ನಾಟಕವಾಗುವ ದಾರಿಯಲ್ಲಿ… ‘ಕಳೆದುಹೋದವರು’

(ಮುಮ್ಮಡಿ ಕೃಷ್ಣರಾಜ ಒಡೆಯರನ್ನು ಕುರಿತ ಐತಿಹಾಸಿಕ ನಾಟಕ, ಲೇಖಕರು: ಡಿ.ಎ.ಶಂಕರ್. ಪ್ರಕಾಶಕರು: ಸಂವಹನ ಪ್ರಕಾಶನ, ೧೨/೧ಎ, ಈವ್ನಿಂಗ್ ಬಜಾರ್ ಹಿಂಭಾಗ, ಶಿವರಾಂಪೇಟೆ, ಮೈಸೂರು – ೫೭೦೦೦೧, ಡೆಮಿ ಅಷ್ಟದಳ/ ಮೊದಲ ಮುದ್ರಣ:೨೦೧೧/ ೮೦ ಪುಟ/ಬೆಲೆ- ೫೦ರೂ.)

(ಈ ಲೇಖನವು ಪ್ರಜಾವಾಣಿಯ ಸಾಪ್ತಾಹಿಕ ಪುರವಣೆಯಲ್ಲಿ ೩೦ ಅಕ್ಟೋಬರ್ ೨೦೧೧ರಂದು ಪ್ರಕಟವಾಗಿದೆ)

ಐತಿಹಾಸಿಕ ನಾಟಕವೊಂದನ್ನು ರಚಿಸುವುದು ಯಾವತ್ತಿಗೂ ಕಷ್ಟದ ಕೆಲಸ. ಯಾವ ದೃಷ್ಟಿಕೋನದಿಂದ ಒಂದು ಕಾಲಘಟ್ಟದ ಇತಿಹಾಸವನ್ನು ನೊಡಬೇಕು ಎಂಬುದೇ ನಾಟಕಕಾರನ ಮುಂದೆ ದೊಡ್ಡ ಸವಾಲಾಗಿ ಬಿಡುತ್ತದೆ. ಹೀಗಾಗಿಯೇ ಸಮಕಾಲೀನ ಕಾಲಘಟ್ಟದಲ್ಲಿ ಐತಿಹಾಸಿಕ ವಸ್ತುವನ್ನು ನಾಟಕವಾಗಿಸಿದವರ ಸಂಖ್ಯೆ ಕಡಿಮೆ. ಇದಕ್ಕೆ ಒಂದು ಕಾಲದಲ್ಲಿ ಆಗಿಹೋದ ಘಟನೆಯನ್ನು ಇಂದು ನಮ್ಮೆದುರಿಗೆ ಇರುವ ಅನೇಕ ರಾಜಕೀಯ ಹಾಗೂ ತತ್ವಗಳ ಮೂಸೆಯಲ್ಲಿ ಇಟ್ಟು ನೋಡಿದಾಗ, ಐತಿಹಾಸಿಕ ವಿವರಗಳ ನಡುವೆ ಯಾರು ನಾಯಕರಾಗಬೇಕು, ಪ್ರತಿನಾಯಕರಾರು ಎಂಬ ಪ್ರಶ್ನೆಗೆ ಉತ್ತರಿಸುವುದೇ ನಾಟಕಕಾರರಿಗೆ ಬೃಹದಾಕಾರದ ಸಮಸ್ಯೆ ಆಗಿಬಿಡುವುದು ಪ್ರಧಾನ ಕಾರಣ. ಇದರಾಚೆಗೆ ಐತಿಹಾಸಿಕ ವಿವರವೊಂದರ ಒಳಗಿರುವ ನಾಟಕೀಯ ಹೂರಣವನ್ನು ಕಟ್ಟಿಕೊಡುವಾಗ ಇತಿಹಾಸಕ್ಕೆ ಬದ್ಧವಾಗಬೇಕೋ ನಾಟಕೀಯ ಗುಣಗಳಿಗೆ ಬದ್ಧವಾಗಬೇಕೋ ಎಂಬ ದ್ವಂದ್ವವೂ ಸಹ ನಾಟಕಕಾರರನ್ನು ಕಾಡುತ್ತದೆ. ಈ ಕಾರಣಗಳಿಂದಾಗಿಯೇ ಕನ್ನಡದಲ್ಲಿ ಬಂದಿರುವ ಐತಿಹಾಸಿಕ ನಾಟಕಗಳಲ್ಲಿ ಗಿರೀಶರ ‘ತುಘಲಕ್’ ‘ತಲೆದಂಡ’, ಲಂಕೇಶರ ‘ಗುಣಮುಖ’ಗಳಂತೆ ಇನ್ನುಳಿದ ಐತಿಹಾಸಿಕ ನಾಟಕಗಳು ಸಾರ್ವಕಾಲಿಕ ಎಂಬಂತೆ ಜನಮಾನಸದ ನೆನಪಲ್ಲಿ ಉಳಿದಿಲ್ಲ. ಇನ್ನು ಕೆಲವು ಐತಿಹಾಸಿಕ ನಾಟಕಗಳು ತಮ್ಮ ವಾಚಾಳಿತನದಿಂದಾಗಿ ಮಾತ್ರ ನೆನಪಲ್ಲಿ ಉಳಿದಿರುವುದನ್ನು ಗಮನಿಸಬಹುದು. ಈ ಎಲ್ಲಾ ವಿವರಗಳ ಹಿನ್ನೆಲೆಯಲ್ಲಿ ಮೈಸೂರಿನ ಅರಸುಕುಲದ ಟಿಪ್ಪು ಸುಲ್ತಾನ್ ನಂತರದ ಕಾಲಘಟ್ಟವನ್ನು ಮುಮ್ಮಡಿ ಕೃಷ್ಣರಾಜ ಒಡೆಯರ್ ಅವರ ಜೀವನದ ಸುತ್ತ ಹೆಣೆದ ವಿವರವನ್ನು ಕನ್ನಡದ ಪ್ರಸಿದ್ಧ ಚಿಂತಕ ಹಾಗೂ ಸಾಹಿತಿಗಳಾದ ಡಿ.ಎ.ಶಂಕರ್ ಅವರು ‘ಕಳೆದುಹೋದವರು’ ಎಂಬ ಹೆಸರಿನಲ್ಲಿ ನಾಟಕವಾಗಿಸಿರುವುದು ಸ್ತುತ್ಯರ್ಹ ಪ್ರಯತ್ನ.

ಮೈಸೂರಿನ ಇತಿಹಾಸವನ್ನು ಕುರಿತಂತೆ ಅನೇಕ ನಾಟಕಗಳು ಕನ್ನಡದಲ್ಲಿ ಬಂದಿವೆ. ಸಂಸರು ಬಹುತೇಕ ಇದೇ ವಿಷಯವನ್ನು ವಸ್ತುವಾಗಿಸಿ ಕನ್ನಡದ ಸಂದರ್ಭದಲ್ಲಿ ಅಪರೂಪ ಎನ್ನಿಸುವ ಅನೇಕ ನಾಟಕಗಳನ್ನು ನೀಡಿದ್ದಾರೆ. ಲಿಂಗದೇವರು ಹಳೆಮನೆಯವರು ಸಹ ಮೈಸೂರಿನ ಇತಿಹಾಸವನ್ನು ಹಿನ್ನೆಲೆಯಾಗಿರಿಸಿಕೊಂಡು ಕೆಲವು ನಾಟಕ ಬರೆದಿದ್ದಾರೆ. ಈಗ ಇದೇ ಮೈಸೂರಿನ ಇತಿಹಾಸವನ್ನು ಡಿ.ಎ.ಶಂಕರ್ ಅವರು ತಮ್ಮ ‘ಕಳೆದುಹೋದವರು’ ನಾಟಕದಲ್ಲಿ ಇರಿಸಿದ್ದಾರೆ. ಮುಮ್ಮಡಿ ಕೃಷ್ಣರಾಜ ಒಡೆಯರ್ ಅವರು ಹದಿನಾಲ್ಕು ವರ್ಷದವರಿದ್ದಾಗ ಸಿಂಹಾಸನದ ಮೇಲೆ ಕೂತವರು. ನಂತರ ಬ್ರಿಟಿಷರ ಪರೋಕ್ಷ ಆಳ್ವಿಕೆಯ ಸಂಕಟಗಳ ಜೊತೆಗೆ, ದಿವಾನರಾಗಿದ್ದ ಪೂರ್ಣಯ್ಯನವರ ಅಧಿಕಾರಿ ಧೋರಣೆಯನ್ನು ಅನುಭವಿಸುತ್ತಾ ಬೆಳೆದವರು. ಇದೇ ಕಾಲಘಟ್ಟದಲ್ಲಿ ಬ್ರಿಟಿಷರನ್ನು ವಿರೋಧಿಸುತ್ತಿದ್ದ, ಟಿಪ್ಪುಸುಲ್ತಾನನೇ ತಮ್ಮ ಅರಸ ಎಂದುಕೊಂಡಿದ್ದ, ದಾಸ್ಯದಿಂದ ಮುಕ್ತಿ ಬೇಕು ಎಂದು ಬಯಸುತ್ತಿದ್ದ ದೋಂಡಿಯಾ ವಾಘ್ ಮತ್ತು ತರೀಕೆರೆ ಪಾಳೇಗಾರರ ಮನಸ್ಸುಗಳು ಮೈಸೂರಿನ ಕೈಗೊಂಬೆ ಸರಕಾರವನ್ನು ವಿರೋಧಿಸುತ್ತಿದ್ದವು. ಇವುಗಳ ಜೊತೆಗೆ ಮುಮ್ಮಡಿ ಕೃಷ್ಣರಾಜರಿಗೆ ಇದ್ದ ಅನೇಕ ಆಸಕ್ತಿಗಳು ಸೇರಿ ಈ ಕಾಲಘಟ್ಟದ ಇತಿಹಾಸದಲ್ಲಿ ಅನೇಕ ರೋಚಕ ಹಾಗೂ ನಾಟಕೀಯ ವಿವರಗಳು ಸಿಗುತ್ತವೆ. ಈ ವಿವರಗಳನ್ನು ಡಿ.ಎ.ಶಂಕರ್ ಅವರು ೧೦ ದೃಶ್ಯಗಳ ನಾಟಕವಾಗಿಸಿದ್ದಾರೆ.

ಡಿ.ಎ.ಶಂಕರ್ ಅವರು ಇಂಗ್ಲೀಷ್ ಹಾಗೂ ಕನ್ನಡಗಳಲ್ಲಿ ಅನೇಕ ಕೃತಿಗಳನ್ನು ರಚಿಸಿರುವ ಸವ್ಯಸಾಚಿ. ಮೈಸೂರು ವಿಶ್ವವಿದ್ಯಾಲಯದಲ್ಲಿ ಇಂಗ್ಲೀಷ್ ಪ್ರಾಧ್ಯಾಪಕರಾಗಿಯೂ ಸೇವೆ ಸಲ್ಲಿಸಿದವರು. ತಮ್ಮ ಬಹುಬಗೆಯ ಓದುಗಳ ಲಾಭವನ್ನು ಸಂಪುಷ್ಟವಾಗಿ ಇಂತಹ ನಾಟಕವೊಂದರಲ್ಲಿ ಬಳಸುವುದು ಅವರಿಗೆ ಸಾಧ್ಯವಾಗಿದೆ. ಹಾಗಾಗಿಯೇ ಈ ನಾಟಕದಲ್ಲಿ ಮುಮ್ಮಡಿಯವರ ಕಾಲದ ಎಲ್ಲಾ ಮಗ್ಗುಲುಗಳನ್ನು ಯಾವುದೇ ಪಕ್ಷ ವಹಿಸದೆ ಪ್ರೇಕ್ಷಕರ ಎದುರಿಗೆ ಇರಿಸುವ ಪ್ರಯತ್ನವನ್ನು ಲೇಖಕರು ಮಾಡುತ್ತಾರೆ. ಈ ವಿವರಗಳನ್ನು ಕುರಿತಂತೆ ನಾಟಕಕ್ಕೆ ಮುನ್ನುಡಿ ಬರೆದಿರುವ ದೇ.ಜ.ಗೌ. ಸಹ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ.

ಆದರೆ ಈ ವಸ್ತುವಿಗೆ ಇರುವ ಶಕ್ತಿ ನಾಟಕಕೃತಿಗೆ ದಕ್ಕಿಲ್ಲ. ಇದು ನಾಟಕದ ಆಕೃತಿಯಲ್ಲೇ ಮೂಡಿರುವ ಸಮಸ್ಯೆ. ನಾಟಕಕಾರರು ಅತ್ಯಂತ ಕಿರುದೃಶ್ಯಗಳನ್ನು ಬರೆದಿರುವುದು ಸಹ ಪಾತ್ರಗಳ ಭಾವವಲಯದ ಅನಾವರಣಕ್ಕೆ ಸಹಾಯ ಮಾಡುವುದಿಲ್ಲ. ಹೀಗಾಗಿ ಐತಿಹಾಸಿಕ ವಿವರದ ಪರಿಚಯ ಸಿಗುತ್ತದೆ. ಆ ವಿವರದೊಳಗಿನ ನಾಟಕೀಯತೆ ಅನಾವರಣಗೊಳ್ಳದೆ ಉಳಿಯುತ್ತದೆ. ಇದರಿಂದಾಗಿ ಈ ನಾಟಕದ ಪ್ರಮುಖ ಪಾತ್ರಗಳಾಗಿರುವ ಮುಮ್ಮಡಿಯಾಗಲೀ ಪೂರ್ಣಯ್ಯ ಆಗಲಿ ಪಾತ್ರವಾಗಿ ತೆರೆದುಕೊಳ್ಳದೆ ಕೇವಲ ಐತಿಹಾಸಿಕ ಸತ್ಯಗಳಾಗಿ ಮಾತ್ರ ಗೋಚರಿಸುತ್ತಾರೆ. ನಾಟಕದ ಕಟ್ಟಡ ನಿರ್ಮಿತಿಯನ್ನು ಮಾಡಿಕೊಳ್ಳವಲ್ಲಿ ಲೇಖಕರು ಐತಿಹಾಸಿಕ ವಿವರಗಳಿಗೆ ಮಾತ್ರ ಪ್ರಾಮುಖ್ಯತೆ ನೀಡಿ, ಆ ವಸ್ತುವಿನ ಒಳಗಿನ ನಾಟಕ ಶಕ್ತಿಯತ್ತ ಗಮನ ಕೊಡದೆ ಇರುವುದು ‘ಕಳೆದುಹೋದವರು’ವಿನ ಪ್ರಮುಖ ಕೊರತೆಯಾಗಿ ಕಾಣುತ್ತದೆ.

ನಾಟಕದ ಹತ್ತೂ ದೃಶ್ಯಗಳಿಗೆ ಸೇತುಬಂಧ ಸೃಷ್ಟಿಸಲು ಹಾಡುಗಳನ್ನು ಬಳಸಲಾಗಿದೆ. ಪುರಂದರದಾಸರ, ವಚನಕಾರರ, ಲಾವಣಿಕಾರರ ಪದ್ಯಗಳಲ್ಲದೆ ಲೇಖಕರೇ ಬರೆದಿರುವ ಕೆಲವು ಹಾಡುಗಳು ಸಹ ಇಲ್ಲಿವೆ. ಇವು ಮುಂದೆ ಮೂಡಲಿರುವ ದೃಶ್ಯಕ್ಕೆ ಸಂವಾದಿಯಾಗಬೇಕೆಂದು ಬಳಸಿರುವಂತಹದು. ಆದರೆ ಈ ಹಾಡನ್ನು ಮೇಳದವರು ಹಾಡಬೇಕೋ ಅಥವಾ ಹಿನ್ನೆಲೆಯಲ್ಲಿ ದೃಶ್ಯ ಬದಲಾಗುವ ಅವಧಿಗೆ ಎಂದು ಹಾಡಬೇಕೋ ಎಂಬುದನ್ನು ಲೇಖಕರು ಸೂಚಿಸುವುದಿಲ್ಲ. ಪ್ರಾಯಶಃ ಶಕ್ತಿಯುತವಾಗಿ ನಾಟಕ ಕಟ್ಟಬಲ್ಲ ರಂಗನಿರ್ದೇಶಕರು ತಾವೇ ಈ ಹಾಡುಗಳನ್ನು ದೃಶ್ಯೀಕರಿಸುವ ಕುರಿತು ಯೋಚಿಸಬೇಕಾಗುತ್ತದೆ. ನಾಟಕವೊಂದನ್ನು ಕಟ್ಟುವ ಲೇಖಕನಿಗೆ ರಂಗಸಾಧ್ಯತೆಗಳ ಅನುಭವ ಗಟ್ಟಿಯಾದ್ದಾಗಿಲ್ಲದೆ ಇದ್ದಾಗ ಇಂತಹದು ಆಗುತ್ತದೆ. ಆದರೆ ಡಿ.ಎ.ಶಂಕರ್ ಅವರಿಗೆ ಇಂಗ್ಲೀಷ್ ನಾಟಕಗಳ ಪರಿಚಯ ಹಾಗೂ ಪ್ರದರ್ಶನ ಸಾಧ್ಯತೆಯ ಪರಿಚಯವಿದೆ ಎಂಬುದಂತೂ ಸತ್ಯ. ಆದರೂ ಈ ನಾಟಕದಲ್ಲಿ ಅವರು ರಂಗಸಾಧ್ಯತೆಗಳನ್ನು ಬಳಸಿಕೊಳ್ಳುವ ಪ್ರಯತ್ನವನ್ನು ಮಾಡದಿರುವುದು ಸೋಜಿಗ. ಐದನೆಯ ದೃಶ್ಯದಲ್ಲಿ ರೆಸಿಡೆಂಟ್ ಆಫೀಸರ್‌ನನ್ನು ಪೂರ್ಣಯ್ಯ ಭೇಟಿ ಮಾಡುವಾಗಲೇ ಅಲ್ಲಿಗೆ ಬರುವ ಮಹಾರಾಣಿ ಲಕ್ಷ್ಮಿಯ ಪಾತ್ರ ಪ್ರವೇಶದ ಸನ್ನಿವೇಶವೊಂದು ಮಾತ್ರ ಉಳಿದೆಲ್ಲಾ ದೃಶ್ಯಗಳಿಗಿಂತ ಭಿನ್ನವಾಗಿ ನಾಟಕೀಯವಾಗಿ ಅನಾವರಣಗೊಳ್ಳುತ್ತದೆ.

ನಾಟಕದಲ್ಲಿ ಬಳಸಲಾಗಿರುವ ಮಾತುಗಳು ಗಮನಿಸಬೇಕಾದಂತಹದು. ದೃಶ್ಯ ೧ರಲ್ಲಿ ಪೂರ್ಣಯ್ಯನು ‘ಕುದುರೆ ನಡೆಸಲು ಕಲಿತರೆ ರಾಜ್ಯ ನಿಭಾಯಿಸಲು ಕಲಿತ ಹಾಗೆ’ ಎನ್ನುವುದು, ಅದೇ ದೃಶ್ಯದಲ್ಲಿ ‘ದೊರೆತನ ಎಂಬುದೇ ದೊಡ್ಡ ತುಂಟ ಕುದುರೆ. ಅದನ್ನು ನಿಯಂತ್ರಣದಲ್ಲಿ ಇರಿಸಿಕೊಳ್ಳುವುದೆಂದರೆ ಘಟವಾಣಿ ಸ್ತ್ರೀಯರನ್ನು ಹತೋಟಿಯಲ್ಲಿ ಇಟ್ಟುಕೊಂಡ ಹಾಗೆ’ ಎನ್ನುವುದು, ದೃಶ್ಯ ೩ ರಲ್ಲಿ ಬರುವ ‘ರಾಜ್ಯಭಾರವೆಂದರೆ ರಾಗಿ ಬೀಸುವಷ್ಟೇ ಕಷ್ಟ’ ಎನ್ನುವುದು, ದೃಶ್ಯ ೯ರಲ್ಲಿ ಅನೇಕ ಧ್ವನಿಗಳು ಮುಮ್ಮಡಿಯ ಜೊತೆಗೆ ಮಾತಾಡುವಾಗ ಬಳಸಲಾಗಿರುವ ಸಾಲುಗಳು… ಹೀಗೆ ಈ ನಾಟಕದುದ್ದಕ್ಕೂ ಬಹುಕಾಲ ನೆನಪಲ್ಲಿ ಉಳಿಯುವಂತಹ ಮಾತುಗಳನ್ನು ಕಟ್ಟಲಾಗಿದೆ. ಇದು ಲೇಖಕರ ಜೀವನಾನುಭವಕ್ಕೆ ನೇರ ಸಾಕ್ಷಿ.

ನಾಟಕದ ಅಂತ್ಯದಲ್ಲಿ ಮುಮ್ಮಡಿಯ ಪಾತ್ರವು ತನ್ನ ಸೋಲುಗಳನ್ನು ನೆನೆಯುತ್ತಾ ಅದೇ ಕಾಲಘಟ್ಟದಲ್ಲಿ ಆಗುತ್ತಿದ್ದ ಭಾರತದ ಸ್ವಾತಂತ್ರ ಚಳುವಳಿಗೆ ಮೈಸೂರು ಸಂಸ್ಥಾನವು ಪ್ರತಿಕ್ರಿಯಿಸದೆ ಉಳಿದುದಕ್ಕೆ ಹೀಗೆ ಹೇಳುತ್ತಾನೆ, ‘ನಮ್ಮ ಪಾಲಿಗೆ ಎರಡು ದಾಸ್ಯವಿತ್ತು. ಒಂದು, ದೇಶದೆಲ್ಲೆಡೆ ಇದ್ದದ್ದು. ಮತ್ತೊಂದು ನಮ್ಮ ರಾಜ್ಯವನ್ನೇ ನಾವು ಕಳೆದುಕೊಂಡು, ಅದರ ವಾಪಸಾತಿಗೆ ಚಾತಕ ಪಕ್ಷಿಯಂತೆ ಕಾಯುತ್ತಾ ಇದ್ದದ್ದು… …ನಾವು ಪುರುಷತ್ವ ಕಳೆದುಕೊಂಡು, ಗಾಡಿಗೆ ಹೂಡಿದ ಎತ್ತುಗಳಾಗಿದ್ದೆವು. ಕ್ಷುದ್ರ ಆಶೆಯಿಂದ ಕಾಲ ನಡೆಸಿದ ಹಾಗೆ ನಡೆದುಬಿಟ್ಟೆವು.’ ಈ ಮಾತುಗಳೇ ನಾಟಕದ ಹೂರಣ. ಆದರೆ ಇವು ನಾಟಕದಲ್ಲಿ ದೃಶ್ಯವಾಗಿ ಅನಾವರಣಗೊಳುತ್ತಿಲ್ಲ ಎಂಬುದೊಂದೇ ಕೊರತೆ. ಪ್ರಾಯಶಃ ಉತ್ತಮ ರಂಗನಿರ್ದೇಶಕರು ಇಂತಹ ಪಠ್ಯವೊಂದನ್ನು ದೃಶ್ಯವಾಗಿ ಕಟ್ಟಿದಾಗ ಈ ಎಲ್ಲಾ ಕೊರೆಗಳೂ ಮುಚ್ಚಿ, ಇದು ಅಪರೂಪದ ರಂಗಕೃತಿಯಾಗಬಹುದು.

ಒಟ್ಟಾರೆಯಾಗಿ ‘ಕಳೆದುಹೋದವರು’ ನಾಟಕವು ಕನ್ನಡಕ್ಕೆ ದೊರೆತ ಮತ್ತೊಂದು ಐತಿಹಾಸಿಕ ನಾಟಕ. ಇಂತಹ ನಾಟಕಗಳು ರಂಗಕೃತಿಯಾಗಿ ಹೇಗೆ ಅರಳಿಯಾವು ಎಂಬ ಕುತೂಹಲವಂತೂ ಇದ್ದೇ ಇರುತ್ತದೆ. ಈ ವಸ್ತವನ್ನು ಕನ್ನಡಿಗರಿಗೆ ಪರಿಚಯಿಸುವ ಪ್ರಯತ್ನ ಮಾಡಿರುವ ಲೇಖಕರ ಪ್ರಯತ್ನವನ್ನಂತೂ ಮೆಚ್ಚಲೇಬೇಕು.

* * *

 

 

ಸಿನಿಮಾ ಮತ್ತು ಕಿರುತೆರೆ – ಕನ್ನಡತನದ ಮಿತಿಗಳು

(ವಿಜಯಕರ್ನಾಟಕದ ೨೦೧೧ರ ದೀಪಾವಳಿ ಸಂಚಿಕೆಗಾಗಿ ಬರೆದ ಲೇಖನ)
‘ಕನ್ನಡ ಎಂಬುದೊಂದು ಅಸ್ಮಿತೆ. ಕನ್ನಡ ಎಂಬುದೊಂದು ಸಂಸ್ಕೃತಿ. ಕನ್ನಡತನವೆಂಬುದು ಒಂದು ನಾಡಿನ ಬದುಕಿನ ಕ್ರಮ.’ – ಹೀಗೆಲ್ಲಾ ನಾವು ಮಾತಾಡುತ್ತಾ ಇದ್ದೇವೆ. ಆದರೆ ನಮ್ಮ ಪ್ರಧಾನ ಮಾಧ್ಯಮಗಳಾದ ಸಿನಿಮಾ ಮತ್ತು ಕಿರುತೆರೆಗಳಲ್ಲಿ ಈ ನಮ್ಮ ಕನ್ನಡತನವು ಯಾವ ಕ್ರಮದಲ್ಲಿದೆ ಎಂದು ಗಮನಿಸುವ, ಆ ಮೂಲಕ ನಾವಾಡುವ ಮಾತಿಗೂ ನಮ್ಮದೇ ಕೃತಿಗಳಿಗೂ ಇರುವ ಅಂತರವನ್ನು ವಿಶ್ಲೇಷಿಸುವುದು ಸಹ ಇಂದಿನ ಅಗತ್ಯವಾಗಿದೆ. ಇಂತಹ ಮೌಲ್ಯಮಾಪನಗಳು ಆಗಿಂದಾಗ್ಗೇ ಆಗಬೇಕು. ಹಾಗಾದಾಗ ಮಾತ್ರ ನಾವು ನಡೆಯುತ್ತಿರುವ ದಾರಿಯ ಒಳಗಿನ ಕೃತ್ರಿಮಗಳನ್ನು ತಿಳಿದುಕೊಳ್ಳುವುದು ಸಾಧ್ಯವಾಗಬಹುದು.
ಮಾಧ್ಯಮ ಎಂಬ ಆಧುನಿಕ ಭೂತ
ಸಿನಿಮಾ ಎಂಬುದು ಆರಂಭವಾದಾಗ ಇದ್ದ ಸ್ವರೂಪವನ್ನು ಬದಲಿಸಿಕೊಂಡು ಜಾಗತಿಕ ಮನರಂಜನಾ ಮಾಧ್ಯಮವಾಗಿದ್ದು ಕಳೆದ ನೂರು ವರ್ಷಗಳಲ್ಲಿ ನಡೆದ ಇತಿಹಾಸ. ಆದರೆ ಆ ಸಿನಿಮಾ ಎಂಬುದು ಕನ್ನಡದ ಜಗತ್ತಿನೊಳಗೆ ಪ್ರವೇಶಿಸಿ ಕನ್ನಡವನ್ನು ಈಗಿನ ಸ್ವರೂಪಕ್ಕೆ ತಂದುದು ಬಹುಮುಖಿ ಸಂಸ್ಕೃತಿಯನ್ನ ಏಕತ್ರಗೊಳಿಸಿದ್ದು ಬಂಡವಾಳಶಾಹಿ ಪ್ರಣೀತ ಸಂಸ್ಕೃತಿಯೇ ತಂದಿತ್ತ ದುರಂತ. ಕನ್ನಡದ ಜನಮಾನಸಕ್ಕೆ ಅನೇಕ ಅಸ್ಮಿತೆಗಳಿದ್ದವು. ಅವೆಲ್ಲವನ್ನೂ ಪ್ರಮಾಣಿಕೃತ ಒಂದೇ ಭಾಷೆಯ ನೆಲೆಗೆ ತಂದಿಟ್ಟು, ಇಂದು ನಾವು ನಮ್ಮಗಳ ನಡುವೆಯೇ ಸಂವಹನ ಮಾಡಲು ಒಂದು ಏಕರೂಪಿ ಭಾಷೆಯನ್ನು ಸೃಷ್ಟಿಸಿಕೊಂಡೆವಲ್ಲಾ, ಇದು ಭಾಷೆಯ ಮೇಲಾದ ವ್ಯವಸ್ಥಿತ ಆಕ್ರಮಣ. ಭಾಷೆಗಳ ಒಳಗಣ ಸೊಗಡುಗಳನ್ನು ನಾವು ಕಳಕೊಂಡಿದ್ದೇವೆ. ಪ್ರತೀ ಸೊಗಡಿಗೆ ಇದ್ದ ಸಾಂಸ್ಕೃತಿಕ ಶ್ರೀಮಂತಿಕೆ ಇಂದು ಪಳೆಯುಳಿಕೆಗಳ ಸ್ಥಿತಿಯನ್ನು ತಲುಪಿದೆ. ಇಷ್ಟೆಲ್ಲಾ ಭಾಷಾಕ್ರಮಣದ ಜೊತೆಗೆ ಸಿನಿಮಾ ಎಂಬ ತಂತ್ರಭಾಷೆಯನ್ನು ನಾವು ಶ್ರೀಮಂತಗೊಳಿಸಿದ್ದೆವೆಯೇ ಅಂದರೆ ಅಲ್ಲಿಯೂ ನಮಗೆ ಸಿಗುವುದು ಬರೀ ಹಳವಂಡಗಳೇ!
ಕಿರುತೆರೆ ಎಂಬ ವಿಶ್ವರೂಪಿ
ಸಿನಿಮಾ ಎಂಬುದು ಮಾಧ್ಯಮವಾಗಿ ಹೆಮ್ಮರವಾಗುತ್ತಿದ್ದ ಹಂತದಲ್ಲಿಯೇ ನಮ್ಮ ನಡುವೆ ಹುಟ್ಟಿಕೊಂಡ ಹೊಸ ಮಾಧ್ಯಮ ಕಿರುತೆರೆ. ಮೂಲತಃ ಸಾರ್ವಜನಿಕರಿಗೆ ಮಾಹಿತಿ ಮತ್ತು ಸಂಪರ್ಕ ಸಾಧನವಾಗಿ ಬಳಕೆಯಾಗಲು ಹುಟ್ಟಿದ ಈ ಮಾಧ್ಯಮವು ಇಂದು ಆ ಮೂಲ ಉದ್ದೇಶದಿಂದಲೇ ದೂರ ಸರಿದು ಕೇವಲ ಮನರಂಜನೆಯಷ್ಟೇ ಪ್ರಧಾನವಾಗಿಸಿಕೊಂಡಿರುವುದನ್ನು ಸಹ ನಾವು ಕಾಣುತ್ತಾ ಇದ್ದೇವೆ. ಒಂದೊಮ್ಮೆ ಒಂದೇ ಕನ್ನಡ ವಾಹಿನಿಯಿದ್ದ ಕಾಲದಿಂದ ಇಂದು ಹನ್ನೆರಡು ಪೂರ್ಣಾವಧಿ ಕನ್ನಡ ವಾಹಿನಿಗಳು ಇರುವ ಕಾಲಕ್ಕೆ ನಾವು ಬಂದಿದ್ದೇವೆ. ಈ ಮಾರ್ಪಾಡುಗಳಿಂದ ಅನೇಕರ ಉದರಂಭರಣ ಆಗುತ್ತಿದೆ ಎಂಬುದನ್ನು ಒಪ್ಪುತ್ತಲೇ ಇವೇ ಮಾರ್ಪಾಡುಗಳು ಸಾರ್ವಜನಿಕರ ಮೇಲೆ ಹೇರುತ್ತಾ ಇರುವ ಹೊಸ ಒತ್ತಡಗಳನ್ನು ಗಮನಿಸಬೇಕಿದೆ. ಈ ಒತ್ತಡಗಳಿಂದ ಭಾಷೆಗೆ ಆಗಿರುವ ಹೊಡೆತಗಳನ್ನು ಕೂಡ ನಾವು ಗುರುತಿಸಬೇಕಿದೆ.
ಈಚೆಗಿನ ಉದಾಹರಣೆಯನ್ನು ಗಮನಿಸಿ. ಚಿತ್ರನಟನೊಬ್ಬ ಪತಿಪೀಡಕನಾಗಿದ್ದನ್ನು ಮಾಧ್ಯಮಗಳು ದಿನದ ೨೪ಗಂಟೆಯೂ ಎಡಬಿಡದೆ ಚರ್ಚಿಸಿದವು. ಸಾರ್ವಜನಿಕರ ಮೇಲೆ ಸುದ್ದಿಯೊಂದನ್ನಷ್ಟೇ ಅಲ್ಲದೆ, ಅಭಿಪ್ರಾಯವನ್ನು ಸಹ ‘ಹ್ಯಾಮರ್’ ಮಾಡಲಾಯಿತು. ಆ ಮೂಲಕ ಒಂದು ಕುಟುಂಬದ ಒಳಗಿನ ವಿವರವನ್ನು ಸಾರ್ವತ್ರಿಕ ಚರ್ಚೆಗೆ ತರುವ ಪ್ರಯತ್ನವಾಯಿತು. ಕೆಲವೇ ದಿನಗಳ ಹಿಂದೆ ಅದೇ ನಟನನ್ನ ದೇವರು ಎಂಬಂತೆ ಚಿತ್ರಿಸಿದ್ದ ಮಾಧ್ಯಮವೇ ಈಗ ಆತನನ್ನು ಖಳನಾಯಕ ಮಾಡಿತ್ತು. ಈ ಪ್ರಕರಣದಲ್ಲಿ ಆ ನಟ ಮಾಡಿದ ತಪ್ಪನ್ನು ಈ ನಾಡು ಬೆಂಬಲಿಸಬೇಕಿಲ್ಲ. ಆದರೆ ಇಂತಹ ವಿಷಯದ ಚರ್ಚೆಯ ಭರಾಟೆಯಲ್ಲಿ ನಿರ್ಮಾಪಕರ ಸಂಘ ಎಂಬ ಪ್ರಜಾಸತ್ತಾತ್ಮಕ ವ್ಯವಸ್ಥೆಯು ಸರ್ವಾಧಿಕಾರಿಯಂತಹ ನಿಲುವು ತೆಗೆದುಕೊಳ್ಳುವುದಕ್ಕೂ ಇವೇ ಮಾಧ್ಯಮಗಳು ದಾರಿ ಮಾಡಿಕೊಟ್ಟಿದ್ದವು. ನಂತರ ಇವೇ ಮಾಧ್ಯಮಗಳು ಹೇರಿದ ಒತ್ತಡಕ್ಕೆ ಮಣಿದು ಅದೇ ಸಂಘವು ತನ್ನ ನಿರ್ಧಾರ ಬದಲಿಸಿದ್ದನ್ನು ಸಹ ನಾವು ಕಂಡಿದ್ದೇವೆ.
ಇವೆಲ್ಲವನ್ನೂ ಈಗ ಮತ್ತೆ ನೆನೆಸುವುದಕ್ಕೆ ಕಾರಣ ಮಾಧ್ಯಮಗಳು ಹೇಗೆ ಒಂದು ಸರ್ವಾತ್ರಿಕ ಒಪ್ಪಿಗೆಯನ್ನು ತಮ್ಮ ಮೂಗಿನ ನೇರಕ್ಕೆ ರೂಪಿಸಿಬಿಡುತ್ತವೆ ಎಂದು ನಿರೂಪಿಸುವುದೇ ಆಗಿದೆ. ಈ ಬಗ್ಗೆ ನೋಮ್ ಚಾಮ್‌ಸ್ಕಿ ತನ್ನ ‘ಮ್ಯಾನುಫ್ಯಾಕ್ಚರಿಂಗ್ ಕನ್‌ಸೆಂಟ್’ ಎಂಬ ಪುಸ್ತಕದಲ್ಲಿ ಸಾಕಷ್ಟು ವಿಸ್ತೃತವಾಗಿಯೇ ಚರ್ಚಿಸುತ್ತಾನೆ. ಅಮೇರಿಕಾದಂತಹ ಅಭಿವೃದ್ಧಿಗೊಂಡ ರಾಷ್ಟ್ರದಲ್ಲಿ ಜನಾಭಿಪ್ರಾಯ ರೂಪಿಸಲು ವಿಭಿನ್ನ ಕಂಪೆನಿಗಳು ಹೇಗೆ ಮಾಧ್ಯಮವನ್ನು ಬಳಸಿಕೊಳ್ಳುತ್ತವೆ ಎಂದು ಉದಾಹರಣೆಗಳ ಸಹಿತ ಆತ ನಿರೂಪಿಸುತ್ತಾನೆ. ಇದೇ ಮಾದರಿಯ ಪ್ರಯತ್ನಗಳು ಈ ನಾಡಿನಲ್ಲಿ ಆದುದಕ್ಕೆ ‘ಅಣ್ಣಾ ಹಜಾರೆ’ ಸತ್ಯಾಗ್ರಹಕ್ಕೆ ಸಿಕ್ಕ ಪ್ರಚಾರ, ರಾಮ್‌ದೇವ್ ತರಹದ ಕಾವಿಧಾರಿಗಳನ್ನು ಕುರಿತಂತೆ ಮೂಡಿದ ಅಭಿಪ್ರಾಯ, ನಿತ್ಯಾನಂದ ಪ್ರಕರಣದ ವೈಭವೀಕರಣ ಇತ್ಯಾದಿಗಳನ್ನು ಗಮನಿಸಬಹುದು. ಇದೆಲ್ಲವೂ ವಿಭಿನ್ನ ಪ್ರಕರಣಗಳಿಗೆ ಸಂಬಂಧಿಸಿದ ಹಾಗೂ ಸಾರ್ವಜನಿಕ ಜೀವನಕ್ಕೆ ಬೃಹತ್ ಪಲ್ಲಟ ಉಂಟು ಮಾಡದಂತಹವು. ಆದರೆ ರಾಷ್ಟ್ರದ ಒಟ್ಟು ಚಿಂತನೆಯನ್ನು ಬದಲಿಸಬಹುದಾದ ಅನೇಕ ವಿಷಯಗಳನ್ನು ಸಹ ಇವೇ ಮಾಧ್ಯಮಗಳು ತಮ್ಮ ಮೂಗಿನ ನೇರಕ್ಕೆ ನಿರೂಪಿಸಿರುವುದನ್ನು ನಾವು ನೋಡಿದ್ದೇವೆ. ಅದಕ್ಕೆ ಉದಾಹರಣೆಯಾಗಿ ಮುಂಬೈನ ಮೇಲೆ ಉಗ್ರರ ದಾಳಿಯಾದಾಗ ಈ ಮಾಧ್ಯಮಗಳು ಅದನ್ನು ಚರ್ಚಿಸಿದ ಕ್ರಮವನ್ನು ಹಾಗೂ ಐಪಿಎಲ್‌ನಂತಹ ವ್ಯಾಪಾರೀ ಕ್ರಿಕೆಟ್ಟನ್ನು ‘ಯುದ್ಧ’ ಎಂಬಂತೆ ಇವೇ ಮಾಧ್ಯಮಗಳು ಪ್ರಚಾರ ನೀಡಿದ್ದನ್ನು ನಾವು ನೆನೆಯಬಹುದು. ಒಂದೆಡೆಗೆ ಶಾಂತಿದೂತರು ಎಂಬ ನಿಲುವು ಪ್ರಕಟಿಸುತ್ತಲೇ ಮತ್ತೊಂದೆಡೆ ಇವೇ ಸುದ್ದಿ ಮಾಧ್ಯಮಗಳು ಯುದ್ಧ ಮನೋಭಾವವನ್ನು ರೂಢಿಸ ಹೊರಡುವುದೇ ಇಲ್ಲಿನ ವೈರುಧ್ಯ.
ಇಂತಹ ಸುದ್ದಿವಾಹಿನಿಗಳ ಪೈಪೋಟಿಯ ನಡುವೆ ಕನ್ನಡ ಎಂಬ ಭಾಷೆಯ ಮೇಲೆ ಆಗುತ್ತಿರುವ ಆಕ್ರಮಣ ವಿಭಿನ್ನ ಬಗೆಯದು. ಸುದ್ದಿವಾಚಕರು ದೂರದರ್ಶನದ ಕಾಲಘಟ್ಟದಿಂದ ಇಂದಿಗೆ ಬದಲಾಗಿರುವ ಕ್ರಮವನ್ನು ಗಮನಿಸಿದರೆ ಕಾಣುವುದು ಸ್ಪಷ್ಟ ವಾಕ್ಯ ರಚನೆಯ ಓದಿನ ಕ್ರಮದಿಂದ ಬಿಡುಬೀಸಾದ ಮಾತಿನ ಕ್ರಮ. ಅದರೊಂದಿಗೆ ಸುದ್ದಿಯೊಂದಕ್ಕೆ ಇದ್ದ ತೂಕವೂ ಕಡಿಮೆಯಾಗಿದೆ. ಸುದ್ದಿಯೊಂದರಿಂದ ದೊರೆಯಬೇಕಿದ್ದ ಮಾಹಿತಿಗಿಂತ ರಂಜನೆಯ ಅಂಶಗಳೇ ಪ್ರಧಾನವಾಗಿದೆ. ಹೀಗೆ ಮಾಹಿತಿ, ಸಂಪರ್ಕ, ರಂಜನೆ ಎಂಬ ಪ್ರಧಾನ ಮೂರು ಅಂಶಗಳಿಗಾಗಿ ಆರಂಭವಾದ ಮಾಧ್ಯಮವು ಕೇವಲ ರಂಜನೆಯೇ ಪ್ರಧಾನವಾಗುವಂತೆ ಉಳಿದಿದೆ. ಇದರ ಪರಿಣಾಮವನ್ನು ಒಟ್ಟು ಸಮಾಜವು ಸುದ್ದಿಯನ್ನು ಗ್ರಹಿಸುವ ಕ್ರಮವೇ ಬದಲಾಗಿದೆ. ಅದನ್ನು ಸುದ್ದಿಯೊಂದರ ಬಗ್ಗೆ ಸಾಮಾನ್ಯ ಜನ ನೋಡುವ, ಗ್ರಹಿಸುವ ಕ್ರಮದಲ್ಲಿಯೇ ಗುರುತಿಸಬಹುದು.
ಧಾರಾವಾಹಿ ದುನಿಯಾ
ಇನ್ನು ಕಿರುತೆರೆಯಲ್ಲಿಯೇ ಬರುವ ಕಥಾಚಿತ್ರಗಳು ಮತ್ತು ದೈನಿಕ ಧಾರಾವಾಹಿಗಳ ವಿಷಯಕ್ಕೆ ಬರೋಣ. ಇಲ್ಲಿಯೂ ಕತೆಗಿಂತ ಆ ದಿನ ನೋಡುಗನಲ್ಲಿ ಮೂಡಿಸುವ ರೋಚಕತೆ ಮಾತ್ರ ಪ್ರಧಾನವಾಗಿದೆ. ಒಂದು ಧಾರಾವಾಹಿಗೆ ಆತ್ಮವಾದ ಕತೆ ಗೌಣವಾಗಿ ಅದರ ಸುತ್ತಲ ತಿರುವು ಮತ್ತು ಬೆರಗಿನಲಂಕಾರವೇ ಪ್ರಧಾನವಾಗಿದೆ. ಹೀಗಾಗಿ ಇಂದು ಕಥನ ಕಾರ್ಯಕ್ರಮಗಳನ್ನು ಕಿರುತೆರೆಯಲ್ಲಿ ನೋಡುವವರು ಆ ಕತೆಯ ಹೂರಣಕ್ಕಿಂತ ಆವರಣವನ್ನು ಮಾತ್ರ ಗಮನಿಸುವ ಸ್ಥಿತಿಗೆ ಬಂದಿದ್ದಾರೆ. ಇದೂ ಕೂಡ ಮಾರುಕಟ್ಟೆ ಪ್ರಣೀತ ಸೂತ್ರದನ್ವಯ ಆಗಿರುವ ಬದಲಾವಣೆ. ಒಂದು ನಾಡಿನ ಸಂಸ್ಕೃತಿಯೇ ರೂಪಿಸಿದ ಶ್ರೇಷ್ಟ ಕಾದಂಬರಿಯೊಂದು ಕಿರುತೆರೆಯಲ್ಲಿ ಮೂಡುವುದಕ್ಕಿಂತ ಮಾರುಕಟ್ಟೆಯು ತಾನು ನಿರ್ಮಿಸಿರುವ ಸಾಮಗ್ರಿಗಳನ್ನು ಮಾರುವುದನ್ನೇ ಪ್ರಧಾನ ಅಂಶವನ್ನಾಗಿಸಿಕೊಂಡು ಕತೆಗಳನ್ನು ಕಟ್ಟುತ್ತಾ ಇದೆ. ಹೀಗಾಗಿ ಪಾತ್ರದ ರಚನೆ ಮತ್ತು ಮೈವಳಿಕೆಗಳು ಕೃತ್ರಿಮತೆಯ ಪರಾಕಾಷ್ಟೆಯನ್ನು ತಲುಪಿವೆ. ಎಲ್ಲಾ ವಯೋಮಾನದ ಹೆಣ್ಣು ಪಾತ್ರಗಳೂ ಸಹ ಈಗಷ್ಟೇ ಬ್ಯೂಟಿಪಾರ್ಲರ್‌ನಿಂದ ಬಂದಿವೆ ಎಂಬಂತೆ ಕಾಣುವುದು ಒಂದೆಡೆಯಾದರೆ, ಆ ಪಾತ್ರಧಾರಿಗಳಿಗೆ ತಮ್ಮ ಹೊರ ಅಲಂಕಾರ ಮತ್ತು ವಸ್ತ್ರದ ವಿವರಗಳು ಮುಖ್ಯವಾಗಿ ಮುಖಭಾವ ಮತ್ತು ನಟನೆಗೆ ಅಗತ್ಯವಾದ ರಸೋತ್ಪತ್ತಿ ಎನ್ನುವುದು ಬಹುತೇಕ ಇಲ್ಲವಾಗಿದೆ. ಇದರ ಪರಿಣಾಮವಾಗಿ ಇಂದು ಕಿರುತೆರೆಯಲ್ಲಿರುವ ಬಹುತೇಕರು ಕಲಾವಿದರು ಎನ್ನುವುದಕ್ಕಿಂತ ಬಣ್ಣಬಳಿದುಕೊಂಡ ಜೀವಗಳ ಹಾಗೆ ಕಾಣುತ್ತಾ ಇದ್ದಾರೆ. ಇಂತಹ ಜನ ಕಟ್ಟಿಕೊಡುವ ಭಾಷೆಯೂ ಸಹ ಆ ಸಂಸ್ಕೃತಿಯನ್ನು ಕಟ್ಟುವ ದಾರಿಗೆ ಹೋಗದೆ ಇಡಿಯಾಗಿ ಜನಮನವನ್ನು ಕೃತ್ರಿಮಗೊಳಿಸುತ್ತಿದೆ. ಒಂದು ವಾಕ್ಯದಲ್ಲಿ ಪೂರ್ಣವಿರಾಮ ಇರುವ ಹಂತದಲ್ಲಿ ಉಸಿರು ಸ್ವೀಕರಿಸಿ ಮುಂದಿನ ವಾಕ್ಯಕ್ಕೆ ಹೋಗಬೇಕು ಎಂಬ ನಟನೆಯ ಆರಂಭಿಕ ಪಾಠವನ್ನು ಸಹ ಬಿಟ್ಟುಕೊಟ್ಟವರಂತೆ, ವಾಕ್ಯವೊಂದರಲ್ಲಿಯೇ ಮೂರು ನಾಲ್ಕು ತುಂಡುಗಳನ್ನು ಮಾಡಿಕೊಂಡು ಮಾತಾಡುವ ಕಲಾವಿದರು ಹೆಚ್ಚಾಗಿದ್ದಾರೆ. ಈ ಲೇಖನ ಬರೆಯುವ ಹೊತ್ತಿಗೆ ಕನ್ನಡದಲ್ಲಿ ದೈನಿಕ ಧಾರಾವಾಹಿಗಳಾಗಿ ೬೫ ಕಾರ್ಯಕ್ರಮಗಳು ಬರುತ್ತಿವೆ. ಅವುಗಳಲ್ಲಿ ನಾಲ್ಕು ಅಥವಾ ಐದು ಮಾತ್ರ ಮೂಲ ಕನ್ನಡ ಕತೆಗಳನ್ನು ಹೊಂದಿವೆ. ಉಳಿದವು ಇನ್ಯಾವುದೋ ಭಾಷೆಯಿಂದ ಎರವಲು ತಂದ ಕಥಾಹಂದರಗಳು ಅಥವಾ ಪುನರವತರಣಿಕೆಗಳು. ಹೀಗಿದ್ದಾಗ ಭಾಷೆಯನ್ನು ಅಥವಾ ಸಂಸ್ಕೃತಿಯನ್ನು ಕಟ್ಟುವ ಕೆಲಸ ಇಂತಹ ಮಾಧ್ಯಮದಿಂದ ಆದೀತೇ ಎಂಬುದೇ ದೊಡ್ಡ ಪ್ರಶ್ನೆ.
ಈ ಪರಿಸ್ಥಿತಿಗೆ ಕಾರಣಗಳು ಅನೇಕ. ಮೊದಲ ಮತ್ತು ಬಹುಮುಖ್ಯ ಕಾರಣ ನಮ್ಮಲ್ಲಿನ ಬಹುತೇಕ ಟೆಲಿವಿಷನ್ ವಾಹಿನಿಗಳನ್ನು ನಡೆಸುತ್ತಾ ಇರುವವರು ಕನ್ನಡಿಗರಲ್ಲ. ಹೀಗಾಗಿ ಆಯಾ ವಾಹಿನಿಯಲ್ಲಿ ಕೆಲಸ ಮಾಡುತ್ತಾ ಇರುವ ಅನೇಕ ಕನ್ನಡಿಗರಿದ್ದರೂ ಆ ವಾಹಿನಿಗಳಲ್ಲಿ ಕನ್ನಡದ ಅಗತ್ಯ ಪೂರೈಸುವ ಚಟುವಟಿಕೆಗಿಂತ ಆಯಾ ವಾಹಿನಿಯ ಮಾಲೀಕನನ್ನು ಮೆಚ್ಚಿಸುವ ಕೆಲಸ ಆಗುತ್ತಿದೆ. ಇದರೊಂದಿಗೆ ಬಹುತೇಕ ವಾಹಿನಿಗಳಿಗೆ ಕಾರ್ಪೋರೇಟ್ ಅಧಿಕಾರಶಾಹಿ ವ್ಯವಸ್ಥೆಯಿದೆ. ಇಂತಲ್ಲಿ ಪ್ರಸಾರವಾಗುವ ಕಾರ್ಯಕ್ರಮ ವಾರಾಂತ್ಯದಲ್ಲಿ ನೀಡುವ ಜನಪ್ರಿಯತೆಯ ಸಂಖ್ಯೆ ಮಾತ್ರ ಮುಖ್ಯವಾಗುತ್ತದೆ. ಇನ್ನೆಲ್ಲ ವಿವರಗಳು ನಗಣ್ಯವಾಗಿ ಬಿಡುತ್ತವೆ. ಇದರಿಂದಾಗಿ ಬಹುತೇಕ ಕನ್ನಡ ಟೆಲಿವಿಷನ್ ವಾಹಿನಿಗಳಲ್ಲಿ ಕನ್ನಡವನ್ನು ಭಾಷೆಯಾಗಿ ಉಳಿಸುವ ಕೆಲಸ ಆಗುವುದಕ್ಕೆ ಬದಲಾಗಿ ಜಾಹೀರಾತು ಮಾರುಕಟ್ಟೆಯನ್ನು ಒಲಿಸಿಕೊಳ್ಳುವ ಕೆಲಸ ಮಾತ್ರ ಆಗುತ್ತಿದೆ.
ಸಿನಿಮಾ ಎಂಬ ನಾಯಕಮಣಿಗಳ ಜಗತ್ತು
ಇದೇ ಕಾಲಘಟ್ಟದ ಸಿನಿಮಾ ಅಥವಾ ಹಿರಿತೆರೆಯ ಜನಪ್ರಿಯಧಾರೆಯನ್ನು ಗಮನಿಸಿದರೆ ಪರಿಸ್ಥಿತಿ ಭಿನ್ನವಾಗಿಲ್ಲ. ಕನ್ನಡ ಸಿನಿಮಾ ಲೋಕದ ಪ್ರಖ್ಯಾತ ನಿರ್ದೇಶಕರೊಬ್ಬರು ಹೇಳುವ ಪ್ರಕಾರ, ‘ಇಂದು ಸಿನಿಮಾಗೆ ಕತೆಯೇ ಬೇಕಾಗಿಲ್ಲ. ಘಟನೆಯಿಂದ ಘಟನೆಗೆ ಎಂಬಂತೆ ಪಾತ್ರಗಳನ್ನು ನಡೆಸುತ್ತಾ, ಆ ಘಟನೆಯಲ್ಲಿನ ಹಾಸ್ಯವನ್ನು ಅಥವಾ ದುಃಖವನ್ನು ಕಟ್ಟಿಕೊಟ್ಟರೆ ಸಾಕು.’ ಈ ಮಾತಿನ ಹೂರಣವು ಅದಾಗಲೇ ಕಿರುತೆರೆಯ ಬಗ್ಗೆ ಆಡಿದ ವಿವರಗಳಂತೆಯೇ ಇದೆ. ಹೀಗಾಗಿ ಕೇವಲ ಎರಡು ದಶಕಗಳ ಹಿಂದೆ ಇದ್ದಂತಹ ಕತೆಯನ್ನು ಕಟ್ಟಿಕೊಡುತ್ತಿದ್ದ ಸಿನಿಮಾಗಳು ಇಂದು ನೋಡುಗನನ್ನು ಆ ನಿಮಿಷದ ಮನರಂಜನೆಯಲ್ಲಿ ಮುಳುಗಿಸಲು ನಿಟ್ಟುಸಿರು ಬಿಡುತ್ತಿವೆ. ಈ ಪರಿಸ್ಥಿತಿಯಲ್ಲಿ ಹೊಸದಾಗಿ ಕತೆ ಹೆಣೆಯುವ ಸರ್ಕಸ್ ಬೇಡವೆಂದು ಬಹುತೇಕ ನಿರ್ಮಾಪಕರು ಪುನರವತರಣಿಕೆಗಳನ್ನು ಮಾಡುತ್ತಾ ಇದ್ದಾರೆ. ಇದು ಸೃಜನಶೀಲ ಶಕ್ತಿಗಳನ್ನು ಮೂಲೆಗುಂಪು ಮಾಡಿದೆ. ಇಂದು ಕನ್ನಡ ಚಿತ್ರರಂಗದಲ್ಲಿ ಪ್ರತಿಭೆಗಳ ಮಹಾಪೂರವೇ ಇದ್ದರೂ ಅವರಿಗೆ ಸರಿಯಾದ ವೇದಿಕೆಯೇ ದೊರಕುತ್ತಿಲ್ಲ ಎಂಬುದು ನಿಚ್ಚಳ ಸತ್ಯ. ಆದರೆ ಕನ್ನಡ ಚಿತ್ರ ನಿರ್ಮಾಪಕರು ಮಾತ್ರ ‘ನಮ್ಮಲ್ಲಿ ಕತೆಗಾರರಿಲ್ಲ, ಕತೆ ಇಲ್ಲ’ ಎಂದು ಅಸಡ್ಡಾಳ ಮಾತುಗಳನ್ನಾಡುತ್ತಾ ಇರುವುದನ್ನು ಕಾಣುತ್ತಾ ಇದ್ದೇವೆ.
ಇದರೊಂದಿಗೆ ಈ ದೇಶದ ಬಹುತೇಕ ಚಿತ್ರೋದ್ಯಮಗಳಂತೆಯೇ ನಮ್ಮ ಕನ್ನಡ ಚಿತ್ರೋದ್ಯಮವೂ ಸಹ ಕಳೆದ ನಾಲ್ಕೈದು ದಶಕಗಳಿಂದ ನಾಯಕರನ್ನು ಪೋಷಿಸುತ್ತಾ ತನ್ನ ಅನ್ನ ಹುಟ್ಟಿಸಿಕೊಳ್ಳುತ್ತಿದೆ. ನಾಯಕನ ಜನಪ್ರಿಯತೆಯೇ ಸಿನಿಮಾದ ಮೂಲ ಬಂಡವಾಳ ಎಂಬಂತಹ ಪರಿಸ್ಥಿತಿಯನ್ನು ಚಿತ್ರೋದ್ಯಮ ತಾನೇ ನಿರ್ಮಿಸಿಕೊಂಡಿದೆ. ಹೀಗಾಗಿ ನಾಯಕನ ಆಯ್ಕೆಯೇ ನಿರ್ಮಾಪಕನ ಆಯ್ಕೆಯೂ ಆಗಿರುವಂತಹ ಪರಿಸ್ಥಿತಿ ಇದೆ. ಅನೇಕ ಬಾರಿ ಕತೆ ಮತ್ತು ನಿರ್ದೇಶಕ ಆಯ್ಕೆಯಾಗುವುದಕ್ಕೂ ಮುನ್ನ ನಾಯಕನ ಆಯ್ಕೆಯಾಗಿರುತ್ತದೆ. ಆಯಾ ನಾಯಕನಿಗಾಗಿ ಕತೆ ಹೆಣೆಯುವ, ಆತನ ವರ್ಚಸ್ಸಿಗೆ ತಕ್ಕಂತೆ ಕಥನ ರೂಪಿಸುವ ಕೆಲಸ ನಡೆಯುತ್ತಾ ಇರುತ್ತದೆ. ಈ ನಾಯಕ ಮಣಿಗಳಲ್ಲಿ ಬಹುತೇಕರಿಗೆ ಕನ್ನಡ ಸಂಸ್ಕೃತಿಯ ಬಗ್ಗೆ ತಿಳುವಳಿಕೆ ಇಲ್ಲ ಎಂಬುದು ಮತ್ತೊಂದು ಕಠೋರ ಸತ್ಯ. ಹೀಗಾಗಿ ಈ ನಾಯಕರು ಆಯ್ದುಕೊಳ್ಳುವ ಕತೆಗೆ ಅವರವರ ಅಭಿಮಾನಿಗಳನ್ನು ವೃದ್ಧಿಸುವ ಗುಣವಿರುತ್ತದೆಯಷ್ಟೆ. ಇಂತಹ ಕತೆಗಳಲ್ಲಿ ಭಾಷೆ ಎಂಬ ಸಂಸ್ಕೃತಿಯ ಮೂಲಬೇರನ್ನು ರೂಢಿಸುವ ಸಣ್ಣ ಪ್ರಯತ್ನವೂ ಇರುವುದಿಲ್ಲ. ಅಕಸ್ಮಾತ್ ಭಾಷೆಯ ಕುರಿತ ಚರ್ಚೆ ಕಂಡಲ್ಲಿ ಅದು ಆಯಾ ಸಿನಿಮಾದ ಮೊದಲರ್ಧದಲ್ಲಿ ಅದೇ ನಾಯಕನನ್ನು ಬಳಸಿ ಮಾಡಿದ ಒಂದು ಕನ್ನಡ ಕುರಿತ ಹಾಡಿಗೆ ಮಾತ್ರ ಸೀಮಿತವಾಗಿರುತ್ತದೆಯಷ್ಟೆ.
ಇವುಗಳಾಚೆಗೆ ಇಂತಹ ಸಿನಿಮ ಸಂಸ್ಕೃತಿಯಲ್ಲಿ ಅಭಿನಯದ ಸಾವು ಸಹ ನಿರಂತರವಾಗಿ ಆಗುತ್ತಿದೆ ಎಂಬುದನ್ನು ಗಮನಿಸಬೇಕು. ನಮ್ಮಲ್ಲಿನ ನಾಯಕರಿಗೆ ತಮ್ಮ ಪಾತ್ರವಷ್ಟೇ ಮುಖ್ಯವಾಗಿ, ಆ ಪಾತ್ರದ ಆಸುಪಾಸಿನಲ್ಲಿ ಇರುವ ಇನ್ನಿತರ ಪೋಷಕ ಪಾತ್ರಗಳನ್ನು ಸುಪುಷ್ಟವಾಗಿಸುವ ಆಸಕ್ತಿ ಇರುವುದಿಲ್ಲ. ಹೀಗಾಗಿ ಕನ್ನಡ ಚಿತ್ರೋದ್ಯಮದ ಬಹುತೇಕ ಪೋಷಕ ಕಲಾವಿದರು ತಮ್ಮ ಪ್ರತಿಭಾ ಪ್ರದರ್ಶನಕ್ಕೆ ಅವಕಾಶ ಇಲ್ಲವೆಂದು ಕೊರಗುವುದನ್ನು ಕಂಡಿದ್ದೇವೆ. ಈ ಮಾತಿಗೆ ಅಪವಾದಗಳಿವೆ. ಆದರೆ ಅಂತಹ ಸಿನಿಮಾಗಳ ಸಂಖ್ಯೆ ತೀರಾ ಗೌಣವೆನಿಸುವಷ್ಟಿದೆ. ಇದನ್ನು ಸಮಕಾಲೀನ ಚಲನಚಿತ್ರ ಚರಿತ್ರೆಯ ದುರಂತ ಎನ್ನಬಹುದು.
ಕಲಾತ್ಮಕ ಚಿತ್ರಗಳು ಇಂತಹ ಮೌಢ್ಯಗಳಿಂದ ದೂರ ಉಳಿದಿವೆ. ಆದರೆ ಅವುಗಳನ್ನು ಪ್ರದರ್ಶಿಸಲು ಇರುವ ಅವಕಾಶಗಳು ಕಡಿಮೆಯಾಗಿರುವುದರಿಂದ ಉತ್ತಮ ಪ್ರಯೋಗಗಳು ಕನ್ನಡ ಜನಮಾನಸದ ಕಣ್ಣಿಗೆ ತಾಗುತ್ತಿಲ್ಲ. ಇದರಿಂದಾಗಿ ಗಿರೀಶರ ‘ಕನಸೆಂಬೋ ಕುದುರೆಯನೇರಿ’ಯಂತಹ ಸಿನಿಮಾದಲ್ಲಿ ಬಿರಾದರ್ ಅಂತಹ ಕಲಾವಿದ ಅಪರೂಪ ಎನಿಸುವ ನಟನೆಯನ್ನು ಮಾಡಿದ್ದರು, ಅದನ್ನು ನೋಡಿ, ಆನಂದಿಸಿ, ಬೆನ್ನು ತಟ್ಟಿದ ಕನ್ನಡಿಗರ ಸಂಖ್ಯೆ ಕಡಿಮೆ. ಇದೇ ಮಾತನ್ನು ಕನ್ನಡದ ಇನ್ನೂ ಅನೇಕ ಚಿತ್ರಗಳನ್ನು ಕುರಿತು ಹೇಳಬಹುದು. ನಾಯಕ ಪ್ರಣೀತವಲ್ಲದ್ದು ಬಾಳುವುದಿಲ್ಲ ಎಂಬಂತಹ ವಾತಾವರಣವನ್ನು ನಾವೇ ಸೃಷ್ಟಿಸಿಕೊಂಡಿದ್ದೇವೆ. ಹೀಗಾಗಿ ಒಳ್ಳೆಯದು ಎಂದು ಗುರುತಿಸಬಹುದಾದ್ದು ಪ್ರೇಕ್ಷಕರ ಬಳಿಗೆ ತಲುಪುತ್ತಿಲ್ಲ. ತಲುಪುತ್ತಾ ಇರುವುದು ನಾಡಿಗೆ ಮತ್ತು ಭಾಷೆಗೆ ಒಳ್ಳೆಯದನ್ನು ಮಾಡುತ್ತಿಲ್ಲ ಎಂಬ ಇಕ್ಕಟ್ಟಿನ ಪರಿಸ್ಥಿತಿಯಲ್ಲಿ ಇದ್ದೇವೆ.
ಇಂತಹ ಸಂದರ್ಭದಲ್ಲಿ ನಾಡಿನ ಒಂದು ಬಣ ಇತರೆ ಭಾಷೆಯ ಸಿನಿಮಾಗಳನ್ನು ಕನ್ನಡಕ್ಕೆ ಮಾತಿನ ಮರುಲೇಪನ ಮಾಡುವುದೇ ಉತ್ತಮ ಎಂಬ ಮಾತನ್ನೂ ಆಡುತ್ತಿದೆ. ಇದು ಆ ಮಾತಾಡುತ್ತಾ ಇರುವವರ ತಪ್ಪಲ್ಲ. ನಮ್ಮಲ್ಲಿ ತಯಾರಾಗುತ್ತಿರುವ ‘ಜನಪ್ರಿಯ ಸರಕು’ ಹುಳುಕು ಹಿಡಿದಿದೆ. ಹಾಗಾಗಿ ಕನ್ನಡ ನೋಡುಗ ಉತ್ತಮವಾದುದನ್ನು ಕನ್ನಡದಲ್ಲಿ ನೋಡಬೇಕೆಂಬ ಆಸೆಯಿಂದಲೇ ಇತರೆ ಭಾಷೆಯ ಸಿನಿಮಾಗಳನ್ನು ಕನ್ನಡಕ್ಕೆ ತರ್ಜುಮೆ ಮಾಡಿ ಬಿಡುಗಡೆಗೊಳಿಸಿ ಅನ್ನುತ್ತಾ ಇದ್ದಾನೆ. ಆದರೆ ಇದು ಇನ್ನೂ ದೊಡ್ಡ ಅಪಾಯಕ್ಕೆ ಕನ್ನಡವನ್ನು ತಳ್ಳಿದಂತಾಗುತ್ತದೆ. ಮೊದಲಿಗೆ ಕಳೆದ ಐದು ದಶಕಗಳಿಂದ ದೂರ ಇಟ್ಟಿದ್ದ ಖಾಯಿಲೆಯೊಂದನ್ನು ನಾವೇ ಮನೆಗೆ ಆಹ್ವಾನಿಸದಂತಾಗುತ್ತದೆ. ನಂತರ; ಈ ಡಬ್ಬಿಂಗ್ ಪಿಡುಗಿನಿಂದಾಗಿ ನಾವು ತುಟಿಚಲನೆಗಾಗಿ ಜೋಡಿಸುವ ಮಾತಿನ ಸರಣಿಯ ಕೃತ್ರಿಮತೆಯು ಅದೇ ಸ್ವರೂಪದಲ್ಲಿ ನಮ್ಮ ಮುಂದಿನ ತಲೆಮಾರುಗಳಿಗೆ ತಲುಪಿ, ಭಾಷೆಯ ಅಂದವನ್ನೇ ನಾಶ ಮಾಡುತ್ತದೆ. ಮೂಲ ಭಾಷೆಯ ವಾಕ್ಯ ರಚನಾ ಕ್ರಮದಲ್ಲಿ ಮೂಡುವ ಪ ವರ್ಗದ ಮಾತುಗಳಿಗೆ ಹೊಂದುವ ಹಾಗೆ ಕನ್ನಡದ ಮಾತನ್ನು ಕಟ್ಟಿ, ತುಟಿ ಚಲನೆಗೆ ತಕ್ಕಂತೆ ಕನ್ನಡಿಗರಿಂದ ಆ ಮಾತಾಡಿಸುವುದರಿಂದಾಗಿ ನಮ್ಮ ಭಾಷೆಯ ಮಾತು ಕಟ್ಟುವ ಕ್ರಮ ದಿಕ್ಕಾಪಾಲಾಗುತ್ತದೆ. ಉದಾಹರಣೆಗೆ ಎಂದು ಗಮನಿಸಿ ‘ಮೇ ತುಝೇ ಪ್ಯಾರ್ ಕರ್‌ತಾ ಹೂಂ’ ಎಂಬ ಹಿಂದಿ ನುಡಿಗಟ್ಟನ್ನು, ‘ಐ ಸ್ಲೆಪ್ಟ್ ವಿತ್ ಮೈ ಬಾಯ್‌ಫ್ರೆಂಡ್ ಮಮ್ಮಿ!’ ಎಂಬ ಇಂಗ್ಲೀಷ್ ನುಡಿಕಟ್ಟನ್ನು ಕನ್ನಡಕ್ಕೆ ಪವರ್ಗದಲ್ಲಿ ಪವರ್ಗದ ಕನ್ನಡ ಶಬ್ದ ಹುಟ್ಟುವಂತೆ ತರ್ಜುಮೆ ಮಾಡಿ ನೋಡಿ. ಡಬ್ಬಿಂಗ್ ಪಿಡುಗು ಎಂತಹ ಅವಗಢ ಸೃಷ್ಟಿಸಬಲ್ಲದು ಎಂಬುದು ತಕ್ಷಣವೇ ತಿಳಿಯುತ್ತದೆ. ಇದನ್ನರಿಯದ ಜನ, ನಮ್ಮಲ್ಲಿ ತಯಾರಾಗುತ್ತಿರುವ ಜನಪ್ರಿಯ ಸರಕನ್ನು ಬೈಯ್ಯಲೆಂಬಂತೆ ಡಬ್ಬಿಂಗ್ ಬರಲಿ ಎನ್ನುತ್ತಾ ಇದ್ದಾರೆ. ಆದರೆ ಆ ಪಿಡುಗು ಕನ್ನಡಕ್ಕೆ ಮರಳಿ ಬರುವುದು ಎಂದರೆ ತಾಯಿಬೇರಿಗೆ ಕೊಡಲಿ ಹಾಕಿದಂತಾಗುತ್ತದೆ.
ಈ ಎಲ್ಲಾ ಹಿನ್ನೆಲೆಯಲ್ಲಿ ಗಮನಿಸಿದಾಗ ಇಂದು ಮಾಧ್ಯಮ ಎಂಬುದು, ವಿಶೇಷವಾಗಿ ದೃಶ್ಯ ಮಾಧ್ಯಮ ಮತ್ತು ಶ್ರವ್ಯ ಮಾಧ್ಯಮಗಳು ನಮ್ಮ ಭಾಷೆಯನ್ನು ಕಟ್ಟುವ ಕೆಲಸ ಮಾಡುವುದಕ್ಕಿಂತ ಹೆಚ್ಚು ಭಾಷಾವಿನಾಶದ ಕೆಲಸ ಮಾಡುತ್ತಿವೆ. ನಾವು ನಮ್ಮ ಭಾಷೆಯನ್ನು, ಸಂಸ್ಕೃತಿಯನ್ನು ಈ ಮಾಧ್ಯಮಗಳ ಮೂಲಕವೇ ಮುಂದಿನ ತಲೆಮಾರಿಗೆ ದಾಟಿಸಬೇಕಿದೆ. ಈ ಹಿನ್ನೆಲೆಯಲ್ಲಿ ನಾವು ನಮ್ಮ ಮಾಧ್ಯಮಗಳನ್ನು ಪುನರ್‌ನಿರ್ಮಾಣಕ್ಕೆ ಒಡ್ಡಬೇಕಿದೆ. ಕನ್ನಡ ದೃಶ್ಯ ಮಾಧ್ಯಮಗಳಿಗಾಗಿ ಪ್ರತ್ಯೇಕ ಸಂಹಿತೆಯೊಂದನ್ನು ಸಿದ್ಧಪಡಿಸಿಕೊಳ್ಳಬೇಕಿದೆ. ಕನ್ನಡ ಪ್ರೀತಿಯ ಜೊತೆಗೆ ಕಾರ್ಯಕ್ರಮಗಳನ್ನು ರೂಪಿಸಬೇಕಿದೆ. ಲಾಭ ಎನ್ನುವುದು ವಾರಂತ್ಯದಲ್ಲಿ ದೊರೆಯುವ ಸಂಖ್ಯೆಯಿಂದ ಬರುವ ತೈಲಿಯಲ್ಲ ಅದು ಭಾಷೆಯ ಮೇಲೆ ಆಗುವ ಪರಿಣಾಮ ಎಂಬುದರ ಅರಿವಿನೊಂದಿಗೆ ಕನ್ನಡದ ಕಾರ್ಯಕ್ರಮಗಳನ್ನು ರೂಪಿಸಬೇಕಿದೆ. ಈ ನಿಟ್ಟಿನಲ್ಲಿ ಈ ಮಾಧ್ಯಮದಲ್ಲಿ ದುಡಿಯುತ್ತಿರುವ ಎಲ್ಲಾ ಕನ್ನಡ ಮನಸ್ಸುಗಳೂ ಆಲೋಚಿಸಬೇಕಿದೆ.
- ಬಿ.ಸುರೇಶ
೨೩ ಸೆಪ್ಟಂಬರ್ ೨೦೧೧
ಬೆಂಗಳೂರು

ಏರುತ್ತ್ತಿರುವ ಬೆಲೆಗಳು ಮತ್ತು ಅಷ್ಟೇ ಇರುವ ಕೂಲಿ! (ಟಿವಿಠೀವಿ ಪತ್ರಿಕೆಯ ‘ಸಂಘಸುಖ’ ಕಾಲಂಗಾಗಿ – ಆಗಸ್ಟ್ ೨೦೧೧)

ಕನಿಷ್ಟ ವೇತನ ನಿಷ್ಕರ್ಷೆ ಆಗಬೇಕಿದೆ

ಚಿನ್ನದ ಬೆಲೆ ೨೭ ಸಾವಿರ ಮುಟ್ಟಿದೆ. ಪೆಟ್ರೋಲಂತೂ ಲೀಟರಿಗೆ ೭೦/- ಆಗಿದೆ. ಇನ್ನೇನೂ ಅದು ನೂರರ ಗಡಿ ಮುಟ್ಟಲಿದೆ ಎಂಬ ಮಾತೂ ಕೇಳುತ್ತಿದೆ. ಇದೇ ಹೊತ್ತಿಗೆ ನಾಡಿಗೆ ಶ್ರಾವಣದ ಸಂಭ್ರಮ. ಹಬ್ಬಗಳ ಸಾಲು ಒಂದರ ಹಿಂದೆ ಒಂದರಂತೆ ಬರುತ್ತಿದೆ. ಹೀಗಿರುವಾಗ ನಮ್ಮ ಉದ್ಯಮದಲ್ಲಿ ದುಡಿಯುತ್ತಾ ಇರುವವರಿಗೆ ಸಿಗುತ್ತಿರುವ ಕೂಲಿ ಮಾತ್ರ ನಾಲ್ಕು ವರ್ಷದ ಹಿಂದಿನ ಒಪ್ಪಂದದಂತೆಯೇ ಇಂದಿಗೂ ನಡೆಯುತ್ತಿದೆ. ಅದರಲ್ಲಿ ಕೆಲವು ನಿರ್ಮಾಪಕರಂತೂ ತಮ್ಮಲ್ಲಿ ಕೆಲಸ ಮಾಡುವವರನ್ನು ಇನ್ನೂ ಹಳೆಯ ಜಮೀನ್ದಾರೀ ಪದ್ಧತಿಯಂತೆಯೇ ನಡೆಸಿಕೊಳ್ಳುತ್ತಾ ಇದ್ದಾರೆ. ಹೀಗಾಗಿ ನಮ್ಮ ಉದ್ಯಮದಲ್ಲಿ ದಿನಗೂಲಿಗಾಗಿ ಕೆಲಸ ಮಾಡುತ್ತಿರುವ ಪಾಡು ಅಸಹನೀಯವಾಗುತ್ತಿದೆ. ನಮ್ಮಲ್ಲಿನ ಕಲಾವಿದರ ಪರಿಸ್ಥಿತಿ ಹೀಗೇನಿಲ್ಲ. ಕಲಾವಿದರು ತಮ್ಮ ಸಂಬಳವನ್ನು ದಿನವೊಂದಕ್ಕೆ ಕನಿಷ್ಟ ಎರಡು ಸಾವಿರದಿಂದ ಐದು ಸಾವಿರದವರೆಗೆ ಹೆಚ್ಚು ಮಾಡಿಕೊಂಡಿದ್ದಾರೆ. ತಂತ್ರಜ್ಞರು ಸಹ ತಮ್ಮ ಅಳವಿಗೆ ಆಗುವಷ್ಟು ಸಂಬಳ ಹೆಚ್ಚಿಸಿಕೊಂಡಿದ್ದಾರೆ. ಆದರೆ ಹೀಗೆ ಕೂಲಿ ಏರಿಸಿಕೊಳ್ಳುವ ಸೌಲಭ್ಯ ಮಾತ್ರ ನಮ್ಮ ದಿನಗೂಲಿ ಕಾರ್ಮಿಕರಿಗೆ ಇಲ್ಲ ಎಂಬುದು ಖೇದದ ಸಂಗತಿ. ಆ ಜನಕ್ಕೆ ಒಗ್ಗೂಡಿ ಹೋರಾಡುವ ಅವಕಾಶವೂ ಇಲ್ಲದಂತೆ ನಮ್ಮಲ್ಲಿನ ಬಹುತೇಕ ನಿರ್ಮಾಪಕರು ಎರಡನೆಯ ಭಾನುವಾರವೂ ಚಿತ್ರೀಕರಣ ಇಟ್ಟುಕೊಳ್ಳುತ್ತಾರೆ. ದಿನಗೂಲಿ ಕಾರ್ಮಿಕರು ಒಗ್ಗೂಡಿ, ಒಂದೆಡೆ ಸೇರಿ ತಮ್ಮ ಸಮಸ್ಯೆಯನ್ನು ಮಾತಾಡಿಕೊಳ್ಳುವುದಕ್ಕೆ ಬೇಕಾದ ಬಿಡುವೇ ಸಿಗದಂತಹ ಪರಿಸ್ಥಿತಿಯಿದೆ.

ಈ ಸಮಸ್ಯೆಯನ್ನು ದಾಟಿಕೊಳ್ಳುವುದಕ್ಕೆ ಕರ್ನಾಟಕ ಟೆಲಿವಿಷನ್ ಅಸೋಸಿಯೇಷನ್‌ನ ಕಾರ್ಯಕಾರಿ ಸಮಿತಿಯು ಸ್ವತಃ ಮುಂದಾಗಬೇಕಿದೆ. ಈ ಉದ್ಯಮದ ದಿನಭತ್ಯೆ ಕಾರ್ಮಿಕರ ಸಮಾವೇಶವೊಂದನ್ನು ನಿಗದಿಪಡಿಸಿ, ಆ ದಿನ ಎಲ್ಲಾ ಕಾರ್ಮಿಕರು ಸೇರುವಂತೆ ಮಾಡಿ, ಸಮಸ್ಯೆಗಳನ್ನು ಚರ್ಚಿಸುವುದಲ್ಲದೆ, ದಿನಗೂಲಿ ಹೆಚ್ಚಿಸಲು ಕಾರ್ಮಿಕ ಮುಖಂಡರ ಮತ್ತು ಹಾಗೂ ನಿರ್ಮಾಪಕರ ಪ್ರತಿನಿಧಿಗಳ ಸಭೆಯನ್ನು ನಡೆಸಿ, ಹೊಸ ಒಪ್ಪಂದ ಮಾಡಬೇಕಿದೆ.

ಈ ಮಾತನ್ನು ಇಲ್ಲಿ ಆಡುತ್ತಿರುವುದಕ್ಕೆ ಕಾರಣವಿದೆ. ಈಚೆಗೆ ರಾಷ್ಟ್ರ ಮಟ್ಟದಲ್ಲಿ ನೀಡ್ ಬೇಸ್ಡ್ ಮಿನಿಮಮ್ ವೇಜಸ್ ಜಾರಿಗೆ ತರುವ ಪ್ರಯತ್ನವಾಗುತ್ತಾ ಇದೆ. ಇಂತಹದೊಂದು ವರದಿಯ ಪ್ರಕಾರ  ದುಡಿಯುವ ವ್ಯಕ್ತಿಗೆ ಅವನ ಅಗತ್ಯಗಳನ್ನಾಧರಿಸಿ ಕೂಲಿಯನ್ನು ನಿಷ್ಕರ್ಷೆ ಮಾಡಲಾಗುತ್ತದೆ. ಹೀಗೆ ಮಾಡಲಾದಲ್ಲಿ ಬೆಂಗಳೂರು ನಗರಿಯಲ್ಲಿ ದುಡಿವ ಕಾರ್ಮಿಕನೊಬ್ಬನಿಗೆ ತಿಂಗಳಿಗೆ ಕನಿಷ್ಟ ಹನ್ನೆರಡರಿಂದ ಹದಿಮೂರು ಸಾವಿರ ರೂಪಾಯಿಗಳ ವೇತನ ಸಿಗುತ್ತದೆ. ಈ ವರದಿಯು ಮಾರ್ಚ್ ೨೦೧೧ರದು. ಇಂದಿನ ಲೆಕ್ಕ ಹಾಕುವುದಾದರೆ ಈ ಮಿತಿಯೂ ಇನ್ನೂ ಒಂದೆರಡು ಸಾವಿರಗಳಷ್ಟು ವ್ಯತ್ಯಾಸವಾಗುತ್ತದೆ. ಈ ವರದಿಯ ಆಧಾರದಲ್ಲಿ ಗಮನಿಸುವುದಾದರೆ ನಮ್ಮ ಉದ್ಯಮದಲ್ಲಿ ದುಡಿಯುವ ಕನಿಷ್ಟ ವೇತನದ ದಿನಭತ್ಯೆಯ ಕಾರ್ಮಿಕನಿಗೆ (ಆತ ತಿಂಗಳಲ್ಲಿ ೨೦ ದಿನ ಮಾತ್ರ ಕೆಲಸ ಮಾಡಬಹುದು ಎಂಬ ಅಂದಾಜಿನೊಂದಿಗೆ) ಎಂಟು ಗಂಟೆಗಳ ಕೆಲಸಕ್ಕೆ ಕನಿಷ್ಟ ರೂ. ೫೦೦/- ಸಿಗಬೇಕಾಗುತ್ತದೆ. ಇದು ನಿರ್ಮಾಣ ಸಹಾಯಕರಿಗೆ ಸಿಗುವ ಹಣವಾದರೆ ಇನ್ನುಳಿದ ಆತನಿಗೂ ಮೇಲ್ಮಟ್ಟದ ಕಾರ್ಮಿಕರಿಗೆ ಇನ್ನೂ ಹೆಚ್ಚು ಹಣ ಸಿಗಬಹುದು. ಆ ಮಟ್ಟದ ಹಣ ಸಿಕ್ಕಾಗ ಮಾತ್ರ ನಮ್ಮ ಕಾರ್ಮಿಕರ ಮನೆಗಳಲ್ಲೂ ನೆಮ್ಮದಿ ಮೂಡಬಹುದು. ಇದಕಾಗುವುದಕ್ಕೆ ನಿರ್ಮಾಪಕರ ಹಾಗೂ ಕಾರ್ಮಿಕ ನಾಯಕರ ಜಂಟಿ ಸಭೆ ಆಗಬೇಕು. ಅದಾಗುವುದಕ್ಕೆ ಕಾರ್ಮಿಕರನ್ನು ಒಂದುಗೂಡಿಸುವ ಸಭೆ ಆಗುವುದು ಅಗತ್ಯವಿದೆ.

ಕಾರ್ಮಿಕ ಸ್ವಾಸ್ಥ್ಯ ಬಿಮಾ ಯೋಜನಾ

ಇದಲ್ಲದೆ ಈಚೆಗೆ ಕೇಂದ್ರದ ಕಾರ್ಮಿಕ ಸಚಿವರನ್ನು ಖುದ್ದಾಗಿ ಕಾಣುವ ಅವಕಾಶ ದೊರಕಿತ್ತು. ಅವರೊಂದಿಗೆ ಟೆಲಿವಿಷನ್ ಉದ್ಯಮದ ಕಾರ್ಮಿಕರ ಕಷ್ಟಗಳನ್ನು ಕುರಿತು ಮಾತಾಡುವ ಸಮಯವೂ ದೊರೆಯಿತು. ಟೆಲಿವಿಷನ್ ಉದ್ಯಮದ ಕಾರ್ಮಿಕರು ಮಾತ್ರವೇ ಅಲ್ಲದೆ ಎಲ್ಲಾ ಅಸಂಘಟಿತ ವಲಯಗಳ ಕಾರ್ಮಿಕರು ಸಹ ಕಾರ್ಮಿಕ ಸ್ವಾಸ್ಥ್ಯ ಬಿಮಾ ಯೋಜನಾ ಎಂಬ ಕೇಂದ್ರ ಸರ್ಕಾರದ ಹೊಸ ಯೋಜನೆಯ ಲಾಭವನ್ನು ಪಡೆಯಬಹುದು. ಇದರಿಂದಾಗಿ ಸರ್ಕಾರವು ಗುರುತಿಸಿರುವ ಆಸ್ಪತ್ರೆಗಳಲ್ಲಿ ಕೇವಲ ಆಯಾ ಕಾರ್ಮಿಕರು ಮಾತ್ರವೇ ಅಲ್ಲದೆ ಅವರ ಕುಟುಂಬ ವರ್ಗದ (ಕನಿಷ್ಟ ನಾಲ್ಕು ಮಂದಿಯಂತೆ) ಎಲ್ಲರೂ ಸಹ ಗರಿಷ್ಟ ರೂ. ಮೂವತ್ತು ಸಾವಿರ ತಗಲುವ ವೈದ್ಯಕೀಯ ಸೌಲಭ್ಯ ಪಡೆಯಬಹುದು ಮತ್ತು ಯಾವುದೇ ದೊಡ್ಡ ಆಪರೇಷನ್ನಿನ ಅಗತ್ಯವಿದ್ದಲ್ಲಿ ಸರಿಸುಮಾರು ಒಂದು ಲಕ್ಷ ರೂಪಾಯಿಯ ಸೌಲಭ್ಯವನ್ನು ಪಡೆಯಬಹುದು. ಇದಕ್ಕಾಗಿ ಪ್ರತೀ ಕಾರ್ಮಿಕನು ತಾನು ದುಡಿಯುವ ದಿನವೊಂದಕ್ಕೆ ರೂ.೧/-ರಂತೆ ಸಂಘದ ಮೂಲಕ ಸರ್ಕಾರಕ್ಕೆ ಹಣ ಕಟ್ಟಬೇಕಾಗುತ್ತದೆ. ಇಂತಹದೊಂದು ಸೌಲಭ್ಯ ನಮ್ಮ ಉದ್ಯಮದ ಎಲ್ಲಾ ಕಾರ್ಮಿಕರಿಗೆ ದೊರೆಯುವಂತಾಗಬೇಕು. ಅದರಿಂದಾಗುವ ಲಾಭಗಳು ದೊಡ್ಡದು. ಇಂತಹದೊಂದು ಯೋಜನೆಯನ್ನು ಅಸಂಗಟಿತ ಕಾರ್ಮಿಕರಿಗಾಗಿಯೇ ಮಾಡಿರುವ ಕೇಂದ್ರ ಸರ್ಕಾರದಲ್ಲಿ ಕಾರ್ಮಿಕ ಸಚಿವರಾದ ಮಲ್ಲಿಕಾರ್ಜುನ ಖರ್ಗೆ ಅವರನ್ನು ಸಹ ಈ ಸಂದರ್ಭದಲ್ಲಿ ಅಭಿನಂದಿಸುತ್ತೇನೆ. ಅವರು ಅತ್ಯಂತ ತಾಳ್ಮೆಯಿಂದ ನಾನು ಕೇಳಿದ ಎಲ್ಲಾ ಪ್ರಶ್ನೆಗಳಿಗೂ ಉತ್ತರ ಕೊಟ್ಟರು. ಪಾರ್ಲಿಮೆಂಟ್ ಅಧಿವೇಶನ ನಡೆಯುತ್ತಿರುವ ಕಾಲದಲ್ಲಿ ಸಚಿವರೊಬ್ಬರು ತೋರಿದ ಈ ತಾಳ್ಮೆಯನ್ನು ಮೆಚ್ಚಲೇಬೇಕು.

ನಮ್ಮ ಕಾರ್ಮಿಕ ಬಂಧುಗಳು ಕರ್ನಾಟಕ ಟೆಲಿವಿಷನ್ ಅಸೋಸಿಯೇಷನ್ನಿನ ಸಹಕಾರದಿಂದ ಈ ಯೋಜನೆಯ ಲಾಭ ಪಡೆಯುವ ದಿನಕ್ಕಾಗಿ ಕಾಯುತ್ತಾ ಇದ್ದೇನೆ. ಉದ್ಯಮದಲ್ಲಿನ ಎಲ್ಲಾ ಬಂಧುಗಳೂ ನೆಮ್ಮದಿಯಾಗಿ ಬದುಕಿದಾಗ ಮಾತ್ರ ಇಂತಹದೊಂದು ಸಂಘ ಕಟ್ಟಿದ್ದು ಸಾರ್ಥಕವಾದೀತು ಎಂದು ನನ್ನ ಭಾವನೆ.

ಎಲ್ಲರಿಗೂ ಬರಲಿರುವ ಅನೇಕ ಹಬ್ಬಗಳನ್ನು ಸಂಭ್ರಮದಿಂದ ಆಚರಿಸುವಂತಾಗಲಿ ಎಂದು ಹಾರೈಸುತ್ತೇನೆ.

- ಬಿ.ಸುರೇಶ

೧೩ ಆಗಸ್ಟ್ ೨೦೧೧

ಬೆಂಗಳೂರು

ನಾವು ನಿಜವಾಗಿ ಸ್ವತಂತ್ರರೇ? – ಬಿ.ಸುರೇಶ (ವಿಜಯ ನೆಕ್ಸ್ಟ್‌ ಪತ್ರಿಕೆಗಾಗಿ ಬರೆದ ಲೇಖನ)

ಸ್ವಾತಂತ್ರ್ಯ ಎಂಬುದೊಂದು ವಿಶಿಷ್ಟ ಕಲ್ಪನೆ. ಆ ಸ್ವಾತಂತ್ರ್ಯದಲ್ಲೂ ಅನೇಕ ಬಗೆಗಳಿವೆ. ರಾಜಕೀಯ ಸ್ವಾತಂತ್ರ್ಯ, ಆರ್ಥಿಕ ಸ್ವಾತಂತ್ರ್ಯ, ವ್ಯಕ್ತಿ ಸ್ವಾತಂತ್ರ್ಯ, ಅಭಿವ್ಯಕ್ತಿ ಸ್ವಾತಂತ್ರ್ಯ, ಸ್ವೀಕಾರ ಸ್ವಾತಂತ್ರ್ಯ, ವಿಸರ್ಜನಾ ಸ್ವಾತಂತ್ರ್ಯ, ಅಡಿಗೆ ಸ್ವಾತಂತ್ರ್ಯ, ಬದುಕುವ ಸ್ವಾತಂತ್ರ್ಯ, ಮದುವೆಯ ಸ್ವಾತಂತ್ರ್ಯ… ಹೀಗೆ ಹತ್ತು ಹಲವು ಸ್ವಾತಂತ್ರ್ಯಗಳನ್ನು ಕುರಿತು ನಿರಂತರವಾಗಿ ಚರ್ಚೆಗಳಾಗುತ್ತಲೇ ಇರುತ್ತದೆ. ಇವುಗಳ ನಡುವೆ ಪ್ರತೀವರ್ಷ ಆಗಸ್ಟ್ ೧೫ರಂದು ಸ್ವಾತಂತ್ರ್ಯವನ್ನು ಸಂಭ್ರಮಿಸುವ ಅಭ್ಯಾಸವೂ ನಮ್ಮ ದೇಶದಲ್ಲಿ ಬಂದಿದೆ. ಈ ಅಭ್ಯಾಸಕ್ಕೀಗ ೬೪ ವಸಂತ. ಪ್ರಾಯಶಃ ಅರಳು-ಮರಳಿನ ಆರಂಭಕಾಲ ಎನ್ನಬಹುದು. ಈ ಕಾಲಘಟ್ಟದಲ್ಲಿ ಸ್ವಾತಂತ್ರ್ಯ ಎಂದರೆ ಏನು ಎಂದು ನಿರ್ವಚಿಸಿಕೊಳ್ಳಬೇಕಾದ ಅಗತ್ಯವೂ ಇದೆ.

ಸ್ವಾತಂತ್ರ್ಯ ಎಂಬ ಕಲ್ಪನೆಯೇ ನಾವು ಮತ್ತಾರದೋ ಅಧೀನದಲ್ಲಿ ಇದ್ದೇವೆ, ಅದರಿಂದ ಬಿಡುಗಡೆ ದೊರೆಯಬೇಕಿದೆ ಎಂಬುದರಿಂದ ಬಂದಿರುವಂತಹದು. ಹೀಗೆ ಬಿಡುಗಡೆ ಪಡೆಯುವ ಕ್ರಮದಲ್ಲಿಯೇ ಹೊಸ ಸಂಕೋಲೆಗಳು ನಮ್ಮನ್ನು ಸುತ್ತುವರೆಯುತ್ತಲೇ ಇರುತ್ತವೆ ಎಂಬುದನ್ನರಿತೂ ನಾವು ಸ್ವಾತಂತ್ರ್ಯವನ್ನು ಬಯಸುತ್ತೇವೆ. ‘ಬಿಡುಗಡೆಯ ಬಯಸಿ’ ಎಂಬ ಪದಗುಚ್ಛವಂತೂ ನಮ್ಮ ಬಹುತೇಕ ಮಾತುಗಳಲ್ಲಿ/ ಕವನಗಳಲ್ಲಿ ಪ್ರಮುಖ ಸ್ಥಾನ ಪಡೆದಿದೆ. ಯಾವುದರಿಂದ ಬಿಡುಗಡೆ? ಯಾವುದರಿಂದ ಸ್ವತಂತ್ರರಾಗಬೇಕಿದೆ? ಎಂಬುದೇ ಮಿಲಿಯನ್ ಡಾಲರ್ ಪ್ರಶ್ನೆ?

ಈ ಸ್ವಾತಂತ್ರ್ಯದ ವಾದಗಳನ್ನು ‘ಭಾರತದ ಸ್ವಾತಂತ್ರ್ಯ ಹಬ್ಬದ ದಿನ’ವೇ ನೆನೆಯುವುದಕ್ಕೆ ಕಾರಣವಿದೆ. ನಮ್ಮ ಬದುಕುಗಳು ಕಳೆದ ಎರಡು ದಶಕಗಳಲ್ಲಿ ಮಾರ್ಕೆಟ್ ಎಕಾನಮಿ ಎಂಬ ದೊಡ್ಡ ಪುಗ್ಗಾವನ್ನು ಊದಿಕೊಂಡಿದೆ. ಈ ಪುಗ್ಗದ ಒಳಗಿನ ಭ್ರಮೆಯು ನಮ್ಮೆಲ್ಲರನ್ನು ಕೊಳ್ಳುಬಾಕರನ್ನಾಗಿಸಿ, ‘ಕೊಳ್ಳುವ ಸ್ವಾತಂತ್ರ್ಯ’ ಎಂಬ ಹೊಸದೊಂದು ಸ್ವಾತಂತ್ರ್ಯವನ್ನು ನಮ್ಮೆಲ್ಲರಿಗೆ ಒದಗಿಸಿದೆ. ಈ ಹೊಸ ಸ್ವಾತಂತ್ರ್ಯದ ಪರಿಣಾಮವಾಗಿ ನಮ್ಮ ಬದುಕಿನಲ್ಲಿ ಆಗುತ್ತಿರುವ ತಲ್ಲಣಗಳು ಅನೇಕ. ಉದಾಹರಣೆಗೆಂದು ಹೇಳುವುದಾದರೆ, ಮನೆಗಳ ಒಳಗೆ ಕೊಳ್ಳುವ ಹುಕಿಗೆ ಸಿಕ್ಕವರು ಕೊಳ್ಳಬಲ್ಲವರ ತೆಕ್ಕೆ ಜೋತು ಬೀಳುತ್ತಾರೆ. ಹೀಗಾಗಿ ಕೊಳ್ಳುವ ಆಸೆಯುಳ್ಳವರು ಬಯಸುವ ಸ್ವಾತಂತ್ರ್ಯ ಒಂದು ಬಗೆಯದಾದರೆ, ಕೊಡಿಸುವ ಶಕ್ತಿ ಉಳ್ಳವರು ಈ ಜೋತು ಬೀಳುವವರಿಂದ ಬಿಡುಗಡೆ ಹೇಗೆ ಎಂಬ ಸ್ವಾತಂತ್ರ್ಯದ ಚಿಂತೆಗೆ ಸಿಕ್ಕಿಕೊಳ್ಳುತ್ತಾರೆ. ಇದೆ ಚಿಂತನೆಯ ಮುಂದುವರಿಕೆಯಾಗಿ ನೊಡುಗರಿಗೆ ಕೊಳ್ಳುವ ಆಸೆಯನ್ನು ಮುಡಿಸುವುದೇ ಪ್ರಧಾನ ಕಾರಣ ಎಂಬಂತೆ ಕತೆ ಹೆಣೆಯುವ ಟೆಲಿವಿಷನ್ ಉದ್ಯಮವೂ ಇದೆ. ಟಿವಿ ಮಾಧ್ಯಮ ಬಳಸಿ ಕತೆ ಹೇಳುವ ಪ್ರತಿಯೊಬ್ಬನೂ, ತನ್ನ ಕಾರ್ಯಕ್ರಮದ ನೋಡುಗನಿಗೆ ಜಾಹೀರಾತುಗಳ ಮೂಲಕ ಕೊಳ್ಳುವ ಬಯಕೆಯನ್ನು ಮೂಡಿಸಬೇಕಾಗುತ್ತದೆ. ಹೀಗಾಗಿ ಆತನ ಕಥನದ ಆವರಣ ಒಂದು ಸ್ಪಷ್ಟ ಬಂಧನದ ಒಳಗಡೆಯೇ ಕಟ್ಟಿಕೊಳ್ಳುತ್ತದೆ. ಇಲ್ಲಿ ಸೃಜನಶೀಲ ಸ್ವಾತಂತ್ರ್ಯದ ಮಾತಾಡುವುದು ಕೂಡ ಕಷ್ಟ. ಹಾಗಾದರೆ ಈ ಜನ ಸ್ವತಂತ್ರರೇ… ‘ಹೌದು ಎನ್ನುವುದು ಅನಿವಾರ್ಯ! ಅಲ್ಲ ಎನ್ನುವುದು ಸತ್ಯ!’ ಇಂತಹ ಅಡಕತ್ತಿನಲ್ಲಿ ಟೆಲಿವಿಷನ್ ಉದ್ಯಮದ ಸೃಜನಶೀಲ ಸ್ವಾತಂತ್ರ್ಯ ಉಸಿರಾಡುತ್ತದೆ.

ಇದೇ ರೀತಿ ನಮ್ಮ ಸಿನಿಮಾ ಉದ್ಯಮದೊಳಗೂ ಸಹ ನೋಡುಗನನ್ನು ಭ್ರಮಾಧೀನಗೊಳಿಸಲೆಂದೇ ಕತೆ ಹೆಣೆಯುವ ಅನಿವಾರ್ಯ ಸೂತ್ರವೊಂದನ್ನು ರೂಢಿಸಿಕೊಳ್ಳಲಾಗಿದೆ. ಇಲ್ಲಿಯೂ ಸೃಜನಶೀಲತೆ ಎನ್ನುವುದು ವಿತ್ತೀಯ ಪ್ರತಿಭೆಗಳ ಬಂಧನಕ್ಕೆ ಒಳಗಾಗಿರುತ್ತದೆ. ಹೀಗಾಗಿಯೇ ಕತೆ ಹೆಣೆಯುವುದು ಬಿಡುಗಡೆಯ ಭಾವ ಹುಟ್ಟಿಸುವುದಕ್ಕಿಂತ ‘ಖಜಾನೆ ಭಯ’ದ ಸ್ವರೂಪವನ್ನು ಪಡೆದುಕೊಳ್ಳುವುದನ್ನು ಕಾಣುತ್ತೇವೆ. ಇಲ್ಲಿ ಹಣ ಹೂಡಿದವನಿಗೆ ಮರಳಿ ಪಡೆವ ಹುಕಿಯಾದರೆ, ಕತೆ ಹೆಣೆಯುವವನಿಗೆ ಹೂಡಿಕೆದಾರನ ಇಚ್ಛೆ ಪೂರೈಸುವ ಬಂಧನವಿರುತ್ತದೆ. ಹೀಗಾಗಿ ಇಲ್ಲಿಯೂ ಸ್ವಾತಂತ್ರ್ಯ ಎಂದರೆ ‘ಬೆಟ್ಟದ ಜೀವ’ದಲ್ಲಿನ ವೃದ್ಧನ ಮಾತಿನಂತೆ ‘ಇದೆ ಎಂದರೆ ಇದೆ, ಇಲ್ಲ ಎಂದರೆ ಇಲ್ಲ’

ಈ ಹಿನ್ನೆಲೆಯಲ್ಲಿ ‘ಅರಿದೆನೆಂಬುದು ತಾ ಬಯಲು/ ಅರಿಯೆನೆಂಬುದು ತಾ ಬಯಲು/ ಅರುಹಿನ ಕುರುಹಿನ ಮರಹಿನೊಳಗೆ/ ಗುಹೇಶ್ವರನೆಂಬುದು ತಾ ಬಯಲು’ ಎಂಬ ಅಲ್ಲಮನ ವಚನದಂತೆ ಸ್ವಾತಂತ್ರ್ಯವನ್ನು ಬಯಸುತ್ತಾ, ಬಂಧನದೊಳಗೆ ಇದ್ದೂ, ಸ್ವತಂತ್ರರು ಎಂದುಕೊಳ್ಳುವುದೇ ಬಿಡುಗಡೆಯ ಭಾವ ಎನ್ನಬಹುದು. ಈ ಸಾಲು ಓದಿ ನಿಮ್ಮ ಮುಖದ ಮೇಲೆ ತಿಳಿ ನಗು ಮುಡಿತೋ, ಗೊಂದಲವಾಯಿತೋ ಅರಿಯೇ. ಆದರೆ, ಹೀಗೊಂದು ಅಸಂಗತ ಸಾಲು ಕಟ್ಟುವ ಪರಿಸ್ಥಿತಿಯಲ್ಲಿರುವಾಗ ‘ಸ್ವಾತಂತ್ರ್ಯ ಎಂದರೆ’ ಎಂಬ ಪ್ರಶ್ನೆಯನ್ನು ಹಾಕಿಕೊಳ್ಳುವುದೇ ಅಸಂಗತವಾಗಿ ಕಾಣಬಹುದಲ್ಲವೇ?

* * *

 

ಟೆಲಿವಿಷನ್ ಎಂಬ ಅದ್ಭುತವೂ ಮತ್ತು…

(ಕೇಬಲ್ ದಿನದ ಅಂಗವಾಗಿ ಪ್ರಕಟವಾಗುತ್ತಿರುವ ಸ್ಮರಣ ಸಂಚಿಕೆಗೆ ಬರೆದ ಲೇಖನ)

ಟೆಲಿವಿಷನ್ ಇಂದು ನಮ್ಮ ಬದುಕಿನ ಅವಿಭಾಜ್ಯ ಅಂಗವಾಗಿದೆ. ಮಧ್ಯಮವರ್ಗಿಗಳನ್ನು ಏಕಕಾಲಕ್ಕೆ ಕೊಳ್ಳುಬಾಕ ಸಂಸ್ಕೃತಿಗೆ ತಳ್ಳುತ್ತಾ, ಮತ್ತೊಂದೆಡೆ ಅವರನ್ನು ಇಡಿಯ ಜಗತ್ತಿನ ತುಂಬಾ ಅಪರಾಧಿಗಳು, ಕೊಲೆಪಾತಕಿಗಳೇ ಇದ್ದಾರೇನೋ ಎಂಬಂತಹ ಆತಂಕಕ್ಕೆ ದೂಡುತ್ತಾ ಬದುಕುವ ಈ ಮಾಧ್ಯಮ ಎಂಬುದು ಮೂಲತಃ ಆರಂಭವಾದ ಕಾರಣಗಳನ್ನು ಬಿಟ್ಟು ಇಂದು ಬೇರೆಯದೇ ಸ್ವರೂಪ ಪಡೆದುಕೊಂಡಿದೆ. ಅದಕ್ಕೆ ಕಾರಣಗಳೇನು ಎಂದು ಅರ್ಥ ಮಾಡಿಕೊಳ್ಳುವ ಪ್ರಯತ್ನವಾಗಿ ಈ ಅಕ್ಷರಗಳು ಪ್ರಯತ್ನಿಸಿವೆ.
ಕನ್ನಡಕ್ಕೆ ಟೆಲಿವಿಷನ್ ಬಂದುದು 1983ರಲ್ಲಿ. ಅದೂ ಮದರಾಸು ದೂರದರ್ಶನವು ಪ್ರಸಾರ ಮಾಡುತ್ತಿದ್ದ ಅರ್ಧ ಗಂಟೆಯ ಕನ್ನಡದ ಕಾರ್ಯಕ್ರಮಗಳಿಗಾಗಿ ಇನ್ನೆರಡು ತಾಸು ತಮಿಳಿನ ಕಾರ್ಯಕ್ರಮವನ್ನೂ ಕನ್ನಡಿಗರು ನೋಡುತ್ತಾ ಇದ್ದರು. ಆ ಕಾಲದ ಬಾಲಕರಾದ ನನ್ನಂಥವರಿಗೆ `ಒಳಿಯುಂ ಒಳಿಯುಂ’ ಮೂಲಕವೇ ತಮಿಳು ಭಾಷೆಯ ಪರಿಚಯವಾಗಿತ್ತು. ನಂತರ 1985ರಲ್ಲಿ ಬೆಂಗಳೂರಿನಲ್ಲಿಯೇ ಒಂದು ಸ್ಟುಡಿಯೋ ಸ್ಥಾಪನೆಯಾಗಿ ದಿನಕ್ಕೆ ಎರಡು ಗಂಟೆಗಳ ಕನ್ನಡ ಕಾರ್ಯಕ್ರಮ ನೋಡುವಂತಾಯಿತು. ಆಗ ಕಪ್ಪುಬಿಳುಪು ಟಿವಿಗಳು ಮನೆಗಳ ಅಂಗಳದಲ್ಲಿ ಪ್ರತಿಷ್ಠಾಪಿತ ವಾಗತೊಡಗಿದವು. ಟಿವಿ ಇರುವ ಮನೆಗಳವರಿಗೆ ಮನೆಯ ನೆತ್ತಿಯ ಮೇಲೆ ಆಂಟೆನಾ ಕೂಡಿಸುವುದೇ ಒಂದು ಸಂಭ್ರಮ. ಆ ಸಂಭ್ರಮದ ಜೊತೆಗೆ ಟಿವಿ ಇಲ್ಲದವರಿಗೆ ನಮ್ಮ ಮನೆಗೂ ಅಂತಹದೊಂದು ಬರಬೇಕೆಂಬ ವಾಂಛೆ. ಇವೆಲ್ಲವುಗಳ ನಡುವೆ ಪ್ರಸಾರವಾಗುತ್ತಿದ್ದ ಅನೇಕ ಕಾರ್ಯಕ್ರಮಗಳನ್ನು ನೋಡುತ್ತಾ ಕನ್ನಡದ ಜೊತೆಗೆ ಹಿಂದಿಯನ್ನೂ ನಮ್ಮವರು ಕಲಿತದ್ದು ಸತ್ಯ. ಇದಾಗಿ ಎರಡು ವರ್ಷಗಳಲ್ಲಿ ಸ್ಯಾಟಿಲೈಟ್ ಪ್ರಸಾರವು ಕ್ರಾಂತಿಕಾರಕವಾಗಿ ಬೆಳೆದು, ದೂರದರ್ಶನ ಎಂಬ ಒಂದು ವಾಹಿನಿಯ ಜೊತೆಗೆ ಇನ್ನಷ್ಟು ವಾಹಿನಿಗಳು ಸೇರ್ಪಡೆಯಾದವು. 1990ರ ಹೊತ್ತಿಗೆ ಕನ್ನಡದ ಪ್ರಥಮ ಖಾಸಗಿ ವಾಹಿನಿಯಾಗಿ ಉದಯ ಕೂಡ ಆರಂಭವಾಗಿತ್ತು. ಅಲ್ಲಿಂದಾಚೆಗೆ ಟೆಲಿವಿಷನ್ ಎಂಬುದು ಸಂಭ್ರಮದ ಸಂಕೇತವಾಗಿ ಉಳಿಯದೆ ಪ್ರತೀ ಮನೆಯ ಸಿರಿವಂತಿಕೆಯ ಸಂಕೇತವಾಗಿ, ನಂತರ ಸ್ಟೈಲ್ನ ಸಂಕೇತವಾಗಿ, ನಿಧಾನವಾಗಿ ನಿತ್ಯ ಬಳಕೆಯ ಗೃಹೋಪಯೋಗಿ ವಸ್ತುವಾಗಿ ಹೋದದ್ದು ಈಗ ಇತಿಹಾಸ.
ಇದೇ ಕಾಲಘಟ್ಟದಲ್ಲಿ ಒಂದೇ ಟಿವಿಯಲ್ಲಿ ಹತ್ತೂ ಹದಿನೈದು ಚಾನೆಲ್ಗಳನ್ನು ನೋಡುವ ಅವಕಾಶ ಕಲ್ಪಿಸಲು ಬಂದದ್ದು ಕೇಬಲ್ ಜಾಲ. ಪ್ರತಿ ಬಡಾವಣೆಯಲ್ಲೂ ಯುವಕರು ಡಿಶ್ ಆಂಟೆನಾ ಕಟ್ಟಿ ನೂರಾರು ಮನೆಗಳಿಗೆ ವಾಹಿನಿಗಳನ್ನು ರವಾನಿಸತೊಡಗಿದರು. ಇದರಿಂದ ಅನೇಕರಿಗೆ ಉದ್ಯೋಗ ದೊರೆತದ್ದಲ್ಲದೆ ಕೇಬಲ್ ನಡೆಸುವವರ ಒಂದು ಬೃಹತ್ ಸಮೂಹವೇ ಸೃಷ್ಟಿಯಾಯಿತು. ಈ ಸಮೂಹಗಳೂ ನಿಧಾನವಾಗಿ ಸಂಘಟಿತವಾದವು. ಕೇಬಲ್ ಜಾಲಗಳಿಗೆ ಸ್ಪರ್ಧಿಯಾಗಿ ಈಚೆಗೆ ಡಿಶ್ ಟಿವಿಗಳು ಬಂದಿವೆ. ಅವುಗಳು ಯಾವ ಸ್ವರೂಪ ಪಡೆಯಬಹುದು ಎಂಬುದನ್ನು ನೋಡಬೇಕಿದೆ.
ಆದರೆ ಈ ಎಲ್ಲಾ ಸಾಮಾಜಿಕ ಬದಲುಗಳ ನಡುವೆಯೇ ಟೆಲಿವಿಷನ್ ನೋಡುಗನ ಮನಸ್ಥಿತಿ ಏನಾಗಿದೆ ಎಂದು ಗಮನಿಸಬೇಕಿದೆ. ಟೆಲಿವಿಷನ್ನಿನ ಆರಂಭ ಕಾಲದಲ್ಲಿ ಸುದ್ದಿಯನ್ನ, ಕ್ರೀಡೆಯನ್ನ, ಸಿನಿಮಾ ಹಾಡುಗಳನ್ನ, ವಾರಕ್ಕೊಮ್ಮೆ ಬರುತ್ತಿದ್ದ ಧಾರಾವಾಹಿಗಳನ್ನ ನೋಡುತ್ತಾ ಇದ್ದವರಲ್ಲಿ ನೆನಪಿನ ಭಂಡಾರ ಇರುತ್ತಿತ್ತು. ವಾರದ ಹಿಂದೆ ನೋಡಿದ ಕತೆಯ ಮುಂದಿನ ಭಾಗವನ್ನು ಇಂದು ನೋಡಿ ಅರಗಿಸಿಕೊಳ್ಳುವ ತಾಳ್ಮೆ ಇತ್ತು. ವಾರಕ್ಕೊಮ್ಮೆ (ಭಾನುವಾರ ಬೆಳಿಗ್ಗೆ) ಬರುತ್ತಿದ್ದ ರಾಮಾಯಣವನ್ನು ಧಾರ್ಮಿಕ ಕೆಲಸ ಎಂಬಂತೆ ನೊಡಿದವರ ಹಾಗೆಯೇ ಇದೊಂದು ಪುರಾಣ ಕಥನ ಎಂಬಂತೆ ವಿಮರ್ಶಾತ್ಮಕವಾಗಿ ನೋಡಿದವರೂ ಇದ್ದರು. ಆ ಧಾರಾವಾಹಿಯ ರಾಮ ಮತ್ತು ಸೀತೆಯ ಪಾತ್ರಧಾರಿಗಳನ್ನ ಪಕ್ಷವೊಂದು ಬಳಸಿಕೊಂಡು, ಅವರಿಬ್ಬರೂ ವಿಧಾನಸಭೆ ಮತ್ತು ಲೋಕಸಭೆಯವರೆಗೂ ಹೋಗುವುದು ಸಾಧ್ಯವಾಯಿತು ಎಂದರೆ ಆ ದಿನಗಳಲ್ಲಿ ಟೆಲಿವಿಷನ್ ನೋಡುಗರ ನೆನಪಿನ ಶಕ್ತಿಯನ್ನು ಗ್ರಹಿಸಬಹುದು. ಕಾಲಾಂತರದಲ್ಲಿ ಈ ಸ್ಥಿತಿ ಮಾರ್ಪಡುತ್ತಾ ಬಂದಿದೆ. ಇಂದು ಟೆಲಿವಿಷನ್ ಎಂದರೆ ವಾಹಿನಿಗಳ ಮಹಾಪೂರ. ಕನ್ನಡದ್ದೇ ೧೨ ವಾಹಿನಿಗಳಿವೆ. ಅವುಗಳಲ್ಲಿ ಏಳೆಂಟು ದಿನದ ೨೪ ಗಂಟೆಯೂ ಪ್ರಸಾರವಾಗುತ್ತವೆ. ಹೀಗಾಗಿ ಕನಿಷ್ಟ ಸಂಖ್ಯೆಯ ಕನೆಕ್ಷನ್ ತೆಗೆದುಕೊಂಡವರಿಗೂ 70 ವಾಹಿನಿಗಳು ನೋಡಲು ಸಿಗುತ್ತವೆ. ಇನ್ನು ಸಂಪೂರ್ಣ ಸೌಲಭ್ಯ ಪಡೆಯುವವರಿಗೆ ನೂರಾಮುವ್ವತ್ತಕ್ಕೂ ಹೆಚ್ಚು ವಾಹಿನಿಗಳು ಇವೆ. ಯಾವುದನ್ನು ನೊಡಬೇಕು ಎಂಬ ಆಯ್ಕೆ ಈಗ ನೋಡುಗನ ಅಂಗೈಯಲ್ಲಿ ರಿಮೋಟ್ ಆಗಿ ಕೆಲಸ ಮಾಡುತ್ತಾ ಇದೆ. ಅರೆಕ್ಷಣ ನೋಡುಗನ ಮನಸ್ಸು ವಿಚಲಿತವಾದರೂ ಆತ ನೋಡುತ್ತಿರುವ ವಾಹಿನಿಯೂ ಆತನಿಗೆ ಅರಿವಾಗದಂತೆ ಬದಲಾಗಿರುತ್ತದೆ. ಇಂತಹ ಪರಿಸ್ಥಿತಿಯಲ್ಲಿ ನೋಡುಗನನ್ನು ಟೆಲಿವಿಷನ್ನಿನಲ್ಲಿ ತೊಡಗುವಂತೆ ಮಾಡುವ, ಅದೇ ವಾಹಿನಿಯನ್ನು ಹೆಚ್ಚು ಕಾಲ ನೋಡುವಂತೆ ಮಾಡುವುದು ಸುಲಭ ಸಾಧ್ಯವಲ್ಲ. ಹೀಗಾಗಿ ಕಾರ್ಯಕ್ರಮ ತಯಾರಕರು ಅನೇಕಾನೇಕ ಸರ್ಕಸ್ಸುಗಳನ್ನು ಮಾಡುತ್ತಾ ತಂತಿಯ ಮೇಲಿನ ನಡಿಗೆಯನ್ನು ಮುಂದುವರೆಸಿದ್ದಾರೆ ಎಂಬುದಂತೂ ಢಾಳಾಗಿ ಕಾಣುವ ಸತ್ಯ.
ಈ ಹಿನ್ನೆಲೆಯಲ್ಲಿ ನಾನು ಈ ಲೇಖನದ ಆರಂಭದಲ್ಲಿ ಹೇಳಿದ ಮಾತುಗಳನ್ನು ಪುನರ್ಮನನ ಮಾಡಿಕೊಂಡರೆ, ಕಾರ್ಯಕ್ರಮ ತಯಾರಕರ ಮನಸ್ಥಿತಿ, ಕಾರ್ಯಕ್ರಮಗಳ ತಯಾರಿಯ ಹಿಂದಿನ ಉದ್ದಿಶ್ಯ ಎಲ್ಲವೂ ಬದಲಾಗಿವೆ. ಕೇವಲ ದೂರದರ್ಶನವೊಂದೇ ಇದ್ದ ಕಾಲದಲ್ಲಿ ಕಾರ್ಯಕ್ರಮದ ತಯಾರಿಯ ಹಿಂದೆ ಪ್ರೇಕ್ಷಕನಿಗೆ ಶ್ರೇಷ್ಟವಾದುದನ್ನೇ ಕೊಡಬೇಕೆಂಬುದು ಹೆಬ್ಬಯಕೆಯಾಗಿದ್ದರೆ ಇಂದು ಶ್ರೇಷ್ಟ ಎನ್ನುವ ಸ್ಥಳದಲ್ಲಿ ಜನಪ್ರಿಯ ಸರಕು ಎಂಬುದು ಪ್ರಧಾನ ಆಶಯವಾಗಿದೆ. ಹೀಗೆ ಕಾರ್ಯಕ್ರಮವನ್ನು ನೋಡುವ ದೃಷ್ಟಿಕೋನವೇ ಬದಲಾದೊಡನೆ ಅದನ್ನು ತಯಾರಿಸುವ ಕ್ರಮಗಳಲ್ಲೂ ಬೃಹತ್ ಪಲ್ಲಟವಾಗಿದೆ. ಒಂದೊಮ್ಮೆ ವಾರ್ತೆಗಳು ಎಂಬುದು ಭಾವಪ್ರಚೋದಕವಾಗದೆ ಬರುತ್ತಾ ಇತ್ತು ಎಂಬುದನ್ನು ನೆನೆಸಿಕೊಂಡರೆ ಇಂದು ವಾರ್ತೆಗಳ ನಡುವೆಯೇ ಬ್ರೇಕಿಂಗ್ ನ್ಯೂಸ್‌ಗಳ ಭರಾಟೆ ಹೆಚ್ಚಾಗಿದೆ. ಯಾವುದೋ ಸ್ಟುಡಿಯೋದಲ್ಲಿ ಕೂತ ಸುದ್ದಿ ವಾಚಕ (ಇಂದು ಅವರನ್ನು ಸುದ್ದಿ ನಿರ್ವಾಹಕ ಎನ್ನುವುದು ಸೂಕ್ತ) ಇನ್ನೆಲ್ಲಿಯೋ ಇರುವ ತನ್ನ ವಾಹಿನಿಯ ಪ್ರತಿನಿಧಿಯೊಡನೆ ಮಾತಾಡುವಾಗಲೂ ರೋಚಕ ವಿವರವನ್ನು ಕೆದಕುತ್ತಾನೆ. ಮುಂಬೈನಲ್ಲಿ ಆತಂಕವಾದಿಗಳು ನಡೆಸಿದ ಮಾರಣಹೋಮವು ಲೈವ್ ನ್ಯೂಸ್ ಆಗಿ ಆತಂಕ ಸೃಷ್ಟಿಯನ್ನು ಹೆಚ್ಚಿಸುತ್ತದೆ. ಅಂತೆಯೇ ಯಾವುದೋ ಊರಿನಲ್ಲಿ ಯಾವನೋ ಇನ್‌ಸ್ಪೆಕ್ಟರ್‌ನನ್ನು ಯಾರೋ ಕೊಂದದ್ದು, ಅಷ್ಟೇ ರೂಕ್ಷವಾಗಿ ಸುದ್ದಿ ಚಿತ್ರವಾಗುತ್ತದೆ. ಈ ಎಲ್ಲಾ ಸುದ್ದಿಗಳನ್ನು ತೋರಿಸುವಲ್ಲಿ ರೋಚಕತೆಯಷ್ಟೇ ಮುಖ್ಯವಾಗಿ, ವಾರ್ತೆಯ ಮೂಲ ಅಗತ್ಯವಾದ ಮಾಹಿತಿ ಹಂಚಿಕೆ ಎಂಬುದು ನಗಣ್ಯ ಎಂಬಂತಾಗಿರುತ್ತದೆ. ಇದೇ ವಿಷಯದ ವಿಸ್ತರಣೆ ಎಂಬಂತೆ, ಸುದ್ದಿ ನೀಡುವವರು ಯಾವುದೇ ವ್ಯಕ್ತಿಯನ್ನು ಸಂದರ್ಶನ ಮಾಡುವಾಗಲೂ ಆಡುವ ಮಾತುಗಳು ದೊಡ್ಡ ಹಗರಣವನ್ನು ಬಯಲಿಗೆಳೆಯುವ ಪ್ರಯತ್ನ ಎಂಬಂತೆ ಅಥವಾ ಮತ್ತೊಂದು ಸ್ಕೂಪ್ ಸೃಷ್ಟಿಸಲೆಂಬಂತೆ ಇರುವುದನ್ನು ಸಹ ನಾವು ಕಾಣುತ್ತಾ ಇದ್ದೇವೆ. ಇನ್ನು ಇದನ್ನು ನೋಡುವ ಪ್ರೇಕ್ಷಕರಾದರೋ ಯಾವುದೇ ವಿವರವನ್ನು ಪೂರ್ಣಾವಧಿಗೆ ನೋಡಿ ಅರ್ಥೈಸಿಕೊಳ್ಳುವಷ್ಟು ವ್ಯವಧಾನ ಇರುವವರಲ್ಲ. ಹೀಗಾಗಿ ರೋಚಕ ವಿವರವನ್ನು ಮಾತ್ರ ಸ್ವೀಕರಿಸಿ, ಅದನ್ನೇ ಅವರಿವರ ಜೊತೆಗೆ ಮಾತಾಡುತ್ತಾ ಆನಂದ ಪಡುತ್ತಾರೆ. ಹೀಗೆ ಸುದ್ದಿಯೊಂದು ಅರ್ಧ ವೀಕ್ಷಣೆಯ ಮೂಲಕವೇ ಅವರಿವರ ಬಾಯಲ್ಲಿ ವಿಶ್ವರೂಪ ಪಡೆಯುತ್ತಾ ಸಾಗುತ್ತದೆ.
ಇನ್ನು ಕಥನಗಳು ಮತ್ತು ಧಾರಾವಾಹಿಗಳ ಸ್ವರೂಪವನ್ನು ಗಮನಿಸಿದರೆ ಅಲ್ಲಿಯೂ ವಾಸ್ತವವನ್ನು ಮರೆಸಿ, ಅಲಂಕಾರವನ್ನು ವೈಭವೀಕರಿಸುವ ವಿವರಗಳೇ ಹೆಚ್ಚು. ಆ ಕಥನಗಳಲ್ಲೂ ಬಹುತೇಕವಾಗಿ ಶ್ರೀಮಂತ ಮನೆಗಳ ಅವ್ಯವಹಾರವೋ, ಅನೈತಿಕ ಸಂಬಂಧವೋ ಬೃಹತ್ ಗಾಥಾ ಎಂಬಂತೆ ಚಿತ್ರಿತವಾಗುವುದನ್ನು ನೋಡುತ್ತೇವೆ. ಇಲ್ಲಿ ಕಣ್ಣೆದುರಿಗೆ ಮೂಡುವ ಪಾತ್ರಗಳಿಗೆ ಅಗತ್ಯಕ್ಕಿಂತ ಹೆಚ್ಚು ಬಣ್ಣ ಬಳಿಯಲಾಗಿರುತ್ತದೆ. ಎಲ್ಲಾ ವಯಸ್ಸಿನ ಪಾತ್ರಗಳಿಗೂ ತುಟಿಗೆ ಮಾತ್ರವಲ್ಲ ಎಲ್ಲಾ ಭಾಗಗಳಿಗೂ ಬಣ್ಣವಿರುತ್ತದೆ. ಆ ಮೂಲಕ ಕಥನವನ್ನು ಅನುಭವಿಸುವುದಕ್ಕಿಂತ ನೋಡುಗರು ಅಲಂಕಾರ ಪ್ರೀತಿಗೆ ಒಳಗಾಗುವಂತೆ ಚಿತ್ರಿಸಲಾಗುತ್ತದೆ ಎಂಬುದು ಗಮನದಲ್ಲಿರಬೇಕಾದ ಅಂಶ. ಹೀಗೆ ಸಿದ್ಧವಾದುದನ್ನ ನೊಡುವವರೂ ಸಹ ಮಧ್ಯಮವರ್ಗದ ಗೃಹಿಣಿಯರೇ. ಇಂತಹ ವಿವರಗಳನ್ನು ಟಿವಿಯಲ್ಲಿ ನೋಡಿದ ಅಭ್ಯಾಸದಿಂದಲೋ ಏನೋ ನಾಡಿನಾದ್ಯಂತ ಆಧುನಿಕ ಮಹಿಳೆಯರು ಇದೇ ಮಾದರಿಯ ಬಣ್ಣಗಳನ್ನು ತಮ್ಮ ದೇಹಗಳಿಗೂ ಹಚ್ಚಿಕೊಳ್ಳುವುದನ್ನು ಕಾಣುತ್ತೇವೆ. ಆಧುನಿಕ ಕಾಲದಲ್ಲಿ `ಸೌಂದರ್ಯ ಪ್ರಜ್ಞೆ’ ಎಂದರೆ ಕೃತಕ ಅಲಂಕಾರ ಎಂಬಂತೆ ನಮ್ಮ ಜೀವನವನ್ನು `ಕಾಸ್ಮೆಟಿಕ್’ಗೊಳಿಸಿರುವುದು ಇದೇ ಟೆಲಿವಿಷನ್ ಎಂಬ ಅದ್ಭುತ.
ಧಾರಾವಾಹಿಗಳಿಗೆ ಮತ್ತು ಸುದ್ದಿ ಚಿತ್ರಗಳಿಗೆ ಹೇಳುವ ಮಾತನ್ನು ರಿಯಾಲಿಟಿ ಷೋ ಎಂಬ ಆಟಗಳಿಗೂ ಹಿಗ್ಗಿಸಬಹುದು. ಇಲ್ಲಿ ಹಾಡಲು ಬರುವ ಪುಟ್ಟ ಮಕ್ಕಳೂ ಅದೇ ರೀತಿಯಲ್ಲಿ `ಅಲಂಕೃತ’ರು. ಆ ಹಾಡಿನ ಕಾರ್ಯಕ್ರಮಕ್ಕೆ ಬರುವ ತೀರ್ಪುಗಾರರೂ ಸಾಲಂಕೃತರು. ಅಪರೂಪಕ್ಕೆ ಯಾರಾದರೂ ಸಹಜವಾಗಿಯೇ ಟಿವಿಯಲ್ಲಿ ಕಂಡರೆ ಅದು ಜನಪ್ರಿಯತೆ ಕಡಿಮೆ ಇರುವ ಕಾರ್ಯಕ್ರಮವೇ ಆಗಿರುತ್ತದೆ ಎನ್ನಬಹುದು. ಇನ್ನು ನೃತ್ಯದ ರಿಯಾಲಿಟಿ ಷೋಗಳ ಬಗ್ಗೆಯಂತೂ ಹೆಚ್ಚು ಹೇಳಲೇ ಬೇಕಿಲ್ಲ. ಅಲ್ಲಿ ಪ್ರೇಕ್ಷಕರು ಎಂದು ತೋರಿಸಲಾಗುವ ಪುಟ್ಟ ಗುಂಪು ಸಹ `ಅಲಂಕೃತ’ ಆಗಿರುತ್ತದೆ. ಇನ್ನು ಪೇಟೆ ಹುಡುಗಿಯರು ಹಳ್ಳಿಗೆ ಹೋಗುವ ಸಾಹಸ ಇತ್ಯಾದಿಗಳಲ್ಲೂ ಸಹ ಇದೇ ಕೃತಕ ವಾತಾವರಣ. ಬಹುತೇಕ ರಿಯಾಲಿಟಿ ಷೋಗಳಲ್ಲಿ ಇರುವುದು ಇದೇ ಗುಣ. ಇನ್ನು ಹಾಸ್ಯದ ಕಾರ್ಯಕ್ರಮ ನಡೆಸಿಕೊಡುವವರು ಕೂಡ ವಯಸ್ಸಿಗೆ ಮೀರಿದಂತೆ ಬಣ್ಣ ಹಚ್ಚಿಕೊಂಡವರೇ ಆಗಿರುವುದನ್ನು ಸಹ ಕಾಣಬಹುದು. ತೆರೆಯ ಮೇಲೆ ಕಾಣುವ ವ್ಯಕ್ತಿ ಆರೋಗ್ಯಪೂರ್ಣವಾಗಿ ಕಾಣಬೇಕು ಎನ್ನುವುದಕ್ಕಿಂತ ಅವರು ಯುವಕಂತೆ ಕಾಣಬೇಕು ಎನ್ನುವುದೇ ಟಿವಿ ಕಾರ್ಯಕ್ರಮಗಳ ಅೋಷಿತ ಮಾದರಿಯಾಗಿದೆ. ಅದನ್ನು ನಮ್ಮ ಸಮಾಜವೂ ಪಾಪ ಯಥಾವತ್ ಅನುಸರಿಸುತ್ತಿದೆ. (ಇಲ್ಲಿ ತಾವು ಇದ್ದಂತೆ ಬರುತ್ತಿದ್ದ ಸುವರ್ಣ ನ್ಯೂಸ್ನ ರಂಗನಾಥ್ ಅವರು ಸಹ ಕಾಲಾಂತರದಲ್ಲಿ ಬಣ್ಣ ಬಣ್ಣದ ಷರಟು ಮತ್ತು ಬಣ್ಣ ಹಚ್ಚಿದ ಮುಖದ ಜೊತೆಗೆ ಬರುವಂತಾದುದನ್ನು ನೊಡುಗರು ನೆನಪಿಸಿಕೊಳ್ಳಬಹುದು.)
ಈ ಎಲ್ಲಾ ವಿವರಗಳ ನಡುವೆ ನಮ್ಮ ಸಮಾಜ ಮತ್ತದರ ನೇಯ್ಗೆಯು ಸಂಕುಚಿತಗೊಳ್ಳುತ್ತಾ ಇರುವುದನ್ನೂ ಗಮನಿಸಬಹುದು. ಆತಂಕದಲ್ಲಿ ಬದುಕುವ ಮನಸ್ಸುಗಳಿಗೆ ಅಕ್ಕ ಪಕ್ಕದ ವಿವರಗಳನ್ನು ನೋಡುವ ಮಧ್ಯಮವರ್ಗಕ್ಕೆ ಈಗ ಕಾಣುವುದು ಮಾಲ್ಗಳು ಮತ್ತು ಬ್ಯೂಟಿಪಾರ್ಲರ್ ಮಾತ್ರ. ಹೀಗಾಗಿ ಸಾಮಾಜಿಕ ಹೋರಾಟಗಳು ಬಹುತೇಕ ನಿರ್ಜೀವವಾಗಿವೆ. ಹೋರಾಟಗಳನ್ನೂ ಸಹ ಮಾಧ್ಯಮಗಳೇ ನಿರ್ದೇಶಿಸುತ್ತಿವೆ. ಈಚೆಗೆ ನಡೆದ ಅಣ್ಣಾ ಹಜಾರೆ ಅವರ ಹೋರಾಟಕ್ಕೆ ಮಾಧ್ಯಮಗಳಿಂದಾಗಿಯೇ ಸ್ಟಾರ್ ಸ್ಟೇಟಸ್ ಸಿಕ್ಕದ್ದನ್ನು ನಾವು ಗಮನಿಸಬಹುದು. ಹಾಗೆಯೇ ಈಚೆಗೆ ಲೋಕಾಯುಕ್ತರು ನೀಡಿದ ವರದಿ ಮತ್ತು ತದನಂತರದ ಸರ್ಕಾರ ಬದಲಿ, ರಾಜೀನಾಮೆ ಪ್ರಕರಣಗಳಿಗೂ ಜೀವ ಬಂದದ್ದು ಮಾಧ್ಯಮಗಳಿಂದಲೇ. ಹೀಗಾಗಿ ಇಂದು ನಾವು ಸಮಾಜವೇ ಸೃಷ್ಟಿಸದ ಬದುಕಿನ ಕ್ರಮಕ್ಕೆ ಬದಲಾಗಿ ಮಾಧ್ಯಮಗಳಿಂದ ನಿರ್ದೇಶಿತವಾದ ಬದುಕಿನ ಕ್ರಮವನ್ನು ಕಟ್ಟಿಕೊಂಡಿದ್ದೇವೆ. ಒಟ್ಟಾರೆಯಾಗಿ ಆಧುನಿಕ ಬದುಕು ಎಂದರೆ ಟಿವಿ ಪ್ರಣೀತ ಅದ್ಭುತಗಳ ಸರಮಾಲೆ ಎನ್ನಬಹುದು.
ಈ ಬಗ್ಗೆ ಅದಾಗಲೇ ಹಲವು ಕಡೆಗಳಲ್ಲಿ ಮಾತಾಡಿದ್ದೇನೆ, ಬರೆದಿದ್ದೇನೆ. ಈಗ ಮತ್ತೊಮ್ಮೆ ಕೇಬಲ್ ದಿನದ ಅಂಗವಾಗಿ ನನಗೆ ಅನ್ನ ನೀಡುತ್ತಿರುವ ಮಾಧ್ಯಮವನ್ನು ಕುರಿತು, ಈ ಮಾಧ್ಯಮವೇ ತಂದಿತ್ತಿರುವ ಅವಡಗಳನ್ನು ಕುರಿತು ನೆನೆಯುವಂತಾಯಿತು. ಈ ಅವಕಾಶ ಕೊಟ್ಟ ಕೇಬಲ್ ಬಂಧುಗಳಿಗೆ ನಮಿಸುತ್ತಾ, ಶುಭಾಶಯ ಕೋರುತ್ತಾ ಟೆಲಿವಿಷನ್ ಎಂಬ ಅಧ್ಭುತವು ಮುಂಬರುವ ದಿನಗಳಲ್ಲಿ ಪಡೆದುಕೊಳ್ಳಬಹುದಾದ ಹೊಸ ರೂಪಗಳಿಗೆ ಕಾಯುತ್ತೇನೆ.
* * *

Next Page »


ಕೆಲವು ಪುಟಗಳು…

ಈವರೆಗೆ ಇಲ್ಲಿ ಸುಳಿದಾಡಿದವರು...

  • 13,269 ಜನರು

Follow

Get every new post delivered to your Inbox.