಪ್ರದರ್ಶನವಾಗಿ ಹೂಡಿದ ಹಣ ಸಂಪೂರ್ಣ ಬರುವುದೇ ಖಾತ್ರಿ ಇಲ್ಲ ಎಂಬ ವ್ಯಾಪಾರದಲ್ಲಿ ತೊಡಗಿರುವವರಿಗೆ, ಅವರ ಕೆಲಸ ಜನರ ಹತ್ತಿರಕ್ಕೆ ಹೋಗಲು ಆರಂಭಿಸಿದಾಗಲೇ ಸರ್ಕಾರವು ಅದನ್ನು ಹಿಂಪಡೆಯುವಂತಾದರೆ ಆಗುವ ನಷ್ಟ ಎಂತಹದು ಎಂದು ಯೋಚಿಸಿ. ಕನ್ನಡದ ಒಬ್ಬ ಸ್ಟಾರ್‌ ನಟರು ಇರುವ ಸಿನಿಮಾ ಎಂದರೆ ಅದು ಬಿಡುಗಡೆಗೆ ಕೆಲವು ದಿನ ಮುಂಚಿತವಷ್ಟೇ ವ್ಯಾಪಾರಗಳು ನಿಕ್ಕಿಯಾಗಿ, ನಾನ್ನೂರರಿಂದ ಆರುನೂರು ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗುತ್ತದೆ. ನಂತರ ಡಿಜಿಟಲ್‌ ವೇದಿಕೆಗಳಿಗೆ ಹಾಗೂ ಸ್ಯಾಟಿಲೈಟ್‌ ಟಿವಿ ವಾಹಿನಿಗಳಿಗೆ ಒಪ್ಪಂದ ಮಾಡಿಕೊಂಡು ಬಿಡುಗಡೆ ಆಗುತ್ತದೆ. ಈ ಎಲ್ಲಾ ಪ್ರಕ್ರಿಯೆಗಳು ಸಿನಿಮಾ ಬಿಡುಗಡೆಯ ಒಂದೆರಡು ದಿನ ಮುಂಚಿತವಾಗಿ ಒಪ್ಪಂದವಾಗಿ ವ್ಯವಹಾರ ನಡೆಯುತ್ತಾ ಇರುತ್ತದೆ. ಇಂತಹದೊಂದ ವ್ಯಾಪಾರಕ್ಕೆ “ಸರ್ಕಾರದಿಂದ ಸದರಿ ಸಿನಿಮಾದ ಹಿಂತೆಗೆತ” ಎಂಬ ಕಾಯಿದೆ ಜಾರಿಯಾದರೆ ಆಗಬಹುದಾದ ಸಂಕಟ ಯೋಚಿಸಿ. ಅದಾಗಲೇ ಒಪ್ಪಂದ ಮಾಡಿಕೊಳ್ಳುವಾಗ ಶೇಕಡ ಐವತ್ತರಷ್ಟು ಹಣ ನೀಡುವ ವ್ಯಾಪಾರಿಗಳು, ಈಗ ಶೇಕಡ ಹತ್ತು ಹದಿನೈದರಷ್ಟು ಮಾತ್ರ ಮುಂಗಡ ನೀಡಬಹುದು. ಉಳಿದ ಹಣ ಅದೇ ವ್ಯಾಪಾರಿಗಳಿಂದ ಸಿನಿಮಾ ಬಿಡುಗಡೆಯ ನಂತರ ಪಡೆಯುವುದು ಮಹಾ ದೊಡ್ಡ ಸರ್ಕಸ್ಸು ಆಗಿಬಿಡಬಹುದು. ಕರಾರುಗಳಲ್ಲಿ ಈ ʻಹಿಂತೆಗೆತʼದ ವಿವರವನ್ನು ಸಹ ಸೇರಿಸಿಕೊಂಡು, ಅದಕ್ಕೆ ಸಿನಿಮಾ ನಿರ್ಮಾಪಕನೇ ಜವಾಬ್ದಾರಿ ಎಂದು ಷರಾ ಬರೆಯಬೇಕಾಗಬಹುದು. ಆಕಸ್ಮಿಕವಾಗಿ ಯಾವುದಾದರೂ ಸಿನಿಮಾ ತಯಾರಕ ಬಿಡುಗಡೆಗೆ ಮುನ್ನ ಶೇಕಡ ನೂರು ಹಣ ಪಡೆದಿದ್ದು, ಅಂತಹ ಸಿನಿಮಾಕ್ಕೆ ಈ ʻಹಿಂತೆಗೆತʼದ ಹೊಡೆತ ಬಿದ್ದರೆ ಆ ನಿರ್ಮಾಪಕನ ಮೇಲೆ ಬೀಳುವ ಹೊರೆ ಎಂತಹದು ಎಂದು ಯೋಚಿಸಿ. ಇಂತಹ ಸ್ಥಿತಿ ಬಂದರೆ ಯಾವುದೇ ನಿರ್ಮಾಪಕನಾದರೂ ಅದ್ಯಾಕೆ ಸಿನಿಮಾ ಅಥವಾ ಇನ್ಯಾವುದೇ ಷೋ ಮಾಡಲು ಹಣ ಹೂಡಲು ಹಿಂಜರಿಯುವುದು ಸಹಜ. ಹಾಗಾಗಿ ಈ ಲೇಖನದ ಆರಂಭದಲ್ಲಿ ನಾನು ತಿಳಿಸಿದ ಮೆಹತಾ ಅವರ ಹೇಳಿಕೆ ಬಹುಮುಖ್ಯವಾದುದು.

ಪೈರಸಿ ಕಾಯಿದೆ ಎಂಬ ಬೇಕಾದ ಹಲ್ಲುಗಳಿಲ್ಲದ ಕಾಯಿದೆ

ಇನ್ನು ಇದೇ ಕಾಯಿದೆಯಲ್ಲಿ ಇರುವ ಪೈರಸಿಯ ವಿಷಯ ಗಮನಿಸಿ. ಅಲ್ಲಿ ಪೈರಸಿ ಮಾಡುವವರಿಗೆ ಶಿಕ್ಷೆ, ದಂಡ ವಿಧಿಸಲಾಗಿದೆ. ಆದರೆ ಈಗ ಸಿನಿಮಾಗಳು ಅಥವಾ ಟಿವಿ ಸೀರೀಸ್‌ಗಳು ಯಾವುದೋ ಸಿನಿಮಾ ಮಂದಿರದಲ್ಲಿ ನಕಲಾಗುತ್ತಿಲ್ಲ. ಅದು ಯಾವುದೋ ಮನೆಯಲ್ಲಿ, ಯಾವುದೋ ಕಂಪ್ಯೂಟರಿನಲ್ಲಿ ನಕಲಾಗುತ್ತವೆ. ಕ್ಲೌಡ್‌ ಸಾಧನ ಬಳಸಿ ಸಿನಿಮಾಗಳನ್ನು ಪ್ರಸಾರ ಮಾಡುವ ವ್ಯವಸ್ಥೆ ಬಂದಿರುವಾಗ ಆ ಕ್ಲೌಡ್‌ ಎಂಬ ಮಾಹಿತಿಗಳ ಕಣಜಕ್ಕೆ ಖನ್ನ ಹಾಕುವವರು ಅತಿ ದೊಡ್ಡ ಸಂಖ್ಯೆಯಲ್ಲಿ ಇದ್ದಾರೆ. ಹೀಗಾಗಿ ಟೆಲಿಗ್ರಾಮ್‌ ತರಹದ ಆಪ್‌ಗಳಲ್ಲಿ ಬಹುತೇಕ ಸಿನಿಮಾಗಳು ಮತ್ತು ಟಿವಿ ಸೀರೀಸ್‌ಗಳು ಬಿಡುಗಡೆಯಾದ ಮರುಕ್ಷಣವೇ ದೊರೆಯುತ್ತದೆ. ಇವುಗಳನ್ನು ತಡೆಯುವ ವಿವರ ಈ ಪೈರಸಿ ಕಾಯಿದೆಯಲ್ಲಿ ಸೇರಿಲ್ಲ. ಅದು ಸೇರದೆ ಈಗಿರುವಂತೆ ಕಾಯಿದೆ ಜಾರಿಗೆ ಬಂದರೆ ನಿಜವಾಗಿ ಕಳ್ಳತನ ಮಾಡಿದವನು ಯಾವುದೋ ದೇಶದಲ್ಲಿ ಆರಾಮಾಗಿ ಇರುತ್ತಾನೆ. ಅದನ್ನು ಹಂಚುವ ಪ್ರಯತ್ನ ಮಾಡಿದ ನಮ್ಮೂರಿನ ಹುಂಬ ಹುಡುಗರು ಜೈಲು ಸೇರುತ್ತಾರೆ. ʻಹಣ್ಣು ತಿಂದವ ತಪ್ಪಿಸಿಕೊಂಡ, ಸಿಪ್ಪೆ ತಿಂದವ ಸಿಕ್ಕಿಬಿದ್ದʼ ಎಂಬ ಗಾದೆ ಮಾತಿನಂತಾಗುತ್ತದೆ.

ಮತ್ತೆರಡು ಹೊಸ ಕಾಯಿದೆ, ಕಟ್ಟಳೆಗಳು

ಇದಲ್ಲದೆ ಈಗಿನ ಒಕ್ಕೂಟ ಸರ್ಕಾರವು ಅದಾಗಲೇ “ಡಿಜಿಟಲ್‌ ಮೀಡಿಯಾ ನಿಯಂತ್ರಣ ಕಾಯಿದೆ” ಎಂಬುದನ್ನು ಜಾರಿಗೆ ತಂದಿದೆ. ಜೊತೆಗೆ ಮೂಲದಲ್ಲಿ ತೆರಿಗೆ ಕಡಿತ ಮಾಡುವ (ಟಿಡಿಎಸ್)‌ ಕಾನೂನಿಗೆ ಶೇಕಡ ೨ರಷ್ಟು ಇದ್ದ ಮಿತಿಯನ್ನು ಶೇಕಡ ೧೦ಕ್ಕೆ ಏರಿಸಿದೆ. ಅದರಿಂದಾಗುವ ಸಮಸ್ಯೆಗಳೇನು ಎಂಬುದನ್ನು ಸಹ ಈ ಲೇಖನದಲ್ಲಿ ಚರ್ಚಿಸಲು ಪ್ರಯತ್ನಿಸುವೆ.

ಡಿಜಿಟಲ್‌ ಮೀಡಿಯಾ ಎಂಬುದು ಕಳೆದ ಒಂದು ದಶಕದಿಂದ ಪರಿಚಿತವಾಗಿ ಈಗ ಹೆಚ್ಚುಪ್ರಖರವಾಗಿ ಬಳಕೆಯಾಗುತ್ತಿರುವ ಮಾಧ್ಯಮ. ಬಹುತೇಕ ಇತರ ಮಾಧ್ಯಮಗಳು ಸರ್ಕಾರಿ ಕೃಪಪೋಷಿತ ಎಂಬಂತೆ ಕಾಣುತ್ತಿರುವ ಹೊತ್ತಲ್ಲಿ ಯಾವುದೇ ಸುದ್ದಿಯ ನಿಖರ ಮಾಹಿತಿ ಮತ್ತು ವಿಶ್ಲೇಷಣೆ ದೊರೆಯುತ್ತಾ ಇರುವುದು ಡಿಜಿಟಲ್‌ ಮಾಧ್ಯಮದಲ್ಲಿ ಮಾತ್ರ. ಆದರೆ ಈ ಡಿಜಿಟಲ್‌ ಮಾಧ್ಯಮಗಳನ್ನು ನಿಯಂತ್ರಿಸಲು ಒಕ್ಕೂಟ ಸರ್ಕಾರ ಹೊಸ ಕಾಯಿದೆ ತಂದಿದೆ. ದೇಶದ ಘನತೆಗೆ ಏಕತೆಗೆ ಧಕ್ಕೆ ಬರುವ ಯಾವುದೇ ವಿವರ ಪ್ರಕಟಿಸುವ ಮಾಧ್ಯಮದವನ್ನು ತಡೆಯುವ ಪರಮಾಧಿಕಾರ ಸರ್ಕಾರಕ್ಕೆ ದೊರಕಿದೆ. ಸಂಸತ್ತಿನಲ್ಲಿ ಆಗಲಿ, ಸಾರ್ವಾಜನಿಕ ವೇದಿಕೆಗಳಲ್ಲಿ ಆಗಲಿ ಚರ್ಚಿಸದೆ ಜಾರಿಗೆ ಬರುವ ಇಂತಹ ಕಾಯಿದೆಗಳು ಜನರಿಗೆ ಅಧಿಕೃತ ಮಾಹಿತಿ ಪಡೆಯಲು ಇರುವ ಎಲ್ಲಾ ಮಾರ್ಗಗಳನ್ನು ಮುಚ್ಚುವ ಪ್ರಯತ್ನವಾಗಿಯೇ ಕಾಣುತ್ತಿದೆ. ಇದೇ ಡಿಜಿಟಲ್‌ ಮೀಡಿಯಾ ನಿಯಂತ್ರಣ ಕಾಯಿದೆ ಬಳಸಿ ಒಟಿಟಿಗಳಲ್ಲಿ ಬರುವ ಸರಣಿಗಳನ್ನು, ಸಿನಿಮಾಗಳನ್ನು ಸಹ ತನ್ನ ನಿಯಂತ್ರಣದಲ್ಲಿ ಇರಿಸಿಕೊಳ್ಳುವ ಪ್ರಯತ್ನ ಆಗುತ್ತಿದೆ. ಇದು ಅಭಿವ್ಯಕ್ತಿ ಸ್ವಾತಂತ್ರ್ಯದ ಮೇಲಿನ ಪ್ರಹಾರವಷ್ಟೇ ಅಲ್ಲ ಸಾರ್ವಜನಿಕರ ಮಾಹಿತಿ ಮತ್ತು ಮನರಂಜನಾ ಹಕ್ಕಿನ ಮೇಲೂ ನಿಯಂತ್ರಣ ಸಾಧಿಸುವ ಯತ್ನವಾಗಿದೆ.

ಇನ್ನೂ ಟಿಡಿಎಸ್‌ ಸಂಗ್ರಹ ಕುರಿತ ನಿಯಮಗಳಲ್ಲಿ ಆಗಿರುವ ಬದಲಾವಣೆ ಗಮನಿಸಿ. ಈ ವರೆಗೆ ಇದ್ದ ನಿಯಮದಂತೆ ಒಪ್ಪಂದ (ಕಾಂಟ್ರಕ್ಚುಯಲ್‌ ಆಬ್ಲಿಗೇಷನ್)‌ ಕರಾರಿನ ಪ್ರಕಾರ ನಡೆಯುವ ಕೆಲಸಗಳಿಗೆ ಯಾವುದೇ ವ್ಯಕ್ತಿ/ಕಂಪೆನಿಯು ಶೇಕಡ ೨ರಂತೆ ಟಿಡಿಎಸ್‌ ಮುರಿದುಕೊಳ್ಳುವ ವ್ಯವಸ್ಥೆ ಇತ್ತು. ಈಗ ಆ ಮಿತಿಯನ್ನು ಶೇಕಡ ೧೦ಕ್ಕೆ ಏರಿಸಲಾಗಿದೆ. ಜೊತೆಗೆ ಮತ್ತೊಂದು ಕರಾರು ಸೇರಿಸಲಾಗಿದೆ, ಹಣ ಸ್ವೀಕರಿಸವ ವ್ಯಕ್ತಿಯು ಹಿಂದಿನ ಲೆಕ್ಕ ವರ್ಷದ ಆದಾಯ ತೆರಿಗೆ ಸಲ್ಲಿಗೆ ವಿವರ ನೀಡದೆ ಇದ್ದಲ್ಲಿ ಶೇಕಡ ೨೦ರಂತೆ ಟಿಡಿಎಸ್‌ ಮುರಿದುಕೊಳ್ಳಲು ಸೂಚಿಸಲಾಗಿದೆ. ಇದರಿಂದ ಸಿನಿಮಾ ಮತ್ತು ಟೆಲಿವಿಷನ್‌ ವ್ಯಾಪಾರದಲ್ಲಿ ಆಗುವ ತೊಂದರೆಗಳು ಅಪಾರ. ಸಿನಿಮಾ ತಯಾರಿಕೆಯಲ್ಲಿ ಈವರೆಗೆ ಕ್ಯಾಮೆರಾ, ಇನ್ನಿತರ ಸಲಕರಣೆ/ಸಾಮಗ್ರಿಗಳನ್ನು ಒದಗಿಸುತ್ತಾ ಇದ್ದವರಿಗೆ ಸಿನಿಮಾ ತಯಾರಕ ಶೇಕಡ ೨ರ ಮಿತಿಯಲ್ಲಿ ಟಿಡಿಎಸ್‌ ಮುರಿಯುವ ಬದಲಿಗೆ ಶೇಕಡ ೧೦ರಲ್ಲಿ ಮುರಿದುಕೊಳ್ಳುವುದು ಮತ್ತು ಸಾಮಗ್ರಿ ನೀಡುವಾಗ ಹಿಂದಿನ ಲೆಕ್ಕ ವರ್ಷದ ಆದಾಯ ತೆರಿಗೆ ಸಲ್ಲಿಕೆ ವಿವರ ನೀಡದೆ ಇದ್ದಲ್ಲಿ ಶೇಕಡ ೨೦ರಷ್ಟು ಟಿಡಿಎಸ್‌ ಮುರಿದುಕೊಳ್ಳುವುದು ಆರಂಭವಾಗುತ್ತದೆ. ಇದು ಸಿನಿಮಾ ತಯಾರಿಕೆ ಮಾಡಲು ಹೊರಟ ನಿರ್ಮಾಪಕನಿಗೆ ಹೊಸ ತಲೆನೋವೇ ಸರಿ. ಆತ ಹಣ ಕೊಡುವ ಪ್ರತಿಯೊಬ್ಬರ ಬಳಿ ಹಿಂದಿನ ಲೆಕ್ಕ ವರ್ಷದ ಆದಾಯ ತೆರಿಗೆ ಸಲ್ಲಿಕೆ ವಿವರ ಕೊಡಿ ಎನ್ನಬೇಕು. ಅದನ್ನವರು ಕೊಟ್ಟರೆ ಸರಿ. ಇಲ್ಲವಾದರೆ ಶೇಕಡ ೨೦ರ ತೆರಿಗೆ ಮುರಿದುಕೊಂಡದ್ದಕ್ಕೆ ಆ ಹಣ ಪಡೆಯುವವರ ಜೊತೆಗೆ ಆಗುವ ವಾಗ್ವಾದಕ್ಕೆ ಸಿದ್ಧವಾಗಬೇಕು. ಒಂದು ದೊಡ್ಡ ತಾರೆಯ ಸಿನಿಮಾದಲ್ಲಿ ಈ ಬಗೆಯಲ್ಲಿ ಟಿಡಿಎಸ್‌ ಮೂಲಕ ಹಣ ಪಡೆಯುವವರ ಸಂಖ್ಯೆ ಅದೆಷ್ಟು ದೊಡ್ಡದು ಎಂದು ಗೊತ್ತಿರುವವರಿಗೆ ಸಿನಿಮಾ ತಯಾರಕನಿಗೆ ಎದುರಾಗಿರುವ ಸಮಸ್ಯೆ ಎಂತಹದು ಎಂದು ತಿಳಿದೀತು. ಇನ್ನು ಕ್ಯಾಮೆರಾ, ಮುಂತಾದ ಸಿನಿಮಾ ತಯಾರಿಕೆಗೆ ಬೇಕಾದ ಯಂತ್ರಗಳನ್ನು ಕೊಂಡು ಬಾಡಿಗೆಗೆ ನೀಡುವವನಿಗೆ, ಹಾಕಿದ ಬಂಡವಾಳ ಹಿಂದಿರುಗುವುದು ಎಷ್ಟೋ ವರ್ಷಗಳಾದೀತು. ಈಗ ಆ ಹಣ ಸಂಗ್ರಹಕ್ಕೆ ಈ ಟಿಡಿಎಸ್‌ ಎಂಬುದು ಶೇಕಡ ೧೦ ಅಥವಾ ೨೦ರಂತೆ ಕಡಿತವಾದರೆ ಆ ವ್ಯಾಪಾರಿಯು ಹೂಡಇದ ಹಣ ಹಿಂಪಡೆಯುವುದಕ್ಕೆ ಮತ್ತಷ್ಟು ವರ್ಷಗಳು ಹೆಚ್ಚಾಗುತ್ತವೆ ಅಷ್ಟೇ. ಇನ್ನು ಟೆಲಿವಿಷನ್‌ ಲೋಕದಲ್ಲಿ ಸಹ ಕಲಾವಿದರು, ಕಾರ್ಮಿಕರು ಈ ಶೇಕಡ ೧೦ರ ಟಿಡಿಎಸ್‌ ಕಡಿತವಾಗದಗಲೇ ಗೊಣಗುತ್ತಾರೆ. ಅವರೆಲ್ಲರೂ ಹಿಂದಿನ ಆದಾಯ ತೆರಿಗೆ ವಿವರ ಸಲ್ಲಿಸದೆ ಹೋದರೆ ಟಿಡಿಎಸ್‌ ಕಡಿತ ಶಖಡ ೨೦ ಎಂದಾದರೆ ಟಿವಿ ಕಾರ್ಯಕ್ರಮ ತಯಾರಕರ ಕಚೇರಿಯ ಮುಂದೆ ರಣರಂಪದ ಜಗಳಗಳು ಆಗುವುದು ಖಚಿತ. ಇನ್ನೂ ಟೆಲಿವಿಷನ್‌ ವಾಹಿನಿಯವರು ಧಾರಾವಾಹಿಗಳ ನಿರ್ಮಾಪಕರಿಗೆ (ರಾಯಲ್ಟಿ ಕಾರ್ಯಕ್ರಮ ಮಾಡುವವರಿಗೆ) ಈಗ ಟಿಡಿಎಸ್‌ ಎಂದು ಶೇಕಡ ೨ರಷ್ಟು ಹಣ ಕಡಿತಗೊಳಿಸಿ ಕೊಡುತ್ತಾ ಇದ್ದಾರೆ. ಅದೂ ಸಹ ಶೇಕಡ ೧೦ಕ್ಕೆ ಏರುತ್ತದೆ. ಇಲ್ಲಿರುವ ಸಂಕಟ ಏನೆಂದರೆ ಕಾರ್ಯಕ್ರಮ ಒಂದರ ತಯಾರಿಕೆಗೆ ಬೇಕಾದ ಒಟ್ಟು ಹಣದಲ್ಲಿ ಶೇಕಡ ೯೦ರಷ್ಟು ಹಣವನ್ನೇ ವಾಹಿನಿಯವರು ನೀಡುವುದು. ಇನ್ನು ಶೇಕಡ ಹತ್ತರಷ್ಟು ನಷ್ಟ ಮುಂಚಿತವಾಗಿಯೇ ಖಚಿತ. ಅದನ್ನು ತುಂಬಿಕೊಳ್ಳುವುದು ಟಿವಿ ಕಾರ್ಯಕ್ರಮ ತಯಾರಕ ತನ್ನ ಕಾರ್ಯಕ್ರಮವು ನೂರಿನ್ನೂರಕ್ಕಿಂತ ಹೆಚ್ಚು ಸಂಖ್ಯೆಯಲ್ಲಿ ಬಂದಾಗ ಮಾತ್ರ ಸಾಧ್ಯ. ಇದರ ಜೊತೆಗೆ ಟಿಡಿಎಸ್‌ ಕಡಿತದ ಲೆಕ್ಕವೂ ಕೂಡಿದರೆ ಆತನ ನಷ್ಟದ ಲೆಕ್ಕ ಹೆಚ್ಚುತ್ತಾ ಹೋಗುತ್ತದೆ. ವರ್ಕಿಂಗ್‌ ಕ್ಯಾಪಿಟಲ್‌ ಹೆಚ್ಚಾಗುತ್ತಾ ಸಾಗುತ್ತದೆ. ಅಂತಿಮವಾಗಿ ಆ ಟೆಲಿವಿಷನ್‌ ಕಾರ್ಯಕ್ರಮ ಮಾಡುವ ವ್ಯಕ್ತಿ/ಕಂಪೆನಿಯು ಹೂಡಿಕೆ ಮತ್ತು ಆದಾಯಗಳ ಅಂತರ ಹೆಚ್ಚಾದಂತೆ ಮುಳುಗುವ ಹಡಗಾಗುತ್ತದೆ.

ಒಟ್ಟಾರೆಯಾಗಿ ಹೀಗೆನ್ನಬಹುದು. ಆಡಳಿತದ ಚುಕ್ಕಾಣಿ ಹಿಡಿಯುವಾಗ “ಲೆಸ್‌ ಗವರ್ನಮೆಂಟ್‌, ಮೋರ್‌ ಗವರ್ನೆನ್ಸ್”‌ ಎಂದ ಘೋಷಣೆ ಮಾಡಿದ ಸರ್ಕಾರವು ಅತಿ ಹೆಚ್ಚು ಕಾಯಿದೆಗಳನ್ನು ತಂದಿರಿಸುತ್ತಾ ಅತಿ ಹೆಚ್ಚು ಸರ್ಕಾರಿ ನಿಯಂತ್ರಣವನ್ನು ತರುತ್ತಿದೆ. ಇದರಿಂದಾಗಿ ಈ ದೇಶದ ಬಹುಮುಖ್ಯ ಉದ್ಯಮಗಳಲ್ಲಿ ಒಂದಾದ ಮಾಧ್ಯಮ ಮತ್ತು ಮನರಂಜನಾ ಉದ್ಯಮಗಳು ದೊಡ್ಡ ಸಂಕಟಕ್ಕೆ ಒಳಗಾಗಲಿವೆ ಅಥವಾ ಕಳೆದೆರಡು ದಶಕದಿಂದ ಕಡಿಮೆ ಆಗಿದ್ದ ಮನರಂಜನಾ ಮಾಧ್ಯಮದಲ್ಲಿನ ಕಾಳಧನ ವ್ಯವಹಾರ ದುಪ್ಪಟ್ಟು ಅಥವಾ ಮುಪ್ಪಟ್ಟು ಹೆಚ್ಚಾಗಲಿದೆ. ಇದರ ಜೊತೆಗೆ ಸಿನಿಮಾ ತಯಾರಕರ ಮೇಲೆ “ಸರ್ಕಾರದ ಹಿಂತೆಗೆತ” ಎಂಬ ತೂಗುಕತ್ತಿಯು ಸದಾ ತೂಗಲಿದೆ.

* * *

– ಬಿ. ಸುರೇಶ

೪ ಜುಲೈ ೨೦೨೧

ಎರಡಲುಗಿನ ಖಡ್ಗದ ಎದುರು…!

(ನ್ಯಾಯಪಥ (ನಾನುಗೌರಿ) ಪತ್ರಿಕೆಗಾಗಿ ಬರೆದ ಲೇಖನ)

ಕಳೆದ ಕೆಲವು ವಾರಗಳಿಂದ ಡಬ್ಬಿಂಗ್ ಕುರಿತ ಚರ್ಚೆ ಮರಳಿ ಮುನ್ನೆಲೆಗೆ ಬಂದಿದೆ. ಇದಕ್ಕೆ ಕಾರಣವಾದುದು ಕೋವಿಡ್ 19 ಕಾರಣವಾಗಿ ಹುಟ್ಟಿದ ಹೊಸ ಪರಿಸ್ಥಿತಿ. ಸರಿಸುಮಾರು 75 ಧಾರಾವಾಹಿಗಳು ಚಿತ್ರೀಕರಣವಾಗಿ ಪ್ರಸಾರವಾಗುತ್ತಿದ್ದ, ಆ ಮೂಲಕ ಸರಿಸುಮಾರು ಆರು ಸಾವಿರ ಜನರಿಗೆ ಉದ್ಯೋಗ ಒದಗಿಸಿದ್ದ ಕನ್ನಡ ಟೆಲಿವಿಷನ್ ಉದ್ಯಮವು ಲಾಕ್‍ಡೌನ್‍ನಿಂದಾಗಿ ಚಿತ್ರೀಕರಣಗಳನ್ನು ಮಾಡಲಾಗದ ಪರಿಸ್ಥಿತಿ ಉಂಟಾಯಿತು. ಆ ಲಾಕ್‍ಡೌನ್ ತೆರೆದಾಗ 26 ಧಾರಾವಾಹಿಗಳನ್ನು ನಿಲ್ಲಿಸಿ ಆ ಜಾಗದಲ್ಲಿ ಕನ್ನಡಕ್ಕೆ ಡಬ್ ಆದ ಇತರ ಭಾಷೆಯ ಧಾರಾವಾಹಿಗಳನ್ನು ಪ್ರಸಾರ ಮಾಡಲು ಹಲವು ವಾಹಿನಿಗಳು ಆರಂಭಿಸಿದವು. ಈ ವರೆಗೆ ಸಿನಿಮಾಗೆ ಇದ್ದ ಡಬ್ಬಿಂಗ್ ಎಂಬುದು ಧಾರಾವಾಹಿಗೂ ಬಂದುದರ ಹಿನ್ನೆಲೆಯಲ್ಲಿ ಡಬ್ಬಿಂಗ್ ಕುರಿತ ಚರ್ಚೆ ಮತ್ತೆ ಮುನ್ನೆಲೆಗೆ ಬಂದಿದೆ. Continue reading ‘ಎರಡಲುಗಿನ ಖಡ್ಗದ ಎದುರು…!’

ಮಕ್ಕಳೆದುರಿಗೆ ಅರಳಿದ ಅಮ್ಮನ ಬದುಕು ಪುಸ್ತಕವಾಗಿದ್ದು, ಪ್ರಶಸ್ತಿ ದೊರೆತದ್ದು, ಇತ್ಯಾದಿ…

(ವಿಜಯವಾಣಿ ಪತ್ರಿಕೆಗಾಗಿ ಅಮ್ಮನ (ಡಾ.ವಿಜಯಾ) ಆತ್ಮಚರಿತ್ರೆ ಕುರಿತಂತೆ ಬರೆದ ಟಿಪ್ಪಣಿ)

ಹೌದು. ನಾನು ಎರಡು ಅಥವಾ ಮೂರನೇ ತರಗತಿಗೆ ಹೋಗುವಾಗ ಅಮ್ಮ ಸಹ ಪದವಿಪೂರ್ವ ಶಿಕ್ಷಣಕ್ಕಾಗಿ ಸಂಜೆ ಕಾಲೇಜಿಗೆ ಸೇರಿದರು. ನಾನು ಹಗಲಿನಲ್ಲಿ ನನ್ನ ಶಾಲೆಯ ಪಾಠಗಳನ್ನು ಓದುವಾಗ ಅಮ್ಮ ಅಡಿಗೆ ಮಾಡುತ್ತಲೇ ಸೋಷಿಯಾಲಜಿ, ಪೊಲಿಟಿಕಲ್ ಸೈನ್ಸ್ ಓದುತ್ತಿದ್ದರು. ಹತ್ತನೇ ತರಗತಿವರೆಗೆ ಕನ್ನಡ ಮಾಧ್ಯಮದಲ್ಲಿ ಕಲಿತಾಕೆಗೆ ಪಿಯುಸಿಯಲ್ಲಿ ಇಂಗ್ಲೀಷ್ ಮೂಲಕ ಕಲಿಯು ಬೇಕಾದ ಕಷ್ಟವಿತ್ತು. ಆದರೂ ಆಕೆ ನಮ್ಮ ಜೊತೆಗೆ ಓದುತ್ತಾ ಓದುತ್ತಾ ಸ್ನಾತಕೋತ್ತರ ಕನ್ನಡ ಎಂಎ ವರೆಗೆ ಓದಿದ್ದು, ಡಾಕ್ಟರೇಟ್ ಪ್ರಬಂಧ ಬರೆದದ್ದು ಎಲ್ಲವೂ ನನ್ನಂತಹವರಿಗೆ ಸದಾ ಕಾಲ ಮಾದರಿಯಾಗಿ ಇರುವಂತಹ ಸಂಗತಿ. `ವಯಸ್ಸು ಎಷ್ಟಾದರೇನು? ಬದುಕು ಯಾವ ಕಷ್ಟ ಕೊಟ್ಟರೇನು? ನಮ್ಮ ಕನಸುಗಳ ಮೆಟ್ಟಿಲುಗಳನ್ನ ನಾವು ಏರಲೇಬೇಕು’ ಎಂಬ ಸತ್ಯವನ್ನು ಸ್ವತಃ ಬದುಕಿ ತೋರಿಸಿದಾಕೆ ನಮ್ಮಮ್ಮ. ಹಾಗಾಗಿಯೇ ನಾನು ನನಗಾಗಿ ಆಗಾಗ ಹೇಳಿಕೊಳ್ಳುತ್ತಾ ಇರುತ್ತೇನೆ, “ಇಂತಹ ಅಮ್ಮ ಸಿಗದೆ ಹೋಗಿದ್ದರೆ ನೀನು ಈಗೇನಾಗಿದ್ದೀಯೋ ಅದಾಗುತ್ತಾ ಇರಲಿಲ್ಲ” ಎಂದು. Continue reading ‘ಮಕ್ಕಳೆದುರಿಗೆ ಅರಳಿದ ಅಮ್ಮನ ಬದುಕು ಪುಸ್ತಕವಾಗಿದ್ದು, ಪ್ರಶಸ್ತಿ ದೊರೆತದ್ದು, ಇತ್ಯಾದಿ…’

ಕಿರುತೆರೆ – ಸಾಮಾಜಿಕ ಜವಾಬ್ದಾರಿ

(೮೫ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಂಗವಾಗಿ ೭ ಫೆಬ್ರವರಿ ೨೦೨೦, ಶುಕ್ರವಾರ ಬೆಳಗಿನ ೯.೩೦ರಿಂದ ೧೧ ಗಂಟೆವರೆಗೆ ನಡೆದ ಚಲನಚಿತ್ರ: ಕನ್ನಡ ಸಾಹಿತ್ಯ ಎಂಬ ಗೋಷ್ಟಿಯಲ್ಲಿ ಮಂಡಿಸಲಾದ ಪ್ರಬಂಧ.)

ಎಲ್ಲ ಕನ್ನಡ ಮನಸ್ಸುಗಳಿಗೆ ನಮಸ್ಕಾರಗಳು.

೮೫ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಪ್ರಬಂಧ ಮಂಡಿಸುವ ಅವಕಾಶ ನನಗೆ ಎರಡನೆಯ ಸಲ ಒದಗಿ ಬಂದಿದೆ. ಈ ಹಿಂದೆ ಶಿವಮೊಗ್ಗದಲ್ಲಿ ನಡೆದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಪ್ರಬಂಧ ಮಂಡಿಸಿದ್ದೆ. ಆಗ ಕಡೆಯ ನಿಮಿಷದಲ್ಲಿ ಬರಬೇಕಾದವರು ಬಾರದೆ ಹೋದುದರಿಂದ ಪ್ರೀತಿಯ ಗುರುಗಳಾದ ಚಂಪಾ ಅವರು ನನ್ನನ್ನು `ಬದಲಿ ಆಟಗಾರ’ ಎಂದು ಕರೆದಿದ್ದರು. ಮಾಧ್ಯಮ ಕುರಿತ ಗೋಷ್ಟಿಯಲ್ಲಿ ಗೌರಿ ಲಂಕೇಶ್ ಅವರ ಜೊತೆಗೆ ನಾನೂ ಸಹ ಇದ್ದೆ, ಕಿರುತೆರೆಯ ಬಗ್ಗೆ ಮಾತಾಡಿದ್ದೆ. ಈ ಸಲ ಅಪರೂಪಕ್ಕೆ ನಾನು ಬದಲಿ ಆಟಗಾರ ಅಲ್ಲ. ಅಧ್ಯಕ್ಷರಾದ ಮನು ಬಳಿಗಾರ್ ಅವರು ಖುದ್ದಾಗಿ ನನಗೆ ಕರೆ ಮಾಡಿ ಬರಲು ಸೂಚಿಸಿದರು. ಈ ಆಹ್ವಾನಕ್ಕಾಗಿ ಮನು ಬಳಿಗಾರ್ ಅವರಿಗೆ, ಸಮ್ಮೇಳನಾಧ್ಯಕ್ಷರು ಮತ್ತು ಗುರುಗಳಾದ ಎಚ್ಚೆಸ್ವಿ ಅವರಿಗೆ ಮತ್ತು ಈ ಆಯ್ಕೆಗೆ ಕಾರಣರಾದ ಕನ್ನಡ ಸಾಹಿತ್ಯ ಪರಿಷತ್ತಿನ ಎಲ್ಲ ಸಮಿತಿಗಳ ಸದಸ್ಯರಿಗೆ ವಿಶೇಷ ಧನ್ಯವಾದಗಳನ್ನು ತಿಳಿಸುತ್ತೇನೆ.
ಇಲ್ಲಿ ಮಾಡುತ್ತಿರುವ ಪ್ರಬಂಧ ಮಂಡನೆಗಾಗಿ ದೊರೆವ ಗೌರವಧನವನ್ನಾಗಲಿ ನನ್ನ ಪ್ರಯಾಣದ ಖರ್ಚನ್ನಾಗಲಿ ನಾನು ಪಡೆಯುವುದಿಲ್ಲ. ಆ ಹಣವನ್ನು ಕನ್ನಡ ನಿಧಿ ಮೂಲಕ ಸದುಪಯೋಗ ಪಡಿಸಿಕೊಳ್ಳಿ ಎಂದು ಸಾಹಿತ್ಯ ಪರಿಷತ್ತಿನ ಪದಾಧಿಕಾರಿಗಳಿಗೆ ಕೋರುತ್ತೇನೆ.
ಇಂದಿನ ನನ್ನ ಮಾತುಗಳನ್ನು ಮಂಡಿಸುವ ಮುಂಚೆ ಕೆಲವು ವಿಷಯಗಳನ್ನು ಹೇಳಬೇಕಿದೆ. Continue reading ‘ಕಿರುತೆರೆ – ಸಾಮಾಜಿಕ ಜವಾಬ್ದಾರಿ’


ಕೆಲವು ಪುಟಗಳು…

ಈವರೆಗೆ ಇಲ್ಲಿ ಸುಳಿದಾಡಿದವರು...

  • 109,884 ಜನರು