ಕೊಳಲಿನಿಂದ ಬಯಲಿಗೆ

(ಬಿ.ವಿ.ಕಾರಂತರು ನಿರ್ದೇಶಿಸಿದ ನೀನಾಸಂ ತಿರುಗಾಟ ಅಭಿನಯಿಸಿದ “ಗೋಕುಲ ನಿರ್ಗಮನ” ನಾಟಕದ ವಿಶ್ಲೇಷಣೆ)

ಕನ್ನಡ ರಂಗಭೂಮಿಯ ಸಂದರ್ಭದಲ್ಲಿ ಗೀತ ನಾಟಕಗಳು, ಅವುಗಳ ಆರಂಭಿಕ ರಚನೆಗಳು ಕನ್ನಡ ಸಾಹಿತ್ಯದಲ್ಲಿ ಕಂಡುಬಂದು ಆರು ದಶಕಗಳೇ ಆಗಿದ್ದರೂ ಬಹುತೇಕರಿಗೆ ಅಪರಿಚಿತವಾಗಿಯೇ ಉಳಿದಿವೆ. ಇದಕ್ಕೆ ಹಲವು ಕಾರಣಗಳಿವೆ. ಅವುಗಳಲ್ಲಿ ಪ್ರಮುಖವಾದದ್ದು ಎರಡು ಕಾರಣ. ಪಾಶ್ಚಾತ್ಯ ಸಾಹಿತ್ಯದಲ್ಲಿ ಬಂದ ಎಲ್ಲಾ ಪ್ರಯೋಗಗಳನ್ನು ನಮ್ಮಲ್ಲಿಗೆ ತರಬೇಕೆಂಬ, ಪಾಶ್ಚತ್ಯ ಪ್ರಯೋಗ ಶೈಲಿಗಳ ಪೂರ್ಣ ಪರಿಚಯವಿಲ್ಲದ ಅನುಕರಣೆಯೊಡನೆ ಬಂದ ಗೀತ ನಾಟಕ ಸಾಹಿತ್ಯ ಒಂದಾದರೆ, ಭಾಷೆಯೊಂದರ ಜೀವಂತಿಕೆಯನ್ನು ಹಿಡಿಯದೆ ಸಂಸ್ಕೃತ ಭೂಯಿಷ್ಟ ‘ಕನ್ನಡ’ವನ್ನು ಬಳಸಿದ ಗೀತ ನಾಟಕಗಳು ಎರಡನೆಯವು. ಇವೆರಡನ್ನು ಒಪ್ಪಿಕೊಳ್ಳಲು ಕನ್ನಡದ ಪ್ರೇಕ್ಷಕ ಸಿದ್ಧವಿರಲಿಲ್ಲವಾಗಿ ಗೀತ ನಾಟಕಗಳನ್ನು ಅನೇಕ ಸಾಹಿತಿಗಳು ಬರೆದರೂ ಅವುಗಳನ್ನು ಕೇವಲ ಶಾಸ್ತ್ರೀಯ ನೃತ್ಯ ಸಂಯೋಜಕರು ನೃತ್ಯ ರೂಪಕವಾಗಿ ನಟವಾಂಗದ ಜೊತೆಗೆ ಬಳಸಿದರು, ಮತ್ತೆ ಕೆಲವರು ಬ್ಯಾಲೆ ಆಗಿ ಪ್ರದರ್ಶಿಸಿದರು. ಯಾವ ಪ್ರಯತ್ನವೂ ಪೂರ್ಣ ಪ್ರಮಾಣದ ನಾಟಕಾನುಭವ ಕೊಡಲಿಲ್ಲ ಎಂಬುದು ಸತ್ಯ.

ಈ ಮಾತಿಗೆ ಅಪವಾದ ಎಂಬಂತೆ, ಇಂತಹ ಮಿತಿಗಳ ಆಚೆಗೆ ಕೆಲವು ಸಾಹಿತಿಗಳು ಬರೆದ ಗೀತ ನಾಟಕಗಳು ಬೆಳೆದಿವೆ. ಅಂತಹವರಲ್ಲಿ ಪು.ತಿ.ನರಸಿಂಹಾಚಾರ್ ಒಬ್ಬರು. ಅವರ ‘ಅಹಲ್ಯೋದ್ಧಾರ’, ‘ಗೋಕುಲ ನಿರ್ಗಮನ’, ‘ದೋಣಿಯ ಬಿನದ’, ‘ರಾಮೋದಯಂ’, ‘ಸೀತಾಪರೀಕ್ಷಣಂ’ ಗೀತ ನಾಟಕಗಳು ಕೇವಲ ಸಾಹಿತ್ಯ ಕೃತಿಯಾಗಿ ಮಾತ್ರವೇ ಅಲ್ಲದೆ ನಾಟಕವಾಗಿಯೂ ಪೂರ್ಣ ಸ್ವರೂಪ ಪಡೆದಿವೆ. ಆದರೂ ಹಿಂದಿನ ಅನುಭವಗಳ ನೆಲೆಯಲ್ಲಿ, ರಂಗತಜ್ಞರು ಗೀತನಾಟಕಗಳನ್ನು ಪ್ರದರ್ಶನಕ್ಕಾಗಿ ಆರಿಸಿಕೊಳ್ಳದೆ ಇದ್ದುದರಿಂದಾಗಿ ಪುತಿನ ಅವರ ಗೀತ ನಾಟಕಗಳು ಹೆಚ್ಚು ರಂಗ ಪ್ರಯೋಗವನ್ನು ಕಂಡಿರಲಿಲ್ಲ. ಇಂತಹ ಸಂದರ್ಭದಲ್ಲಿ ತಿರುಗಾಟ 93ರ ಮೂರು ನಾಟಕಗಳಲ್ಲಿ ಒಂದಾಗಿ ‘ಗೋಕುಲ ನಿರ್ಗಮನ’ ಪ್ರದರ್ಶನವಾಗುತ್ತಿದೆ ಎಂಬುದು ಮತ್ತು ಬಿ ವಿ ಕಾರಂತರು ಈ ನಾಟಕವನ್ನು ನಿರ್ದೇಶಿಸುತ್ತಿದ್ದಾರೆ ಎಂಬುದು ಸಹಜವಾಗಿ ಅನೇಕರ ಕುತೂಹಲ ಕೆರಳಿಸಿತ್ತು.

Continue reading ‘ಕೊಳಲಿನಿಂದ ಬಯಲಿಗೆ’

ನೀರುಳ್ಳಿಯ ನೆರಳಲ್ಲಿ

(ಗುಂಡೇ ಗೌಡನ ಚರಿತ್ರೆ ನಾಟಕ ಕುರಿತು ಒಂದಷ್ಟು ಅನಿಸಿಕೆಗಳು)

ದೂರದಿಂದ ಕಂಡಾಗ ಸ್ಪಷ್ಟ ರೂಪದೊಡನೆ ಕಂಡು ಹತ್ತಿರ ಹತ್ತಿರವಾಗಿ ಹುಡುಕಿದಾಗ ಅದಾಗಲೇ ತಿಳಿದದ್ದು ಅಸ್ಪಷ್ಟವಾಗಿ, ‘ಇದರ ಆರಂಭ ಎಲ್ಲಿಂದ ಆಯಿತು’ ಎಂಬ ಪ್ರಶ್ನೆಯನ್ನು ಉಳಿಸುವ ಭಾರತೀಯ ವೇದಾಂತವನ್ನು ಉದಾಹರಿಸಲು ತಕ್ಕ ಪ್ರತಿಮೆಯನ್ನ ಒದಗಿಸಿ ಕೊಡುತ್ತದೆ, ನೀರುಳ್ಳಿ. ಮೇಲಿನ ಒಣ ಸಿಪ್ಪೆಯನ್ನು ತೆಗೆದಾಗ ಕಾಣುವ ಮಿಂಚುವ ಮೈಯ ಒಳಸಿಪ್ಪೆಯನ್ನು ಕಂಡು ‘ಅದರೊಳಗಿದೆ ಮತ್ತೇನೊ..’ ಎಂದು ಬಿಚ್ಚುತ್ತಾ ಹೋದರೆ, ಸಿಪ್ಪೆಗಳೆಲ್ಲವೂ ಸುಲಿ ಸುಲಿದು… ‘ತಿರುಳೆಲ್ಲಿದೆ?’ ಎಂದಾಗುವಂತಹ ನೀರುಳ್ಳಿಯ ಇದೇ ಪ್ರತಿಮೆ ಮೂಲಕ ಹೆನ್ರಿಕ್ ಇಬ್ಸೆನ್ ತನ್ನ ಪಾತ್ರವೊಂದು ತನ್ನನ್ನೇ ಅರ್ಥಮಾಡಿಕೊಳ್ಳುವಾಗಿನ ಗೊಂದಲವನ್ನು ಪರಿಚಯಿಸುತ್ತಾನೆ, ಪಿಯರ್ ಗಯಂಟ್ ನಾಟಕದಲ್ಲಿ.

ಜಗದಾದ್ಯಂತ ಅತಿ ಕಡಿಮೆ ಪ್ರದರ್ಶನ ಕಂಡ, ಎಲ್ಲಾ ನಿರ್ದೇಶಕರಿಗೂ ಸವಾಲು ಎನಿಸಿದ ಪಿಯರ್ ಗಯಂಟ್ ಅನ್ನು “ಗುಂಡೇಗೌಡನ ಚರಿತ್ರೆ’ ಎಂಬ ಹೆಸರಿನಲ್ಲಿ ಇತ್ತೀಚೆಗೆ ರಂಗಾಯಣಕ್ಕಾಗಿ ರುಸ್ತುಂ ಭರೂಚ ನಿರ್ದೇಸಿಸಿದ್ದರು. ನಾಟಕದ ಅನುವಾದ ರಘುನಂದನ್ ಅವರದ್ದು. ಭಾರತದ ಮಟ್ಟಿಗೆ ಇದೇ ಮೊದಲ ಬಾರಿಗೆ ಈ ನಾಟಕ ರಂಗಕ್ಕೇರಿದ್ದು ಎಂದು ಈ ಲೇಖಕನ ನಂಬಿಕೆ. ನೇರ ಕಥನವಿಲ್ಲದ ಇಂತಹ ನಾಟಕವನ್ನು ಪ್ರಯೋಗಿಸುವುದು ಸಾಹಸದ ಕೆಲಸ. ಅದಾಗಲೇ ನೇರ ಕಥನಕ್ರಮವನ್ನು ತೊರೆದು ಹಲಕೆಲವು ಪ್ರಯೋಗಗಳನ್ನು ಮಾಡಿ, ತಮ್ಮ ನಾಟಕ ಚಿಂತನೆಯನ್ನು ಬರಹಗಳ ಮೂಲಕ ಸ್ಪಷ್ಟಪಡಿಸಿರುವ ರುಸ್ತುಂ ಭರೂಚ ಇಂತಹ ನಾಟಕವನ್ನು ಪ್ರಯೋಗಿಸಲು ಆಯ್ದುಕೊಂಡಾಗ ನೋಟಕರ ಕುತೂಹಲ ಕೆರಳುವುದು ಸಹಜ. (ರುಸ್ತುಂ ಭರೂಚ ನಿರ್ದೇಶಿಸಿರುವ ನಾಟಕಗಳಲ್ಲಿ ಯಾವುದನ್ನು ಈ ಲೇಖಕ ನೋಡಿಲ್ಲವಾದರೂ ಅವರ ಲೇಖನಗಳಿಂದ ಸ್ಪಷ್ಟವಾಗಿದ್ದ ಅವರ ಆಲೋಚನಾ ಕ್ರಮ ಈ ನಾಟಕವನ್ನು ನೋಡಲು ಕುತೂಹಲವನ್ನು ಒದಗಿಸಿತ್ತು.)

Continue reading ‘ನೀರುಳ್ಳಿಯ ನೆರಳಲ್ಲಿ’

ಅಂಜಿದ ಮಲ್ಲಿಗೆ

(ಪ್ರಸನ್ನ ನಿರ್ದೇಶನದ ಅಂಜುಮಲ್ಲಿಗೆ ನಾಟಕದ ವಿಮರ್ಶೆ)

ಕರ್ನಾಟಕದ ರಂಗ ಚಳುವಳಿಯ ಸಂದರ್ಭದಲ್ಲಿ ರಾಷ್ಟ್ರೀಯ ನಾಟಕ ಶಾಲೆಯ ಕೊಡುಗೆ ಅಪಾರ. ಸರಿಸುಮಾರು ಎಪ್ಪತ್ತರ ದಶಕದ ಆರಂಭದಿಂದ ಕನ್ನಡ ರಂಗಭೂಮಿಯ ಪ್ರಮುಖ ನಿರ್ದೇಶಕರು ರಂಗಕರ್ಮಿಗಳನೇಕರು ರಾಷ್ಟ್ರೀಯ ನಾಟಕ ಶಾಲೆಯಲ್ಲಿ ತರಬೇತಾದವರು. ಕಳೆದ ಐದು ಆರು ವರ್ಷಗಳನ್ನು ಹೊರತುಪಡಿಸಿದರೆ, ಕರ್ನಾಟಕದ ರಂಗ ಚಳುವಳಿಯ ಮುಂಚೂಣಿಯಲ್ಲಿ ಇರುವವರು ಎನ್ ಎಸ್ ಡಿ ಪದವೀಧರರೇ. ಹೀಗಾಗಿ ರಾಷ್ಟ್ರೀಯ ನಾಟಕಶಾಲೆಯಿಂದ ಬರಬಹುದಾದ ಹೊಸ ತಳಿಗಳ ಬಗ್ಗೆ, ಹೊಸ ಪ್ರಯೋಗಗಳ ಬಗ್ಗೆ ರಂಗಾಸಕ್ತರು ಕುತೂಹಲಿಗಳಾಗುವುದು ಸಹಜ.

ಅಂತೆಯೇ ಕರ್ನಾಟಕ ನಾಟಕ ಅಕಾಡೆಮಿ ಮತ್ತು ರಾಷ್ಟ್ರೀಯ ನಾಟಕ ಶಾಲೆಯ ಪ್ರಾದೇಶಿಕ ಸಂಪನ್ಮೂಲ ಕೇಂದ್ರಗಳು ಸೇರಿ, ಅಂತಿಮ ವರ್ಷದ ಎನ್ ಎಸ್ ಡಿ ವಿದ್ಯಾರ್ಥಿಗಳು ಅಭಿನಯಿಸಿದ ‘ಅಂಜುಮಲ್ಲಿಗೆ’ ನಾಟಕದ ಪ್ರದರ್ಶನವನ್ನು ಬೆಂಗಳೂರಿನಲ್ಲಿ ಏರ್ಪಡಿಸಿದಾಗ ರವೀಂದ್ರ ಕಲಾಕ್ಷೇತ್ರ ಕಿಕ್ಕಿರಿದಿತ್ತು. ಈ ಜನದಟ್ಟಣೆಗೆ ‘ಅಂಜುಮಲ್ಲಿಗೆ’ ಪ್ರಥಮ ಪ್ರದರ್ಶನದ ನಂತರ ರಾಷ್ಟ್ರಮಟ್ಟದಲ್ಲಿ ಎದ್ದ ಕೆಲವು ವಿವಾದಗಳಿಂದ ಏರ್ಪಟ್ಟ ಕುತೂಹಲ ಕಾರಣವಾಗಿರಬಹುದು. ಅದಕ್ಕಿಂತ ಮುಖ್ಯವಾಗಿ ನಮ್ಮ ಸಮಕಾಲೀನ ರಂಗ ನಿರ್ದೇಶಕರಲ್ಲಿ ಶ್ರೇಷ್ಠರು ಎನಿಸಿಕೊಂಡ ಪ್ರಸನ್ನ ಅವರು ಈ ನಾಟಕದ ನಿರ್ದೇಶಕರು ಎಂಬುದು, ಮತ್ತು ಸಾಹಿತ್ಯಕೃತಿಯಾಗಿ ಮಾತ್ರವಲ್ಲದೆ ರಂಗಕೃತಿಯಾಗಿಯೂ ಹೆಗ್ಗುರುತು ಎನಿಸಿಕೊಳ್ಳುವ ಗಿರೀಶ್ ಕಾರ್ನಾಡರ ‘ಅಂಜುಮಲ್ಲಿಗೆ’ ನಾಟಕದಲ್ಲಿ ‘ಪ್ರಸನ್ನ’ತನ ಏನಾಗಿರಬಹುದು ಎಂಬ ಕುತೂಹಲ ಕಾರಣವಾಗಿರಬಹುದು.

Continue reading ‘ಅಂಜಿದ ಮಲ್ಲಿಗೆ’

ಮೋರೆ ಅವಗುಣ್ ಚಿತ್ ನ ಧರೋ

(ರಂಗಾಯಣ ಅಭಿನಯಿಸಿದ “ಗಾಂಧಿ vs ಗಾಂಧಿ” ನಾಟಕ ಕುರಿತು ಟಿಪ್ಪಣಿ)

ರಿಯಲಿಸಂ ಮತ್ತು ರಿಯಲಿಸ್ಟಿಕ್ ಥಿಯೇಟರ್ ಭಾರತಕ್ಕೆ ಹೊಸದೇನು ಅಲ್ಲ 40ರ ದಶಕದಲ್ಲಿ ಪಾಶ್ಚಾತ್ಯರ ಪ್ರಭಾವದಿಂದ ಬಂಗಾಳದಲ್ಲಿ ಸಾಕಷ್ಟು ವಾಸ್ತವವಾಗಿ ನಾಟಕಗಳು ಆದದ್ದುಂಟು. ಅದಾದ ನಂತರ ಅಲ್ಲೇ ಶುರುವಾದ ಇಪ್ಟಾ ರಂಗ ಚಳುವಳಿ ರಿಯಲಿಸಂ ಜೊತೆಗೆ ನ್ಯಾಚುರಲಿಸಂ ಸಹ ಬಳಸಿದ್ದುಂಟು. ಈ ನಾಟಕಗಳ ಪ್ರಭಾವ ಕನ್ನಡ ರಂಗಭೂಮಿಯಲ್ಲೂ ಆಗಿ, ಇಲ್ಲೂ ಅನೇಕ ವಾಸ್ತವವಾದಿ ಮತ್ತು ಸಹಜ ರಂಗಭೂಮಿ ನಾಟಕಗಳು ಪ್ರದರ್ಶನ ಆಗಿವೆ. ಆದರೆ 70ರ ದಶಕದ ಆದಿಯಲ್ಲಿ ಬಿವಿ ಕಾರಂತರು ನಿರ್ದೇಶಿಸಿದ ‘ಹಯವದನ’, ‘ಜೋಕುಮಾರಸ್ವಾಮಿ’ ಮುಂತಾದ ನಾಟಕಗಳ ಯಶಸ್ಸಿನ ಪ್ರಭಾವ ನಮ್ಮ ರಂಗಭೂಮಿಯ ಮೇಲೆ ಅದೆಷ್ಟು ಆಯಿತೆಂದರೆ ನಿಧಾನವಾಗಿ ವಾಸ್ತವವಾಗಿ ರಂಗ ಪ್ರದರ್ಶನಗಳು ನಾಪತ್ತೆಯಾಗಿ ಸಂಪೂರ್ಣ ಶೈಲಿಕೃತ ರಂಗಭೂಮಿ ನಮ್ಮಲ್ಲಿ ಉಳಿಯಿತು. ಈ ಮಾತಿಗೆ ಅಪವಾದ ಎಂಬಂತೆ ಆರ್ ನಾಗೇಶ್ ನಿರ್ದೇಶಿಸಿದ ಹಲವು ನಾಟಕಗಳು, ಸುರೇಂದ್ರನಾಥ್ ನಿರ್ದೇಶನದ ಕೆಲವು ನಾಟಕಗಳು ನಮ್ಮಲ್ಲಿ ಆಗಿವೆ. ಮೈಸೂರು ಸಮುದಾಯಕ್ಕಾಗಿ ಎಸ್. ರಮೇಶ್ ಕೆಲವು ರಿಯಲಿಸ್ಟಿಕ್ ಥಿಯೇಟರಿನ ನಾಟಕಗಳನ್ನು ಮಾಡಿಸಿದ್ದಾರೆ. ಆದರೆ ಕಳೆದ ಎರಡು ದಶಕಗಳಲ್ಲಿ ಕನ್ನಡ ರಂಗಭೂಮಿಯ ಪ್ರಧಾನ ನಾಟಕಗಳು ಎಂದೆನಿಸಿಕೊಂಡ ‘ಲಕ್ಷಾಪತಿ’, ‘ಮಂಟೇಸ್ವಾಮಿ’, ‘ಮಹಾಚೈತ್ರ’ ಮುಂತಾದವುಗಳು ಶೈಲಿಕೃತ ನಾಟಕಗಳೇ ಆಗಿವೆ. ಹೀಗಿರುವಾಗ ಆಕ್ಟರ್ಸ್ ಥಿಯೇಟರ್ ಮತ್ತು ರಿಯಲಿಸ್ಟಿಕ್ ಥಿಯೇಟರ್ ನ ಗುಣಗಳನ್ನು ಉಳ್ಳ “ಗಾಂಧಿ vs ಗಾಂಧಿ” ನಾಟಕವನ್ನು ರಂಗಾಯಣ ಆರಿಸಿಕೊಂಡದ್ದು, ನನ್ನ ಮಟ್ಟಿಗೆ, ಕುತೂಹಲಕಾರಿ ಬೆಳವಣಿಗೆ.

Continue reading ‘ಮೋರೆ ಅವಗುಣ್ ಚಿತ್ ನ ಧರೋ’

ಕೃತಿಯಾಚೆಗಿನ ವಿಸ್ತಾರಕ್ಕೆ

(ರಘುನಂದನ್ ನಿರ್ದೇಶನದ “ಗುಣಮುಖ” ನಾಟಕದ ವಿಮರ್ಶೆ)

ನಾಟಕ ಕರ್ನಾಟಕ ರಂಗಾಯಣದವರು ಬೆಂಗಳೂರು ಮೊಕ್ಕಂ ಹೂಡಿದರು. ಐದು ನಾಟಕಗಳನ್ನು ಪ್ರದರ್ಶಿಸಿದರು; ತಲೆತಂಡ, ಮಿಡ್ ಸಮ್ಮರ್ ನೈಟ್ ಡ್ರೀಮ್, ಚಂದ್ರಹಾಸ, ಪ್ರತಿಶೋಧ, ಗುಣಮುಖ. ಕಳೆದ ಏಳು ವರ್ಷಗಳಿಂದ ರಂಗಭೂಮಿಯೇ ಜೀವನ ಆಗಿರುವವರ ನಾಟಕ ಪ್ರದರ್ಶನದಲ್ಲಿ ವೃತ್ತಿಪರತೆ ಇರುವುದು ವಿಶೇಷವೇನು ಅಲ್ಲ. ಈ ವೃತ್ತಿಪರತೆ, ಪ್ರದರ್ಶನ ಪ್ರಿಯತೆಯ ನಡುವೆ ಅನುಭವ ಸಾಂದ್ರತೆಯುಳ್ಳ ಪ್ರಯೋಗ ಆಗುವುದು ವಿಶೇಷ. ಬೆಂಗಳೂರು ಮೊಕ್ಕಂನಲ್ಲಿ ರಂಗಾಯಣದವರು ಮಾಡಿದ ಎಲ್ಲಾ ನಾಟಕಗಳು ಎರಡನೆಯ ಹಂತವನ್ನು ತಲುಪಿರಲಿಲ್ಲ. ಈ ಐದರಲ್ಲಿ ನನಗೆ ವಿಶೇಷ ಎನಿಸಿದ ಪ್ರದರ್ಶನ ಕುರಿತು ಈ ಲೇಖನದಲ್ಲಿ ಮಾತಾಡುತ್ತೇನೆ.

Continue reading ‘ಕೃತಿಯಾಚೆಗಿನ ವಿಸ್ತಾರಕ್ಕೆ’

ಕೆಲವು ಪುಟಗಳು…

ಈವರೆಗೆ ಇಲ್ಲಿ ಸುಳಿದಾಡಿದವರು...

  • 114,298 ಜನರು