ಸಡಗರಕ್ಕೆ ಸಾವಿಲ್ಲ

(ಬಿ.ವಿ.ಕಾರಂತರನ್ನು ಕುರಿತಂತೆ ಕೆಲವು ಮಾತು - ಕಾರಂತರಿಗೆ ಎಂಬತ್ತು ಎಂಬ ಹೆಸರಿನಲ್ಲಿ ಈಚೆಗೆ ಬೆಂಗಳೂರಿನಲ್ಲಿ ನಡೆದ ಉತ್ಸವದಲ್ಲಿ ಸೆಪ್ಟಂಬರ್ ೨೦ರಂದು ಆಡಿದ ಮಾತಿನ ಲೇಖನ ರೂಪ)

ನನಗೆ ಇಂದು ಉಪನ್ಯಾಸ ನೀಡು ಎಂದಿದ್ದಾರೆ. ನಾನು ಉಪನ್ಯಾಸಕ ಅಲ್ಲ. ಇನ್ನು ಭಾಷಣ ಮಾಡುವ ಕಲೆ ನನಗೆ ಸಿದ್ಧಿಸಿಲ್ಲ. ಹಾಗಾಗಿ ನಾನು ಮಾತಾಡುವುದೇ ಸೂಕ್ತ ಅಂದುಕೊಂಡಿದ್ದೇನೆ. ಮಾತು ಜಂಗಮ. ಅದಕ್ಕೆ ಲಂಘನದ ಸಾಧ್ಯತೆ ಹೆಚ್ಚು. ಹಾಗಾಗಿ ನಾನು ಮಾತನ್ನೇ ಆಡುತ್ತೇನೆ. ಈ ಮಾತುಗಳಲ್ಲಿ ಒಂದು ಕ್ರಮ ಇಲ್ಲ. ಇದು ನೆನಪಿನ ಹಾದಿ. ಇದಕ್ಕೆ ಹಿಡಿದದ್ದೇ ದಾರಿ. ಆದ್ದರಿಂದ ಇಲ್ಲಿ ಬರೆದಿರುವುದು ಚರಿತ್ರೆಯೂ ಅಲ್ಲ. ಇದು ನನ್ನ ಅನುಭವ ಮಾತ್ರ. ನನ್ನ ಅನುಭವ ನಿಮ್ಮದೂ ಆಗಬೇಕೆಂಬ ಒತ್ತಾಯವೂ ಇಲ್ಲ. ನನ್ನ ಅಭಿಪ್ರಾಯ ನಿಮ್ಮದಾಗಬೇಕೆಂಬ ಹೇರಿಕೆಯೂ ಇಲ್ಲ. ಇನ್ನು ಮಾತಿಗಿಳಿಯುತ್ತೇನೆ.  ಈ ಮಾತಿಗೆ ಬಿ.ವಿ.ಕಾರಂತ್ – ಮೈ ಇಂಪ್ರೆಶನ್ಸ್ ಎಂಬ ಶೀರ್ಷಿಕೆ ಕೊಟ್ಟಿದ್ದಾರೆ ಸಂಘಟಕರು. ಇದು ಮತ್ತೊಂದು ಕಷ್ಟದ ಕೆಲಸ. ನನ್ನ ಅನಿಸಿಕೆಗಳು ಅನ್ನುವುದು ನಾನು ಗ್ರಹಿಸಿದ ವಿವರಗಳಿಂದ ದಾಖಲಾಗುವಂತಹದು. ಅದು ಎಂದಿಗೂ ಪರಿಪೂರ್ಣವಲ್ಲ. ಇನ್ನು ದಾಖಲೆಗಳ ಸಮೇತ, ಅಂಕಿ-ಸಂಖ್ಯೆಗಳ ಸಹಿತ ಯಾರಾದರೂ ಬಿಟ್ಟುಹೋದ ಗುರುತುಗಳನ್ನ ಹುಡುಕುವುದು ಎಂದರೆ ಅದೊಂದು ತಜ್ಞರ ಕೆಲಸ. ಆ ಕೆಲಸ ಮಾಡಲು ನಾನು ತಜ್ಞನಲ್ಲ.
ಇನ್ನು ‘ಮೈ ಇಂಪ್ರೆಷನ್ಸ್’ ಎಂಬಲ್ಲಿ ‘ಮೈ’ ಎಂಬುದು ಕನ್ನಡವೋ-ಇಂಗ್ಲಿಷೋ ಎಂಬ ಪ್ರಶ್ನೆಯೂ ಇದೆ. ಈ ಕುರಿತು ಸಂಘಟಕರಾದ ಶ್ರೀನಿವಾಸ್ ಜಿ.ಕಪ್ಪಣ್ಣ ಅವರೊಂದಿಗೆ ಮಾತಾಡಿದಾಗ ಅವರು ಜೋಕ್ ಮಾಡಿಬಿಟ್ಟರು. ನಾನು ನಿಮ್ಮೆದುರಿಗೆ ಜೋಕ್ ಮಾಡಲಾರೆ. ಹೀಗಾಗಿ ನನ್ನ ಮಾತುಗಳ ಮೂಲಕ ಕಾರಂತರನ್ನು ಹುಡುಕುವ ಪ್ರಯತ್ನ ಮಾಡುತ್ತಾ ಇದ್ದೇನೆ. ಅಷ್ಟ. ಇನ್ನು ಕಾರಂತರ ಲೋಕಕ್ಕೇ ಹೋಗೋಣ.

Continue reading ‘ಸಡಗರಕ್ಕೆ ಸಾವಿಲ್ಲ’

ಬಿ.ಸುರೇಶ ಬರೆದಿರುವ ‘ಅರ್ಥ’

(ಒಂದು ದೃಶ್ಯದ ನಾಟಕ)

ಸ್ಫೂರ್ತಿ : ಜಯವಂತ ದಳವಿ ಅವರ ಮರಾಠಿ ಕಥೆ “ಜುಟ್ಟಿನ ಗಂಟು” ನಾಟಕದ ಅವಧಿ : ಸುಮಾರು ೪೫ ನಿಮಿಷಗಳು

ಪಾತ್ರಗಳು :
೧.    ಅಪ್ಪಾಜಿ – ಎಪ್ಪತ್ತರ ಹರೆಯದವ. ಸ್ವಾತಂತ್ರ್ಯ ಹೋರಾಟಗಾರ
೨.    ಟಿ.ಸಿ.ಜಗಳೂರು – ಮಧ್ಯವಯಸ್ಕ (ನಲ್ವತ್ತು ದಾಟಿದವನು), ರಾಘುವಿನ ಕಂಪೆನಿಯ ಸೆಕ್ರೆಟರಿ.
೩.    ರಾಘು – ಅಪ್ಪಾಜಿಯ ಮಗ (ಮುವ್ವತ್ತು ದಾಟಿದವನು), ವ್ಯಾಪಾರಿ
೪.    ಧ್ವನಿಗಳು – ರಾಘವೇಂದ್ರನ ಮನೆಗೆ ಪಾರ‍್ಟಿಗೆಂದು ಬಂದಿರುವ ಶ್ರೀಮಂತರು ಮತ್ತು ಸರ‍್ಕಾರೀ ಅಧಿಕಾರಿಗಳು.

ಮೊದಲ ಪ್ರತಿ: ೧೧ ಡಿಸೆಂಬರ್ ೧೯೯೨
(ಕಾವೇರಿ ಗಲಾಟೆಯಿಂದಾಗಿ ಕರ್ಫ್ಯೂ ಇದ್ದಕಾರಣ ದಿನವಿಡೀ ಮನೆಯಲ್ಲಿ ಕೂತಾಗ ಬರೆದದ್ದು)
ಪರಿಷ್ಕೃತ ಎರಡನೆಯ ಪ್ರತಿ : ೨೫ ಡಿಸೆಂಬರ್ ೧೯೯೮
ಪರಿಷ್ಕೃತ ಮೂರನೆಯ ಪ್ರತಿ : ೩ ಮಾರ್ಚ್ ೨೦೦೭
ಪರಿಷ್ಕೃತ ನಾಲ್ಕನೆಯ ಬೆರಳಚ್ಚು ಪ್ರತಿ : ೧೦ ಅಕ್ಟೋಬರ್ ೨೦೦೭ರಿಂದ ೨೧ ಅಕ್ಟೋಬರ್ ೨೦೦೭

ಮೊದಲ ಪ್ರದರ್ಶನ : ಜನವರಿ ೧೯೯೯
ಪ್ರದರ್ಶನ ಸ್ಥಳ : ಸುಚಿತ್ರಾ ರಂಗಮಂದಿರ, ಬೆಂಗಳೂರು
ರಂಗ ವಿನ್ಯಾಸ/ ಬೆಳಕು/ ನಿರ್ದೇಶನ : ಬಿ.ಸುರೇಶ
ಪ್ರಸಾಧನ : ನಾಣಿ ಬಹುರೂಪಿ
ಅಭಿನಯಿಸಿದ ಕಲಾವಿದರು :
ಸಿಹಿಕಹಿ ಚಂದ್ರು (ಜಗಳೂರು),
ಸುಧೀಂದ್ರ ಕುಲಕರ್ಣಿ (ಅಪ್ಪಾಜಿ),
ಅಲಕ್‌ನಂದಾ (ರಾಘು)

ದ್ವಿತೀಯ ಪ್ರದರ್ಶನ : ಮಾರ್ಚ್ ೨೦೦೭
ಪ್ರದರ್ಶನ ಸ್ಥಳ : ರಂಗಶಂಕರ, ಬೆಂಗಳೂರು
ವಿನ್ಯಾಸ/ ನಿರ್ದೇಶನ : ಬಿ.ಸುರೇಶ
ಬೆಳಕು ವಿನ್ಯಾಸ : ಕಲಾಗಂಗೋತ್ರಿ ಮಂಜು
ಪ್ರಸಾಧನ : ಮು.ಚಿ.ರಾಮಕೃಷ್ಣ
ಅಭಿನಯಿಸಿದ ಕಲಾವಿದರು :
ಮಂಜುನಾಥ್ ಹೆಗಡೆ (ಜಗಳೂರು),
ಶಂಕರ್ ಬಿಲೆಮನೆ (ಅಪ್ಪಾಜಿ),
ಚೆಸ್ವಾ, (ರಾಘು)

Continue reading ‘ಬಿ.ಸುರೇಶ ಬರೆದಿರುವ ‘ಅರ್ಥ’’

ಐಎಲ್‌ಓ ವರದಿ ೨೦೦೮ ಮತ್ತು ನಮ್ಮ ಕಾರ್ಮಿಕರ ಸ್ಥಿತಿ

(ಟಿವಿಠೀವಿ ಪತ್ರಿಕೆಯ ಜೂನ್ ತಿಂಗಳ ಸಂಚಿಕೆಗೆ ಎಂದು ಬರೆದ ಲೇಖನ)

ಈಚೆಗೆ ಅಂತಾರಾಷ್ಟ್ರೀಯ ಕಾರ್ಮಿಕರ ಸಂಘಟನೆಯ ೨೦೦೮ರ ವರದಿಯು ದೊರೆಯಿತು. ಅದೂ ಇಡಿಯಾಗಿ ಅಲ್ಲ. ಲೇಬರ್ ಫೈಲ್ ಎಂಬ ಅಂತಾರಾಷ್ಟ್ರೀಯ ಕಾರ್ಮಿಕ ಸಂಘಟನೆಗಳ ದ್ವೈಮಾಸಿಕ ಪತ್ರಿಕೆಯೊಂದರಲ್ಲಿ ಈ ವರದಿಯ ಸ್ಥೂಲ ವಿವರಗಳನ್ನು ನೀಡಲಾಗಿತ್ತು. ಅದನ್ನು ಗಮನಿಸುತ್ತಾ ನಾವು ಹಲವು ವರ್ಷಗಳಿಂದ ನಮ್ಮ ಉದ್ಯಮದಲ್ಲಿ ಕಾಣುತ್ತಿರುವ ಬದಲಾವಣೆ ಮತ್ತು ಬೆಳವಣಿಗೆಗಳನ್ನು ಕುರಿತು ಪ್ರತ್ಯೇಕವಾಗಿ ಆಲೋಚಿಸಬೇಕು ಎಂದೆನಿಸಿತು. ಹಾಗಾಗಿ ಈ ಮಾತುಗಳನ್ನು ಬರೆಯುತ್ತಾ ಇದ್ದೇನೆ.

Continue reading ‘ಐಎಲ್‌ಓ ವರದಿ ೨೦೦೮ ಮತ್ತು ನಮ್ಮ ಕಾರ್ಮಿಕರ ಸ್ಥಿತಿ’

ಒಬ್ಬ ರಂಗಕರ್ಮಿಯ ಹೆಜ್ಜೆ ಗುರುತು !

(ಹಬೀಬ್ ತನ್ವೀರ್ ಭಾರತೀಯ ರಂಗಭೂಮಿಯ ಶ್ರೇಷ್ಟ ನಿರ್ದೇಶಕರು. ಈಚೆಗೆ ಅವರು ನಿಧನರಾದರು. ಸೆಪ್ಟಂಬರ್ ೧, ೧೯೨೩ರಲ್ಲಿ ರಾಯಪುರದಲ್ಲಿ ಜನಿಸಿದ ಕಾಲದಿಂದ ೨೦೦೯ರ ಜೂನ್ ೮ರ ವರೆಗೆ ಹಬೀಬ್ ಅವರ ಸೃಜನಶೀಲ ಚಟುವಟಿಕೆಯ ಮೌಲ್ಯಮಾಪನ ಅವಶ್ಯ ಎನಿಸಿ ಈ ಲೇಖನವನ್ನು ಸಿದ್ಧಪಡಿಸಲಾಗಿದೆ.)

ವ್ಯಕ್ತಿಯೊಬ್ಬರು ತಮ್ಮ ಜೀವಿತದ ಅವಧಿಯಲ್ಲಿಯೇ ದಂತಕಥೆಯಾಗುವುದು ಅಪರೂಪ. ಆದರೆ ಹಬೀಬ್ ತನ್ವೀರ್ ಅವರ ಪ್ರಯತ್ನಗಳಿಗೆ ದೊರಕಿದ ಪ್ರೇಕ್ಷಕರ ಬೆಂಬಲ ಮತ್ತು ಆ ಪ್ರದರ್ಶನಗಳನ್ನು ಕುರಿತಂತೆ ಜಗತ್ತಿನಾದ್ಯಂತ ಇರುವ ಪ್ರತಿಕ್ರಿಯೆಯನ್ನು ಗಮನಿಸಿದರೆ ಅವರನ್ನು ನಮ್ಮ ಸಮಕಾಲೀನ ರಂಗಭೂಮಿಯ ದಂತಕಥೆಯಾದವರ ಪಟ್ಟಿಯಲ್ಲಿ ಸೇರಿಸಬಹುದು. ಸತ್ಯವೇನೆಂದರೆ ಇಂತಹ ದಂತಕತೆಗಳು ಸ್ವತಃ ಹುಟ್ಟುವುದಿಲ್ಲ, ಅದಕ್ಕಾಗಿ ಅವರು ಜೀವಮಾನವನ್ನೇ ಒಂದು ಅಪರೂಪದ ಪ್ರಯಾಣವಾಗಿಸಿರುತ್ತಾರೆ. ಹಬೀಬ್ ತನ್ವೀರ್ ಅವರ ರಂಗಭೂಮಿಯ ಯಶಸ್ಸಿಗೆ ಅವರು ಜೀವನದುದ್ದಕ್ಕೂ ಮಾಡಿದ ಪ್ರಯೋಗ ಹಾಗೂ ಪಯಣ ಕಾರಣವೆನ್ನುವುದರಲ್ಲಿ ಅನುಮಾನವಿಲ್ಲ.

Continue reading ‘ಒಬ್ಬ ರಂಗಕರ್ಮಿಯ ಹೆಜ್ಜೆ ಗುರುತು !’

ಬಡಮಧ್ಯಮ ವರ್ಗವು ಮತ್ತು ಸಹಕಾರದ ಅಗತ್ಯವು…

(ಸಹಕಾರಿ ಬ್ಯಾಂಕ್ ಒಂದರ ದಶಮಾನೋತ್ಸವಕ್ಕಾಗಿ ಬರೆದ ಲೇಖನ)

ನಮ್ಮ ದೇಶವನ್ನು ಅಭಿವೃದ್ಧಿ ಶೀಲ ದೇಶ ಎಂದು ಕರೆಯುತ್ತಾರೆ. ಅಂತಹದೊಂದು ಹೆಸರನ್ನು ನಮ್ಮ ದೇಶಕ್ಕೆ ದಯಪಾಲಿಸಿದವರು ಜಾಗತಿಕವಾಗಿ ಶ್ರೀಮಂತರು ಎನಿಸಿಕೊಂಡ ದೇಶದವರು. ಈ ಶ್ರೀಮಂತಿಕೆಯನ್ನು ಗುರುತಿಸುವುದಕ್ಕೇ ಇಂತಹ ‘ಹಿರಿ’ ದೇಶಗಳು ತಮ್ಮದೇ ಮಾನದಂಡಗಳನ್ನು ಮಾಡಿಕೊಂಡಿವೆ. ಅದರಲ್ಲಿ ಜಿ.ಡಿ.ಪಿ., ಸರಾಸರಿಯಾಗಿ ದಿನವೊಂದಕ್ಕೆ ಒಬ್ಬ ವ್ಯಕ್ತಿಯ ಬದುಕಿಗೆ ಬೇಕಾಗುವ ಹಣ, ಸರಾಸರಿ ಆದಾಯ, ಹೀಗೇ ಏನೇನೋ ಮಾಪನಗಳಿವೆ. ಅದೆಲ್ಲ ಮಾಪನಗಳಲ್ಲಿ ಸರಿದೊರೆಗಳೆನಿಸಿಕೊಳ್ಳಲು ಈ ನಾಡಿಗೆ ಬರುವ ಪ್ರತೀ ಸರ್ಕಾರವೂ ಸರ್ಕಸ್ ಮಾಡುತ್ತವೆ. ಈ ಸರ್ಕಸ್ಸುಗಳ ಪರಿಣಾಮವಂತೂ ನಮ್ಮ ಬಡಮಧ್ಯಮ ವರ್ಗದ ಮೇಲೆ ಆಗುತ್ತಲೇ ಇರುತ್ತದೆ. ಉದಾಹರಣೆಗೆ ನೋಡಿ, ಅದ್ಯಾವುದೋ ವಿಶ್ವ ಬ್ಯಾಂಕಿನ ಅಗತ್ಯದಂತೆ ಬಡತನದ ರೇಖೆಯಿಂದ ಕೆಳಗಿರುವವರ ಸಂಖ್ಯೆಯನ್ನು ಕಡಿಮೆ ತೋರಿಸಲೆಂದು ತಿಂಗಳ ಆದಾಯ ಸಾವಿರದ ಐದುನೂರಕ್ಕಿಂತ ಕಡಿಮೆ ಇರುವವರಿಗೆ ಮಾತ್ರ ಪಡಿತರ ವ್ಯವಸ್ಥೆ ಅಂದುಬಿಟ್ಟಿತು ನಮ್ಮ ಮನಮೋಹನ ಸಿಂಗರ ಸರ್ಕಾರ. ಪರಿಣಾಮ : ನಗರಗಳಲ್ಲಿ ವಾಸಿಸುತ್ತಾ ಇರುವ, ವಿಶೇಷವಾಗಿ ಕೊಳೆಗೇರಿಗಳಲ್ಲಿ ವಾಸಿಸುತ್ತಾ ಇರುವ ಅನೇಕರು ಪಡಿತರವನ್ನು ಕಳೆದುಕೊಂಡರು. ಮಾರುಕಟ್ಟೆ ಬೆಲೆಯಲ್ಲಿ ಅಕ್ಕಿ, ಗೋಧಿ ಕೊಳ್ಳುವ ಸ್ಥಿತಿಗೆ ಬಂದರು. ಅವರಿಗೆ ಬರುತ್ತಿದ್ದ ಆದಾಯದಲ್ಲಿ ದೊಡ್ಡ ಬದಲಾವಣೆ ಆಗಿರಲಿಲ್ಲ. ಆದರೆ ಅವರಿಗೆ ಸಿಗುತ್ತಿದ್ದ ಪಡಿತರ ಎಂಬ ಸೌಲಭ್ಯ ಮಾತ್ರ ಖೋತಾ ಆಯಿತು. ಆದಾಯ ಮತ್ತು ಖರ್ಚು ಸರಿದೂಗಿಸಲಾಗದೆ ಬಡ ಮಧ್ಯಮವರ್ಗ ಕೊರಗತೊಡಗಿತು. ನೀವೇ ಹೇಳಿ, ಈ ಕಾಲದಲ್ಲಿ ತಿಂಗಳಿಗೆ ಸಾವಿರದ ಐದುನೂರು ಸಂಪಾದಿಸಿದವರು ಬೆಂಗಳೂರಿನಂತಹ ಬೆಂಗಳೂರು ಇರಲಿ, ನಗರದ ಪಕ್ಕದಲ್ಲಿಯೇ ಇರುವ ಹಳ್ಳಿಯಲ್ಲಾದರೂ ಬದುಕಲು ಸಾಧ್ಯವೇ? ಸರ್ಕಾರವೊಂದು ಪಡಿತರ ವ್ಯವಸ್ಥೆಯನ್ನು ‘ತಿಂಗಳಿಗೆ ಸಾವಿರದ ಐದುನೂರಕ್ಕಿಂತ ಕಡಿಮೆ ಆದಾಯಯವರಿಗೆ ಮಾತ್ರ’ ಎಂದರೆ ಅಂತಹವರು ಬದುಕುವುದಾದರೂ ಹೇಗೆ ಸಾಧ್ಯ? ಇದು ಚಿತ್ರ ಒಂದು.

Continue reading ‘ಬಡಮಧ್ಯಮ ವರ್ಗವು ಮತ್ತು ಸಹಕಾರದ ಅಗತ್ಯವು…’

Next Page »