(ಬಿ.ವಿ.ಕಾರಂತರು ನಿರ್ದೇಶಿಸಿದ ನೀನಾಸಂ ತಿರುಗಾಟ ಅಭಿನಯಿಸಿದ “ಗೋಕುಲ ನಿರ್ಗಮನ” ನಾಟಕದ ವಿಶ್ಲೇಷಣೆ)
ಕನ್ನಡ ರಂಗಭೂಮಿಯ ಸಂದರ್ಭದಲ್ಲಿ ಗೀತ ನಾಟಕಗಳು, ಅವುಗಳ ಆರಂಭಿಕ ರಚನೆಗಳು ಕನ್ನಡ ಸಾಹಿತ್ಯದಲ್ಲಿ ಕಂಡುಬಂದು ಆರು ದಶಕಗಳೇ ಆಗಿದ್ದರೂ ಬಹುತೇಕರಿಗೆ ಅಪರಿಚಿತವಾಗಿಯೇ ಉಳಿದಿವೆ. ಇದಕ್ಕೆ ಹಲವು ಕಾರಣಗಳಿವೆ. ಅವುಗಳಲ್ಲಿ ಪ್ರಮುಖವಾದದ್ದು ಎರಡು ಕಾರಣ. ಪಾಶ್ಚಾತ್ಯ ಸಾಹಿತ್ಯದಲ್ಲಿ ಬಂದ ಎಲ್ಲಾ ಪ್ರಯೋಗಗಳನ್ನು ನಮ್ಮಲ್ಲಿಗೆ ತರಬೇಕೆಂಬ, ಪಾಶ್ಚತ್ಯ ಪ್ರಯೋಗ ಶೈಲಿಗಳ ಪೂರ್ಣ ಪರಿಚಯವಿಲ್ಲದ ಅನುಕರಣೆಯೊಡನೆ ಬಂದ ಗೀತ ನಾಟಕ ಸಾಹಿತ್ಯ ಒಂದಾದರೆ, ಭಾಷೆಯೊಂದರ ಜೀವಂತಿಕೆಯನ್ನು ಹಿಡಿಯದೆ ಸಂಸ್ಕೃತ ಭೂಯಿಷ್ಟ ‘ಕನ್ನಡ’ವನ್ನು ಬಳಸಿದ ಗೀತ ನಾಟಕಗಳು ಎರಡನೆಯವು. ಇವೆರಡನ್ನು ಒಪ್ಪಿಕೊಳ್ಳಲು ಕನ್ನಡದ ಪ್ರೇಕ್ಷಕ ಸಿದ್ಧವಿರಲಿಲ್ಲವಾಗಿ ಗೀತ ನಾಟಕಗಳನ್ನು ಅನೇಕ ಸಾಹಿತಿಗಳು ಬರೆದರೂ ಅವುಗಳನ್ನು ಕೇವಲ ಶಾಸ್ತ್ರೀಯ ನೃತ್ಯ ಸಂಯೋಜಕರು ನೃತ್ಯ ರೂಪಕವಾಗಿ ನಟವಾಂಗದ ಜೊತೆಗೆ ಬಳಸಿದರು, ಮತ್ತೆ ಕೆಲವರು ಬ್ಯಾಲೆ ಆಗಿ ಪ್ರದರ್ಶಿಸಿದರು. ಯಾವ ಪ್ರಯತ್ನವೂ ಪೂರ್ಣ ಪ್ರಮಾಣದ ನಾಟಕಾನುಭವ ಕೊಡಲಿಲ್ಲ ಎಂಬುದು ಸತ್ಯ.
ಈ ಮಾತಿಗೆ ಅಪವಾದ ಎಂಬಂತೆ, ಇಂತಹ ಮಿತಿಗಳ ಆಚೆಗೆ ಕೆಲವು ಸಾಹಿತಿಗಳು ಬರೆದ ಗೀತ ನಾಟಕಗಳು ಬೆಳೆದಿವೆ. ಅಂತಹವರಲ್ಲಿ ಪು.ತಿ.ನರಸಿಂಹಾಚಾರ್ ಒಬ್ಬರು. ಅವರ ‘ಅಹಲ್ಯೋದ್ಧಾರ’, ‘ಗೋಕುಲ ನಿರ್ಗಮನ’, ‘ದೋಣಿಯ ಬಿನದ’, ‘ರಾಮೋದಯಂ’, ‘ಸೀತಾಪರೀಕ್ಷಣಂ’ ಗೀತ ನಾಟಕಗಳು ಕೇವಲ ಸಾಹಿತ್ಯ ಕೃತಿಯಾಗಿ ಮಾತ್ರವೇ ಅಲ್ಲದೆ ನಾಟಕವಾಗಿಯೂ ಪೂರ್ಣ ಸ್ವರೂಪ ಪಡೆದಿವೆ. ಆದರೂ ಹಿಂದಿನ ಅನುಭವಗಳ ನೆಲೆಯಲ್ಲಿ, ರಂಗತಜ್ಞರು ಗೀತನಾಟಕಗಳನ್ನು ಪ್ರದರ್ಶನಕ್ಕಾಗಿ ಆರಿಸಿಕೊಳ್ಳದೆ ಇದ್ದುದರಿಂದಾಗಿ ಪುತಿನ ಅವರ ಗೀತ ನಾಟಕಗಳು ಹೆಚ್ಚು ರಂಗ ಪ್ರಯೋಗವನ್ನು ಕಂಡಿರಲಿಲ್ಲ. ಇಂತಹ ಸಂದರ್ಭದಲ್ಲಿ ತಿರುಗಾಟ 93ರ ಮೂರು ನಾಟಕಗಳಲ್ಲಿ ಒಂದಾಗಿ ‘ಗೋಕುಲ ನಿರ್ಗಮನ’ ಪ್ರದರ್ಶನವಾಗುತ್ತಿದೆ ಎಂಬುದು ಮತ್ತು ಬಿ ವಿ ಕಾರಂತರು ಈ ನಾಟಕವನ್ನು ನಿರ್ದೇಶಿಸುತ್ತಿದ್ದಾರೆ ಎಂಬುದು ಸಹಜವಾಗಿ ಅನೇಕರ ಕುತೂಹಲ ಕೆರಳಿಸಿತ್ತು.
Continue reading ‘ಕೊಳಲಿನಿಂದ ಬಯಲಿಗೆ’
ಇತ್ತೀಚಿನ ಪ್ರತಿಕ್ರಿಯೆಗಳು…