ಅಕ್ಷರ ಸಂಗಾತ ಮಾಸ ಪತ್ರಿಕೆಯು ಪ್ರಜಾವಾಣಿ ದಿನ ಪತ್ರಿಕೆಯ ಅಮೃತ ಮಹೋತ್ಸವದ ಸಂದರ್ಭಕ್ಕಾಗಿ ರಂಗಕರ್ಮಿ, ಚಿತ್ರ ತಯಾರಕ ಬಿ. ಸುರೇಶ ಅವರ ಜೊತೆಗೆ ನಡೆಸಿದ ಸಂವಾದ

ಅಕ್ಷರ ಸಂಗಾತ ಮಾಸ ಪತ್ರಿಕೆಯು ಪ್ರಜಾವಾಣಿ ದಿನ ಪತ್ರಿಕೆಯ ಅಮೃತ ಮಹೋತ್ಸವದ ಸಂದರ್ಭಕ್ಕಾಗಿ ರಂಗಕರ್ಮಿ, ಚಿತ್ರ ತಯಾರಕ ಬಿ. ಸುರೇಶ ಅವರ ಜೊತೆಗೆ ನಡೆಸಿದ ಸಂವಾದ

ವಿಶಾಖ ಎನ್ ಅವರ ಪ್ರಶ್ನೆಗಳು:

೧. ರಂಗಭೂಮಿ, ಹಿರಿತೆರೆ, ಕಿರುತೆರೆ ಮತ್ತೆ ಸಿನಿಮಾ….ನಿಮ್ಮ ಈ ಪಯಣದ ತಂತುವನ್ನೊಮ್ಮೆ ಮೆಲುಕು ಹಾಕಿ….

– ಅದೊಂದು ಹಲವು ಆಕಸ್ಮಿಕಗಳ ಸಂತೆ.
೧೯೭೨ರಲ್ಲಿ, ನಾನು ಒಂಬತ್ತು ವರ್ಷದವನಿದ್ದಾಗ, ಬಿ.ವಿ. ಕಾರಂತರ ನಿರ್ದೇಶನದ ಈಡಿಪಸ್ ನಾಟಕ ನೋಡಲು ತಾಯಿಯ ಜೊತೆಗೆ ಹೋಗಿದ್ದೆ. ಕುರುಡನನ್ನು ವೇದಿಕೆಗೆ ಕರೆದೊಯ್ಯುವ ಮಾತಿಲ್ಲದ ಸಣ್ಣ ಪಾತ್ರ ಮಾಡುತ್ತಿದ್ದ ಹುಡುಗನಿಗೆ ಅನಾರೋಗ್ಯವಾಗಿತ್ತು. ಹಾಗಾಗಿ ಸಭಾಂಗಣದಲ್ಲಿ ಅಮ್ಮನ ಪಕ್ಕದಲ್ಲಿದ್ದ ನಾನು ಆಕಸ್ಮಿವಾಗಿ ಆ ಪಾತ್ರ ಮಾಡುವಂತಾಗಿ, ಆ ಮೂಲಕ ರಂಗಪ್ರವೇಶ ಆಯಿತು. ಅಲ್ಲಿಂದಾಚೆಗೆ ಎಎಸ್‌ ಮೂರ್ತಿಯವರ ತಂಡದ ಹಲವು ನಾಟಕಗಳಲ್ಲಿ ಸಣ್ಣ, ದೊಡ್ಡ ಪಾತ್ರಗಳನ್ನು ಮಾಡುವ ಮೂಲಕ ರಂಗಸಾಂಗತ್ಯ ಮುಂದುವರೆಯಿತು. ಅಲ್ಲಿಂದ ಇಲ್ಲಿಯವರೆಗೆ ಸುಮಾರು ಐದು ದಶಕಗಳ ರಂಗಭೂಮಿ ಒಡನಾಟ. ಇವತ್ತಿಗೂ ರಂಗಭೂಮಿ ನನ್ನ ಮೊದಲ ಆದ್ಯತೆ. ನಾನು ನಟ ಆಗಲು, ನಾಟಕಕಾರ ಮತ್ತು ನಿರ್ದೇಶಕ ಆಗಲು ದಾರಿ ಮಾಡಿಕೊಟ್ಟಿದೆ. ನನ್ನ ವ್ಯಕ್ತಿತ್ವ ರೂಪಿಸಿದೆ. ಹಾಗಾಗಿ ರಂಗಭೂಮಿ ಯಾವತ್ತಿಗೂ ನನ್ನ ತವರು ಮನೆ ಅನ್ನಬಹುದು.



೧೯೭೫ರಲ್ಲಿ ನಾನು ಅಭಿನಯಿಸಿದ ಒಂದು ನಾಟಕವನ್ನು ಮತ್ತು ಬಿ.ವಿ. ಕಾರಂತರನ್ನು ದೆಹಲಿಯ ಎನ್‌ಎಸ್‌ಡಿಗೆ ಬೀಳ್ಕೊಡುವ ಸಮಾರಂಭದಲ್ಲಿ ನಾನು ಮಾಡಿದ ಭಾಷಣವನ್ನು ಕೇಳಿದ ಗಿರೀಶ್ ಕಾಸರವಳ್ಳಿ ಅವರು ತಮ್ಮ ನಿರ್ದೇಶನದ ಮೊದಲ ಚಿತ್ರ “ಘಟಶ್ರಾದ್ಧ” ದಲ್ಲಿ ಒಂದು ಪಾತ್ರಕ್ಕೆ ನನ್ನನ್ನು ಆರಿಸಿದರು. ಅಲ್ಲಿಂದ ನನ್ನ ಚಿತ್ರರಂಗದ ಸಾಂಗತ್ಯ ಆರಂಭವಾಯಿತು. ಅಲ್ಲಿಂದ ಇಲ್ಲಿಯವರೆಗೆ ಚಿತ್ರೋದ್ಯಮ ನನ್ನನ್ನು ನಟನಾಗಿ, ಬರಹಗಾರನಾಗಿ, ನಿರ್ದೇಶಕನಾಗಿ, ನಿರ್ಮಾಪಕನಾಗಿ ಹಲವು ವೇಷ ತೊಡುವ ಅವಕಾಶ ಒದಗಿಸಿದೆ.

ಕಿರುತೆರೆಗೆ ಪ್ರವೇಶ ಆಗಿದ್ದು ನಟನಾಗಿ. ನಾನು ಅಭಿನಯಿಸಿದ್ದ ʼಮ್ಯಾಕ್‌ಬೆತ್‌ʼ ನಾಟಕದ ಪಾತ್ರವನ್ನು ಕಂಡ ಶ್ಯಾಮಸುಂದರ್‌ ಮತ್ತು ಗುರುದತ್ ಅವರು (ಚಲನಚಿತ್ರ ಕಲಾವಿದೆ ಮೈನಾವತಿ ಅವರ ಮಕ್ಕಳು) ತಮ್ಮ “ಬಿಸಿಲುಕುದುರೆ” ಧಾರಾವಾಹಿಯಲ್ಲಿ ಪಾತ್ರ ಮಾಡಲು ಆಹ್ವಾನಿಸಿದರು. ಆ ಮೂಲಕ, ೧೯೮೭ರಲ್ಲಿ ಕಿರುತೆರೆಗೆ ಆಕ್ಸಮಿಕ ಎಂಬಂತೆ ಪ್ರವೇಶಿಸಿದೆ. ನಂತರ ರಂಗಾನುಭವದ ಹಿನ್ನೆಲೆಯು ಕಿರುತೆರೆಯ ಹಲವು ವಿಭಾಗದಲ್ಲಿ ದುಡಿಯುವ ಅವಕಾಶ ಒದಗಿಸಿತು. ಹಲವು ಹೊಸ ಪ್ರಯೋಗ ಮಾಡಲು ಕಿರುತೆರೆಯೇ ಅವಕಾಶ ನೀಡಿತು. ಕಿರುತೆರೆಯು ನನ್ನನ್ನು ಕೇವಲ ನಟನಾಗಿ ಉಳಿಸದೆ, ಬರಹಗಾರನನ್ನಾಗಿ ಮತ್ತು ನಿರ್ದೇಶಕನನ್ನಾಗಿ ಮಾಡಿದ್ದಲ್ಲದೆ ನಿರ್ಮಾಪಕನಾಗಿಯೂ ಬೆಳೆಸಿತು.

೨. ಶಂಕರ್‌ನಾಗ್, ರವಿಚಂದ್ರನ್ ಜತೆಗಿನ ನೆನಪು… ಕಲಿಕೆ
– ಶಂಕರ್‌ ನಾಗ್‌ ಅವರು ತಮ್ಮ ತಂಡದ ನಾಟಕದ ಕರಪತ್ರ, ಪ್ರಚಾರ ಸಾಮಗ್ರಿ, ಟಿಕೀಟುಗಳನ್ನು ಮುದ್ರಿಸಲು ನನ್ನಮ್ಮ ನಡೆಸುತ್ತಿದ್ದ ಮುದ್ರಣಾಲಯಕ್ಕೆ ಬರುತ್ತಿದ್ದರು. ಅಲ್ಲಿ ಅವರ ಪರಿಚಯ ಆಯಿತು. ನಂತರ ಕರಪತ್ರದ ಕರಡು ಪ್ರತಿಯನ್ನು ಅವರ ಮನೆಗೆ ತೆಗೆದುಕೊಂಡು ಹೋಗುತ್ತಿದ್ದೆನಾಗಿ ಅರುಂಧತಿ ನಾಗ್‌, ಪಿಂಟಿ ರಾವ್‌ ಹೀಗೆ ಹಲವರ ಪರಿಚಯ ಅವರ ಮನೆಯಲ್ಲಿ ಆಯಿತು. ನಾನೂ ಸಹ ರಂಗ ಸಾಂಗತ್ಯ ಇರುವವನು ಎಂದು ಗೊತ್ತಾದ ಶಂಕರ್‌ ನಾಗ್‌ ಅವರು ತಮ್ಮ ತಂಡದ ನಾಟಕಗಳಿಗೆ ಕೆಲಸ ಮಾಡಲು ಹಚ್ಚಿದರು. ಹಾಗೆ ನನ್ನ ಮತ್ತು ಶಂಕರ್ ನಾಗ್ ಅವರ ನಂಟು ಬೆಳೆಯಿತು, ಬಲಿಯಿತು. ಅವರು ಮಾಡುತ್ತಿದ್ದ ಆ್ಯಕ್ಸಿಡೆಂಟ್ ಮತ್ತು ಮಾಲ್ಗುಡಿ ಡೇಸ್‌ ತರಹದ ಯೋಜನೆಗಳಲ್ಲಿ ಸಣ್ಣಪುಟ್ಟ ಕೆಲಸ ಮಾಡುವ ಅವಕಾಶ ದೊರಕಿತು. ಆಕ್ಸಿಡೆಂಟ್‌ ಸಿನಿಮಾದ ಚಿತ್ರಕಥಾ ರಚನೆಯ ಹಂತದಲ್ಲಿ ಶಂಕರ್‌ನಾಗ್‌, ವಸಂತ ಮೊಕಾಶಿ, ನರಸಿಂಹನ್‌, ಕಾಶಿ, ರಂಗಣ್ಣಿ ಮುಂತಾದ ಗೆಳೆಯರು ಆಡುತ್ತಿದ್ದ ಮಾತುಗಳನ್ನು ಅಕ್ಷರಿಸುವ ಕೆಲಸ ಮಾಡಿದ್ದೆ. ಅವು ನನಗೆ ಸಿನಿಮಾ ಕಲಿಕೆಯ ಆರಂಭಿಕ ಪಾಠಗಳಾದವು ಎನ್ನಬಹುದು. ಆದರೆ ಅದು ಕಲಿಕೆ ಎಂದು ತಿಳಿಯದ ಕಾಪಿ ರೈಟರ್‌ ಕೆಲಸ ಆಗಿತ್ತು. ಅದಾದ ನಂತರ ಮಾಲ್ಗುಡಿ ಡೇಸ್‌ ಹಿಂದಿಯ ಧಾರಾವಾಹಿ ಶುರುವಾಯಿತು. ನನಗೆ ಹಿಂದಿ ಬರುತ್ತಿರಲಿಲ್ಲ. ಹೀಗಾಗಿ ಆ ಧಾರಾವಾಹಿಯ ಚಿತ್ರೀಕರಣದ ಕೆಲವು ಕಂತುಗಳಲ್ಲಿ ಜಾನ್‌ ದೇವರಾಜ್‌ ಎಂಬ ಬಾಲ್ಯ ಗೆಳೆಯನ ಜೊತೆಗೆ ಕಲಾ ನಿರ್ದೇಶನದ ತಂಡದಲ್ಲಿ ಸಹಾಯಕ ಆಗಿ ಕೆಲಸ ಮಾಡಿದ್ದೆ. ಜೊತೆಗೆ ಮತ್ತೊಬ್ಬ ಬಾಲ್ಯ ಗೆಳೆಯ ಸುರೇಶ್‌ ಅರಸ್‌ ಈ ಧಾರಾವಾಹಿಯ ಸಂಕಲನಕಾರ ಆಗಿದ್ದರು. ಅವರ ಸಂಕಲನ ತಂಡದಲ್ಲಿಯೂ ಸಹಾಯಕನಾಗಿ ಕೆಲಸ ಮಾಡಿದ್ದೆ. ಇದೆಲ್ಲವೂ ನನ್ನ ಬಿಡುವಿನ ವೇಳೆಯಲ್ಲಿ ಮಾಡಿದ ಕೆಲಸಗಳಾಗಿದ್ದವು. ಆದರೆ ನನಗೇ ತಿಳಿಯದಂತೆ ನಾನು ಸಿನಿಮಾದ ಹಲವು ವಿಭಾಗಗಳಲ್ಲಿ ಕೆಲಸ ಮಾಡುವ ಅವಕಾಶ ಒದಗಿ ಬಂದಿತ್ತು. ಆ ಅನುಭವ ಇವತ್ತಿಗೂ ನನಗೆ ಸಹಾಯ ಮಾಡುತ್ತಿದೆ. ವಿಶೇಷವಾಗಿ ಶಂಕರ್‌ ನಾಗ್‌ ಅವರು ಕೆಲಸವನ್ನು ಯೋಜಿಸುತ್ತಿದ್ದ ರೀತಿ, ನಿರ್ಧಾರ ತೆಗೆದುಕೊಳ್ಳುವ ವೇಗ, ಎಲ್ಲರನ್ನೂ ಸಮಾನರೆಂದು ಭಾವಿಸಿ ಸಾಗುತ್ತಿದ್ದ ನಾಯಕತ್ವದ ಗುಣವು ನಾನು ಮಾಡುವ ಕೆಲಸಗಳಲ್ಲಿಯೂ ಇಳಿದು ಬಂದಿದೆ. ನಾನು ಕೆಲಸ ಮಾಡುವ ತಂಡದಲ್ಲಿ ಹೈರಾರ್ಕಿಯನ್ನು ಪಾಲಿಸದೆ ಕೆಲಸ ಮಾಡುವ ಅಭ್ಯಾಸ ಈವರೆಗೆ ಉಳಿದ ಬಂದಿದೆ.  

Continue reading ‘ಅಕ್ಷರ ಸಂಗಾತ ಮಾಸ ಪತ್ರಿಕೆಯು ಪ್ರಜಾವಾಣಿ ದಿನ ಪತ್ರಿಕೆಯ ಅಮೃತ ಮಹೋತ್ಸವದ ಸಂದರ್ಭಕ್ಕಾಗಿ ರಂಗಕರ್ಮಿ, ಚಿತ್ರ ತಯಾರಕ ಬಿ. ಸುರೇಶ ಅವರ ಜೊತೆಗೆ ನಡೆಸಿದ ಸಂವಾದ’

ವಿಶ್ವ ರಂಗಭೂಮಿ ದಿನದ ಸಂದೇಶ ೨೦೨೩ – ೨೭ ಮಾರ್ಚ್‌

ವಿಶ್ವ ರಂಗಭೂಮಿ ದಿನದ ಸಂದೇಶ ೨೦೨೩ – ೨೭ ಮಾರ್ಚ್‌

ಸಂದೇಶ ನೀಡಿದವರು: ಸಮೀಹ ಆಯೂಬ್‌, ಈಜಿಪ್ಟ್‌ನ ರಂಗನಟಿ

ಅನುವಾದ: ಬಿ. ಸುರೇಶ

Sameeha Ayub, Egyptian Actress

ವಿಶ್ವದ ಎಲ್ಲಾ ಮೂಲೆಗಳಲ್ಲಿ ಇರುವ ಎಲ್ಲಾ ರಂಗಬಂಧುಗಳಿಗೆ, ವಿಶ್ವ ರಂಗದಿನದ ಈ ಸಂದೇಶವನ್ನು ಬರೆಯುವಾಗ, ನಿಮ್ಮೊಂದಿಗೆ ಮಾತಾಡುವ ಅವಕಾಶ ಸಿಕ್ಕಿರುವುದಕ್ಕಾಗಿ ಅತೀವ ಸಂತೋಷದ ಜೊತೆಗೇ ನಾವೆಲ್ಲರೂ, ಅಂದರೆ ಕಲಾವಿದರು ಮತ್ತು ಕಲಾವಿದರಲ್ಲದವರು ಅನುಭವಿಸುತ್ತಿರುವ ದುರಿತ ಕಾಲದ ಒತ್ತಡಗಳು ಮತ್ತು ಅತಂತ್ರ ಸ್ಥಿತಿಗಾಗಿ ದೇಹದ ಕಣಕಣವೂ ಕೊರಗುತ್ತಿದೆ, ಕಂಪಿಸುತ್ತಿದೆ ಎಂಬುದು ಸಹ ಸತ್ಯವೇ. ವಿಶ್ವವು ಈಗ ಎದುರಿಸುತ್ತಿರುವ ಯುದ್ಧಗಳು, ನೈಸರ್ಗಿಕ ವಿಕೋಪಗಳು ಮತ್ತಿತರ ಮನುಷ್ಯರೇ ಸೃಷ್ಟಿಸಿದ ಸಂಕಟಗಳ ನೇರ ಪರಿಣಾಮವೇ ಇದಾಗಿದೆ. ಇವು ನಮ್ಮ ಬಹಿರಂಗವನ್ನು ಮಾತ್ರವಲ್ಲ, ಅಂತರಂಗದ ಮನಶ್ಶಾಂತಿಯನ್ನು ಸಹ ಕದಡುತ್ತಿವೆ.

Continue reading ‘ವಿಶ್ವ ರಂಗಭೂಮಿ ದಿನದ ಸಂದೇಶ ೨೦೨೩ – ೨೭ ಮಾರ್ಚ್‌’

ನಾಗಮಂಡಲದ ಕಪ್ಪಣ್ಣ – ಕನ್ನಡ ಸಾಂಸ್ಕೃತಿಕ ಲೋಕದ ಕಪ್ಪಣ್ಣ

ಗಿರೀಶ್‌ ಕಾರ್ನಾಡರ “ನಾಗಮಂಡಲ” ನಾಟಕದಲ್ಲಿ ಅಪ್ಪಣ್ಣ-ಕಪ್ಪಣ್ಣ ಎಂಬ ಎರಡು ಪಾತ್ರಗಳು ಬರುತ್ತವೆ.  ಆ ಕಪ್ಪಣ್ಣ ಮೇಲ್ನೋಟಕ್ಕೆ ಹುಂಬನಂತೆ ಕಾಣುವವನು. ತನ್ನ ಕಣ್ಣಿಲ್ಲದ ತಾಯಿಯನ್ನು ಬೆನ್ನ ಮೇಲೆ ಹೊತ್ತು ಇಡೀ ಊರಿನ ತುಂಬಾ ಓಡಾಡುವವನು. ಊರಿನ ಎಲ್ಲರ ಬಗ್ಗೆ ಕಕ್ಕುಲಾತಿ ಇರುವವನು. ಎಲ್ಲರ ಸಮಸ್ಯೆಗಳನ್ನು ಕಣ್ಣಿಲ್ಲದ ತಾಯಿಗೆ ತಿಳಿಸುವವನು. ತಾಯಿ ಸೂಚಿಸಿದ ಪರಿಹಾರವನ್ನು ಜಾರಿಗೆ ತರಲು ಪ್ರಯತ್ನಿಸುವವನು. ಒಟ್ಟಾರೆಯಾಗಿ ಇಡೀ ಊರಿನ ಎಲ್ಲರ ಸುಖವನ್ನೂ ಚಿಂತಿಸುವವನು. ಒಡೆದು ಹೋದ ರಾಣಿಯ ಕುಟುಂಬವನ್ನು ಒಂದು ಮಾಡಲು ತನ್ನ ಕೈಲಾದ ಪ್ರಯತ್ನ ಮಾಡುವವನು.

ನಮ್ಮ ನಡುವಿನ ಅಪರೂಪದ ಸಂಘಟಕ, ಬೆಳಕು ವಿನ್ಯಾಸಕ, ರಂಗ ನೇಪಥ್ಯ ಪ್ರವೀಣ, ಜನಪದ ಜಾತ್ರೆಗಳ ಆಯೋಜಕ ಹೀಗೆ ಹಲವು ಬಿರುದುಗಳನ್ನು ನೀಡಬಹುದಾದ ಶ್ರೀನಿವಾಸ್‌ ಜಿ ಆಲಿಯಾಸ್‌ ಕಪ್ಪಣ್ಣ ಅವರು ಗಿರೀಶ್‌ ಕಾರ್ನಾಡರ ನಾಗಮಂಡಲದಲ್ಲಿ ಬರುವ ಕಪ್ಪಣ್ಣನ ಪಾತ್ರಕ್ಕೆ ಅನ್ವರ್ಥಕ. ಕಪ್ಪಣ್ಣ ಕರ್ನಾಟಕದ ಸಾಂಸ್ಕೃತಿಕ ಚಳವಳಿ ಎಂಬ ತಾಯಿಯನ್ನು ಬೆನ್ನ ಮೇಲೆ ಹೊತ್ತು ನಾಡೆಲ್ಲಾ ತಿರುಗಿದ್ದಾರೆ, ತಿರುಗುತ್ತಿದ್ದಾರೆ. ಸಮಸ್ಯೆಗಳು ಕಂಡಾಗ ತಮ್ಮ ಬೆನ್ನ ಮೇಲಿರುವ ತಾಯಿಯ ಮಾತಿನಂತೆ ಪರಿಹಾರಗಳನ್ನು ರೂಪಿಸಿದ್ದಾರೆ. ಅವುಗಳೆಲ್ಲವೂ ಎಲ್ಲರ ಮೆಚ್ಚುಗೆ ಪಡೆದಿಲ್ಲದೆ ಇರಬಹುದು. ಹಲವರು ಕಪ್ಪಣ್ಣನವರು ರೂಪಿಸಿದ ಪರಿಹಾರಗಳಿಗೆ ತದ್ವಿರುದ್ಧ ನಿಲುವಿನವರು ಇರಬಹುದು. ಆದರೆ ಕಪ್ಪಣ್ಣ ಅವರ ಪ್ರಯತ್ನವನ್ನು ಯಾರೂ ಅಲ್ಲಗಳೆಯಲಾರರು. ಹೀಗಾಗಿಯೇ ಈಗ ಎಪ್ಪತ್ತೈದರ ಹಂತ ತಲುಪಿರುವ ಕಪ್ಪಣ್ಣ ಕನ್ನಡ ಸಾಂಸ್ಕೃತಿಕ ಲೋಕದ ಸಾಕ್ಷಿಪ್ರಜ್ಞೆಗಳಲ್ಲಿ ಒಬ್ಬರಾಗಿ ನಡೆದಾಡುವ ರಂಗಚರಿತ್ರಕಾರರಾಗಿ ನಮ್ಮ ನಡುವೆ ಇದ್ದಾರೆ ಎಂದರೆ ತಪ್ಪಾಗಲಾರದು.

Continue reading ‘ನಾಗಮಂಡಲದ ಕಪ್ಪಣ್ಣ – ಕನ್ನಡ ಸಾಂಸ್ಕೃತಿಕ ಲೋಕದ ಕಪ್ಪಣ್ಣ’

ವಿಶ್ವ ರಂಗಭೂಮಿ ದಿನದ ಸಂದೇಶ ೨೦೨೨

ಸಂದೇಶಕಾರರು: ಪೀಟರ್ ಸೆಲ್ಲರ್ಸ್

(ಕನ್ನಡ ಅನುವಾದ – ಬಿ. ಸುರೇಶ)


ಪ್ರಿಯ ಸಂಗಾತಿಗಳೇ,

ಇಡೀ ಜಗತ್ತು ಕ್ಷಣಕ್ಷಣದ ಸುದ್ದಿ ಪ್ರವಾಹದಲ್ಲಿ ಮುಳುಗಿರುವಾಗ, ಸೃಜನಶೀಲ ವೃತ್ತಿಯವರಾದ ನಾವೆಲ್ಲರೂ ನಮ್ಮ ನೈಜ ಶಕ್ತಿ, ಸಾಮರ್ಥ್ಯ, ದೃಷ್ಟಿಕೋನ ಬಳಸಿ ಈ ಮಹಾಕಾಲದ, ಮಹಾ್ ಬದಲಾವಣೆಯ ಪರ್ವದ, ಮಹಾನ್ ತಿಳುವಳಿಕೆಯ, ಮಹಾನ್ ಪ್ರತಿಬಿಂಬದ, ಮಹಾನ್ ದೃಷ್ಟಿಯನ್ನು ನಮ್ಮ ಕ್ರಿಯಾಶೀಲತೆಗೆ ಆಹ್ವಾನಿಸಬಹುದೇ? ನಾವೀಗ ಮನುಕುಲದ ಚರಿತ್ರೆಯ ಮಹಾನ್  ಕಾಲಘಟ್ಟದಲ್ಲಿ ಬದುಕುತ್ತಿದ್ದೇವೆ. ಈ ಅವಧಿಯಲ್ಲಿ ನಮ್ಮೊಳಗೆ ಆಗುತ್ತಿರಬಹುದಾದ ತೀವ್ರ ಹಾಗೂ ಮುಖ್ಯವಾದ ಬದಲಾವಣೆಗಳನ್ನು, ನಮ್ಮ ನಡುವಿನ ಸಂಬಂಧಗಳನ್ನು ಗ್ರಹಿಸುವುದು ಮತ್ತು ಅವುಗಳನ್ನು ಮಾತು, ಭಾವದ ಮೂಲಕ ಪ್ರಕಟಗೊಳಿಸುವುದು ಸುಲಭವಲ್ಲ.

ದಿನವೆಲ್ಲಾ ನಾವು ಕೇವಲ ಸುದ್ದಿಚಕ್ರದಲ್ಲಿ ಸಿಲುಕಿಲ್ಲ ಬದಲಿಗೆ ಕಾಲದ ಅಂಚಿನಲ್ಲಿರುವವರಂತೆ ಜೀವಿಸಿದ್ದೇವೆ. ನಮ್ಮ ಅನುಭವದ ಗಾಢತೆಯನ್ನು ತಿಳಿಸಲು ದಿನಪತ್ರಿಕೆಗಳಾಗಲಿ, ಇನ್ನಿತರ ಮಾಧ್ಯಮಗಳಾಗಲಿ ಸಿದ್ಧವಾಗಿಲ್ಲ.
ಯಾವ ಭಾಷೆಗೆ, ಯಾವ ಚಲನೆಗೆ ಯಾವ ಪ್ರತಿಮೆಗೆ ನಮ್ಮ ಅನುಭವವನ್ನು ಕಟ್ಟಿಕೊಡುವ ಸಾಮರ್ಥ್ಯ ಇದೆ? ಬದುಕಿನ ಅನುಭವವನ್ನು ಜಾಳಾದ ಸುದ್ದಿ ಆಗಿಸುವುದರ ಹೊರತಾಗಿ ನೋಡುಗನಲ್ಲಿ ಅನುಭೂತಿ ಮೂಡಿಸುವಂತೆ ದಾಟಿಸುವುದು ಹೇಗೆ?

ರಂಗಭೂಮಿಯೊಂದೇ ನಿಜವಾದ ಅರ್ಥದಲ್ಲಿ ನಮ್ಮ ಅನುಭವ ದಾಟಿಸಬಲ್ಲ ಮಾಧ್ಯಮ.

ನಿರಂತರ ಸುಳ್ಳು ಸುದ್ದಿಗಳ, ಕಪಟ ಪ್ರಚಾರಿಗಳ, ಹುಸಿ ಮುನ್ಸೂಚನೆಗಳ ಬಲೆಯಿಂದಾಚೆಗೆ ಸಾಗಿ ಬದುಕಿನ ಅನಂತತೆಯನ್ನು, ಸಾತತ್ಯವನ್ನು, ಸಾಂಗತ್ಯವನ್ನು ತಿಳಿ ನೀಲಿ ಬಾನಿನಂತೆ ಇತರರಿಗೆ ತಲುಪಿಸುವುದಾದರೂ ಹೇಗೆ? ಕಳೆದರೆಡು ವರುಷಗಳ ಕೋವಿಡ್ ಮಹಾಮಾರಿ ಜನರ ಮನಸ್ಸನ್ನು ಮುದುಡಿಸಿದೆ, ಬದುಕುಗಳನ್ನು ಸಂಕುಚಿತಗೊಳಿಸಿದೆ, ಸಂಬಂಧಗಳನ್ನು ಮುರಿದಿದೆ ಮತ್ತು ನಮ್ಮನ್ನು ಮರಳಿ ಸೊನ್ನೆಯಾಗಿಸಿದೆ.
ಈಗ ಅದ್ಯಾವ ಬೀಜಗಳನ್ನು ಬಿತ್ತುವುದು? ಯಾವ ಭೂಮಿಯನ್ನು ಮರುಪೂರಣಗೊಳಿಸುವುದು? ಅತಿಯಾಗಿರುವ, ಅತಿಕ್ರಮಿಸಿರುವ ಅನಗತ್ಯ ವಿಷಯಗಳನ್ನು ತೆಗೆಯಬೇಕಿದೆ. ಹಲವರು ಅಂಚಿನಲ್ಲಿ ಬದುಕುತ್ತಿದ್ದಾರೆ. ಹಿಂಸೆ ಎಂಬುದು ಅತಾರ್ಕಿಕವಾಗಿ ಅನಪೇಕ್ಷಿತವಾಗಿ ತಾಂಡವ ಆಡುತ್ತಿದೆ. ವ್ಯವಸ್ಥೆಯ ಹಲವು ಅಂಗಗಳು ಈ ಹಿಂಸೆಗೆ ಮೂಕ ಸಾಕ್ಷಿಗಳಾಗಿವೆ.

ಈ ಹಂತದಲ್ಲಿ ನೆನಪಿನ ಕಣಜ ತೆರೆದಿಡಬಲ್ಲ ಆಚರಣೆ ಯಾವುದು? ನಾವು ಯಾವ ನೆನಪಿನ ಕೋಶ ತೆರೆಯಬೇಕು? ನಮ್ಮ ಯಾವ ಚಲನೆಗಳನ್ನು ಮರುರೂಪಿಸಬೇಕು? ಮರಳಿ ತಾಲಿಮು ಆರಂಭಿಸಲು ಸರಿ ದಾರಿ ಯಾವುದು?
ಇವೆಲ್ಲ ಪ್ರಶ್ನೆಗಳಿಗೆ ಉತ್ತರವಾಗಬಲ್ಲ ಹೊಸ ಆಚರಣೆಗಳನ್ನುಳ್ಳ ಹೊಸ ರಂಗಭೂಮಿ ಕಟ್ಟಬೇಕಿದೆ. ಅದಕ್ಕಾಗಿ ನಾವೆಲ್ಲರೂ ಸೇರಬೇಕಿದೆ. ನಮ್ಮೆಲ್ಲ ತಲ್ಲಣಗಳನ್ನು ಹಂಚಿಕೊಳ್ಳಬೇಕಿದೆ. ಸಂಕಟಗಳ ಕೈ ತುತ್ತು ಪಡೆದು ಸಮಾನತೆಯ, ಸಹನೆಯ ನೋಡುಗ – ಕೇಳುಗ ಸೇರಬಲ್ಲಂತಹ ತೆರಪುಗಳನ್ನು ರೂಪಿಸಬೇಕಿದೆ.

ಮನುಷ್ಯರು, ದೇವರುಗಳು, ಗಿಡಗಂಟಿಗಳು, ಪಶುಪಕ್ಷಿಗಳು, ಮಳೆಯ ಹನಿ, ಕಣ್ಞೀರ ಬಿಂದುಗಳ ಜೊತೆಗೆ ಮರುಜೀವ ಪಡೆಯಬಹುದಾದ ಎಲ್ಲವುಗಳಿಗೆ ಸ್ವಾಸ್ಥ್ಯ ನೀಡಬಲ್ಲ ಭೂಮಿ ಎಂದರೆ ಅದು ರಂಗಭೂಮಿ. ಸಮಾನತೆ, ಸಹನತೆಯ ದೀಪಗಳು ಈ ರಂಗಭೂಮಿಯನ್ನು ಬೆಳಗುತ್ತಿವೆ. ಸಮಚಿತ್ತತೆ, ಸಮಾನ ಕ್ರಿಯೆ, ಸಹನೆಗಳ ಜೊತೆಗೆ ಅಪಾಯಗಳನ್ನು ತೊಡೆಯಬಲ್ಲ ಸಾವಯವ ಸಂಬಂಧದಿಂದ ರಂಗಭೂಮಿ ಜೀವಂತವಾಗಿದೆ.

ಬುದ್ದನು ತನ್ನ “ಅವತಂಸಕ ಸುತ್ತ”ದಲ್ಲಿ  ಮನುಷ್ಯನ ನೆಮ್ಮದಿಯ ಜೀವನಕ್ಕೆ ಬೇಕಾದ ಹತ್ತು ಸಹನೆಗಳ ಬಗ್ಗೆ ತಿಳಿಸಿದ್ದಾನೆ. ಅವುಗಳಲ್ಲಿ ಒಂದು – ಎಲ್ಲವನ್ನೂ ಕೇವಲ ಮರೀಚಿಕೆ ಎಂದು ಗುರುತಿಸಬಲ್ಲ ಸಹನೆ. ರಂಗಭೂಮಿಯು ಯಾವಾಗಲೂ ಇಂತಹ ಮರೀಚಿಕೆಗಳನ್ನು ಪರಿಚಯಿಸುವ ಸಾಧನವಾಗಿದೆ. ಆ ಮೂಲಕ ಭ್ರಮೆಗಳನ್ನು, ಅಂಧಶ್ರದ್ಧೆಗಳಿಂದ ಬಿಡುಗಡೆ ನೀಡುವ ಶಕ್ತಿ ರಂಗಭೂಮಿಗಿದೆ. ನಾವಿಂದು ಬದಲಿ ವಾಸ್ತವಗಳನ್ನು ಗುರುತಿಸಲಾಗದ, ಭಿನ್ನ ದಾರಿಗಳನ್ನು ಹುಡುಕದ, ಅಸ್ಪಷ್ಟವಾಗಿರುವ ಸಂಬಂಧದ ಕೊಂಡಿಗಳನ್ನು ಗಮನಿಸದ ಹಾಗೆ ಗ್ರಸ್ಥರಾಗಿದ್ದೇವೆ.

ನಮ್ಮ ಮನಸ್ಸು, ಇಂದ್ರಿಯ, ಜಿಹ್ವೆ, ಗ್ರಹಣ ಮತ್ತು ಕಲ್ಪನಾ ಶಕ್ತಿಗಳ ಮೂಲಕ ನಮ್ಮ ಚರಿತ್ರೆಯ ಮರು ಓದು ಮಾತ್ರವಲ್ಲದೆ, ಭವಿಷ್ಯವನ್ನು ಸಹ ಹೊಸದಾಗಿ ರೂಪಿಸಬೇಕಿದೆ. ಈ ಕೆಲಸ ಏಕಾಂತದಲ್ಲಿ ಸಾಧಿತವಾಗುವುದಿಲ್ಲ. ಹಾಗಾಗಿ ನಾವೆಲ್ಲರೂ ಕೈ ಜೋಡಿಸಬೇಕು. ಎಲ್ಲರೂ ಒಂದಾಗಿ ರಂಗಕ್ರಿಯೆ ನಡೆಸಬೇಕು ಎಂದು ತಿಳಿಸಲು ಇದು ಆಹ್ವಾನ.

ಈ ವರೆಗಿನ ನಿಮ್ಮೆಲ್ಲರ ದುಡಿಮೆಗೆ ಧನ್ಯವಾದ ತಿಳಿಸುತ್ತಾ,

ಪೀಟರ್ ಸೆಲ್ಲರ್ಸ್

(ಪೀಟರ್ ಸೆಲ್ಲರ್ಸ್ ಅಮೇರಿಕಾ ಸಂಯುಕ್ತ ಸಂಸ್ಥಾನದ ಪೆನ್ಸಿಲ್ವೇನಿಯಾ ರಾಜ್ಯದ ಪಿಟ್ಸ್‌ಬರ್ಗ್ ನಗರದಲ್ಲಿ ಜನಿಸಿದವರು. ಅಪೇರಾ ಮತ್ತು ರಂಗಭೂಮಿ ನಿರ್ದೇಶಕರು ಹಾಗು ಹಲವು ಸಾಂಸ್ಕೃತಿಕ ಉತ್ಸವಗಳ ಪ್ರಧಾನ ನಿರ್ದೇಶಕರಾಗಿ ಜನಪ್ರಿಯರು.) 

Original Message in English:

Dear Friends,

As the world hangs by the hour and by the minute on a daily drip feed of news reportage, may I invite all of us, as creators, to enter our proper scope and sphere and perspective of epic time, epic change, epic awareness, epic reflection, and epic vision? We are living in an epic period in human history and the deep and consequential changes we are experiencing in human beings’ relations to themselves, to each other, and to nonhuman worlds are nearly beyond our abilities to grasp, to articulate, to speak of, and to express.

We are not living in the 24-hour news cycle, we are living at the edge of time. Newspapers and media are completely unequipped and unable to deal with what we are experiencing.

Where is the language, what are the moves, and what are the images that might allow us to comprehend the deep shifts and ruptures that we are experiencing? And how can we convey the content of our lives right now not as reportage but experience?

Theater is the artform of experience.

In a world overwhelmed by vast press campaigns, simulated experiences, ghastly prognostications, how can we reach beyond the endless repeating of numbers to experience the sanctity and infinity of a single life, a single ecosystem, a friendship, or the quality of light in a strange sky? Two years of COVID-19 have dimmed people’s senses, narrowed people’s lives, broken connections, and put us at a strange ground zero of human habitation.

What seeds need to be planted and replanted in these years, and what are the overgrown, invasive species that need to be fully and finally removed? So many people are on edge. So much violence is flaring, irrationally or unexpectedly. So many established systems have been revealed as structures of ongoing cruelty.

Where are our ceremonies of remembrance? What do we need to remember? What are the rituals that allow us at last to reimagine and begin to rehearse steps that we have never taken before?

The theater of epic vision, purpose, recovery, repair, and care needs new rituals. We don’t need to be entertained. We need to gather. We need to share space, and we need to cultivate shared space. We need protected spaces of deep listening and equality.

Theater is the creation on earth of the space of equality between humans, gods, plants, animals, raindrops, tears, and regeneration. The space of equality and deep listening is illuminated by hidden beauty, kept alive in a deep interaction of danger, equanimity, wisdom, action, and patience.

In The Flower Ornament Sutra, Buddha lists ten kinds of great patience in human life. One of the most powerful is called Patience in Perceiving All as Mirages. Theater has always presented the life of this world as resembling a mirage, enabling us to see through human illusion, delusion, blindness, and denial with liberating clarity and force.

We are so certain of what we are looking at and the way we are looking at it that we are unable to see and feel alternative realities, new possibilities, different approaches, invisible relationships, and timeless connections.

This is a time for deep refreshment of our minds, of our senses, of our imaginations, of our histories, and of our futures. This work cannot be done by isolated people working alone. This is work that we need to do together. Theater is the invitation to do this work together.

Thank you deeply for your work.

– Peter Sellars

ಸಿರಿಪಾದದ ಸ್ವಗತ

(ಶ್ರೀಪಾದ ಭಟ್ಟರು ಬರೆದಿರುವ “ನಟನೆಯ ಕೈಪಿಡಿ” ಹೊತ್ತಿಗೆಗೆ ಮುನ್ನುಡಿ.

ಹಾಗೆ ನೋಡಿದರೆ ನಮ್ಮ ಶ್ರೀಪಾದ ಭಟ್ಟರು, ಈಚೆಗೆ ಅವಧಿ ವೆಬ್‌ ಪತ್ರಿಕೆಗೆ ಬರೆದ ಕೆಲವು ಲೇಖನಗಳನ್ನು ಹೊರತು ಪಡಿಸಿದರೆ ಬರೆದುದು ಕಡಿಮೆಯೇ. ಈಗ ಹೊಸದೊಂದು ಕೈಪಿಡಿಯ ಜೊತೆಗೆ ಓದುಗರ ಜೊತೆಗೆ ಸಂವಾದ ಆರಂಭಿಸಿದ್ದಾರೆ. ಇದು ನನಗೆ ವೈಯಕ್ತಿಕವಾಗಿ ಸಂತೋಷದ ವಿಷಯ. ರಂಗಭೂಮಿಯಲ್ಲಿ ಅಷ್ಟೊಂದು ಪ್ರಯೋಗ ಮಾಡಿರುವ ಇಂತಹ ಗೆಳೆಯರು ತಮ್ಮ ಅನುಭವಗಳನ್ನು ಅಕ್ಷರರೂಪದಲ್ಲಿ ಸಹ ಇರಿಸುವುದು ಅತ್ಯಗತ್ಯ. ಅದು ಇವತ್ತಿಗೆ ಹೇಗೆ ಬಳಕೆಯಾದೀತು ಎನ್ನುವುದಕ್ಕಿಂತ ನಾಳೆಯ ತಲೆಮಾರಿಗೆ ಅತ್ಯುಪಯುಕ್ತ ಆಗಬಲ್ಲದು. ಈ ಹಿನ್ನೆಲೆಯಲ್ಲಿ ಶ್ರೀಪಾದ ಭಟ್ಟರ “ನಟನೆಯ ಕೈಪಿಡಿ”ಯನ್ನು ನೋಡಬೇಕು.

Continue reading ‘ಸಿರಿಪಾದದ ಸ್ವಗತ’

ಕೆಲವು ಪುಟಗಳು…

ಈವರೆಗೆ ಇಲ್ಲಿ ಸುಳಿದಾಡಿದವರು...

  • 109,884 ಜನರು