ಬೆಳಕಿನೊಳಗಣ ಬೆಳಗು – ೧೫
ಕಳೆದ ಬಾರಿ ನಮ್ಮಲ್ಲಿ ತಯಾರಾಗುತ್ತಿರುವ ಸಿನಿಮಾಗಳಲ್ಲಿ “ಭ್ರಷ್ಟಾಚಾರ’ವನ್ನು ತೋರಿಸುತ್ತಿರುವ ಬಗೆಯನ್ನು ಕುರಿತು ಪ್ರಸ್ತಾಪಿಸಿದ್ದೆ. ಅದೇ ಮಾತುಗಳ ಮುಂದುವರಿಕೆಯಾಗಿ ಮತ್ತೊಂದು ಸಿನಿಮಾದ ವಿವರಗಳನ್ನಿಟ್ಟುಕೊಂಡು, ನಿಮ್ಮೊಡನೆ ನನ್ನ ಅಭಿಪ್ರಾಯ ಹಂಚಿಕೊಳ್ಳುತ್ತೇನೆ. ಪೂರ್ಣಚಂದ್ರ ತೇಜಸ್ವಿಯವರು ಕನ್ನಡ ಸಾಹಿತ್ಯಲೋಕ ಕಂಡ ಅಪರೂಪದ ಕಥೆಗಾರ. ಅವರ ಕಥೆಯ ಒಳವಿವರಗಳಿಗಿಂತ ಅವರು ಬಳಸುವ ಭಾಷೆ ಮತ್ತು ಕಥನ ಕಟ್ಟಡ ನಮ್ಮನ್ನು ಒಳಗೊಳ್ಳುತ್ತದೆ. ಜೊತೆಗೆ ಪೂಚಂತೇ ಅವರಿಗಿರುವ ಆಧುನಿಕ ಜೀವನ ಕುರಿತ ವ್ಯಂಗ್ಯ ದೃಷ್ಟಿಕೋನ ಓದುಗನನ್ನು ಆವರಿಸುತ್ತದೆ. ಇವರು ಬರೆದ ಕಥೆಗಳೆಲ್ಲವೂ ಶಕ್ತಿಯುತವಾಗುವುದೇ ಲೇಖಕರ ಅತ್ಯಂತ ಮೊನಚಾದ ಜೀವನದೃಷ್ಟಿಯಿಂದ. ಇಂತಹ ಕಥೆಗಳನ್ನು ಅಕ್ಷರದಿಂದ ದೃಶ್ಯ ಮಾಧ್ಯಮಕ್ಕೆ ತರುವುದು ಬಹು ಕಷ್ಟದ ಕೆಲಸ. ಏಕೆಂದರೆ, ಸಾಮನ್ಯವಾಗಿ ಪೂಚಂತೇ ಅವರು ತಮ್ಮ ಎಲ್ಲಾ ಕಥೆಗಳಲ್ಲೂ ತಾವೇ ನಿರೂಪಕರಾಗಿ ಇದ್ದುಬಿಟ್ಟಿರುತ್ತಾರೆ. ಹೀಗಾಗಿ ಪೂಚಂತೇ ಅವರ ಬಹುಮುಖ್ಯ ಅಭಿಪ್ರಾಯಗಳು ಕಣ್ಣೆದುರು ಬಾರದ ನಿರೂಪಕನದ್ದೇ ಆಗಿ ಕಥೆಗಳಲ್ಲಿ ಬಂದಿರುತ್ತದೆ. ಇಂತಹವನ್ನು ದೃಶ್ಯಕ್ಕೆ ತರುವುದು ನಿಜಕ್ಕೂ ಸಾಹಸವೇ ಆಗಿರುತ್ತದೆ. ಈ ನಿಟ್ಟಿನಲ್ಲಿ ನಮ್ಮಲ್ಲಿ ಸಾಹಿತ್ಯ ಪ್ರಕಾರವನ್ನು ಆಧರಿಸಿ ಸಿನಿಮಾ ಆಗಿರುವ ಎಲ್ಲಾ ಚಿತ್ರಗಳಲ್ಲಿಯೂ ಇದೊಂದು ಸಮಸ್ಯೆಯೇ. ಕಾದಂಬರಿ ಅಥವಾ ಕಥೆಯಲ್ಲಿ ವಾಕ್ಯವೊಂದರಲ್ಲಿ ಬಂದುಬಿಡಬಹುದಾದ ವಿವರವನ್ನ ತೆರೆಯ ಮೇಲೆ ದೃಶ್ಯವಾಗಿ ಹೇಳುವಾತ ಮೂಲರೂಪ ಕೊಟ್ಟವನಿಗಿಂತ ಒಂದು ಹೆಜ್ಜೆ ಮುಂದೆ ನಿಂತು ಯೋಚಿಸುವವನಾಗಬೇಕು. ಹಾಗಲ್ಲವಾದರೆ, ಮೂಲಕೃತಿಯೇ ಪ್ರತಿರೂಪದ ಮೇಲೆ ತನ್ನ ಛಾಯೆಯನ್ನ ಅಚ್ಚೊತ್ತಿಬಿಡುತ್ತದೆ. ಈ ದೃಷ್ಟಿಯಿಂದ ಕನ್ನಡ ಚಿತ್ರರಂಗದ ಸಂದರ್ಭದಲ್ಲಿ, ಸಾಹಿತ್ಯ ಪ್ರಕಾರವನ್ನು ಆಧರಿಸಿ ತಯಾರದ ಸಿನಿಮಾಗಳಲ್ಲಿ ಶ್ರೇಷ್ಟವಾದುದು ಎಂದು ಕರೆಸಿಕೊಳ್ಳುವ ಕೆಲವೇ ಸಿನಿಮಾಗಳಲ್ಲಿ, ಗಿರೀಶ್ ಕಾಸರವಳ್ಳಿಯವರ ನಿರ್ದೇಶನದ “ತಬರನಕಥೆ’ಯೂ ಒಂದು.
ಇತ್ತೀಚಿನ ಪ್ರತಿಕ್ರಿಯೆಗಳು…