ಗಿರೀಶ್ ಕಾರ್ನಾಡರ “ನಾಗಮಂಡಲ” ನಾಟಕದಲ್ಲಿ ಅಪ್ಪಣ್ಣ-ಕಪ್ಪಣ್ಣ ಎಂಬ ಎರಡು ಪಾತ್ರಗಳು ಬರುತ್ತವೆ. ಆ ಕಪ್ಪಣ್ಣ ಮೇಲ್ನೋಟಕ್ಕೆ ಹುಂಬನಂತೆ ಕಾಣುವವನು. ತನ್ನ ಕಣ್ಣಿಲ್ಲದ ತಾಯಿಯನ್ನು ಬೆನ್ನ ಮೇಲೆ ಹೊತ್ತು ಇಡೀ ಊರಿನ ತುಂಬಾ ಓಡಾಡುವವನು. ಊರಿನ ಎಲ್ಲರ ಬಗ್ಗೆ ಕಕ್ಕುಲಾತಿ ಇರುವವನು. ಎಲ್ಲರ ಸಮಸ್ಯೆಗಳನ್ನು ಕಣ್ಣಿಲ್ಲದ ತಾಯಿಗೆ ತಿಳಿಸುವವನು. ತಾಯಿ ಸೂಚಿಸಿದ ಪರಿಹಾರವನ್ನು ಜಾರಿಗೆ ತರಲು ಪ್ರಯತ್ನಿಸುವವನು. ಒಟ್ಟಾರೆಯಾಗಿ ಇಡೀ ಊರಿನ ಎಲ್ಲರ ಸುಖವನ್ನೂ ಚಿಂತಿಸುವವನು. ಒಡೆದು ಹೋದ ರಾಣಿಯ ಕುಟುಂಬವನ್ನು ಒಂದು ಮಾಡಲು ತನ್ನ ಕೈಲಾದ ಪ್ರಯತ್ನ ಮಾಡುವವನು.
ನಮ್ಮ ನಡುವಿನ ಅಪರೂಪದ ಸಂಘಟಕ, ಬೆಳಕು ವಿನ್ಯಾಸಕ, ರಂಗ ನೇಪಥ್ಯ ಪ್ರವೀಣ, ಜನಪದ ಜಾತ್ರೆಗಳ ಆಯೋಜಕ ಹೀಗೆ ಹಲವು ಬಿರುದುಗಳನ್ನು ನೀಡಬಹುದಾದ ಶ್ರೀನಿವಾಸ್ ಜಿ ಆಲಿಯಾಸ್ ಕಪ್ಪಣ್ಣ ಅವರು ಗಿರೀಶ್ ಕಾರ್ನಾಡರ ನಾಗಮಂಡಲದಲ್ಲಿ ಬರುವ ಕಪ್ಪಣ್ಣನ ಪಾತ್ರಕ್ಕೆ ಅನ್ವರ್ಥಕ. ಕಪ್ಪಣ್ಣ ಕರ್ನಾಟಕದ ಸಾಂಸ್ಕೃತಿಕ ಚಳವಳಿ ಎಂಬ ತಾಯಿಯನ್ನು ಬೆನ್ನ ಮೇಲೆ ಹೊತ್ತು ನಾಡೆಲ್ಲಾ ತಿರುಗಿದ್ದಾರೆ, ತಿರುಗುತ್ತಿದ್ದಾರೆ. ಸಮಸ್ಯೆಗಳು ಕಂಡಾಗ ತಮ್ಮ ಬೆನ್ನ ಮೇಲಿರುವ ತಾಯಿಯ ಮಾತಿನಂತೆ ಪರಿಹಾರಗಳನ್ನು ರೂಪಿಸಿದ್ದಾರೆ. ಅವುಗಳೆಲ್ಲವೂ ಎಲ್ಲರ ಮೆಚ್ಚುಗೆ ಪಡೆದಿಲ್ಲದೆ ಇರಬಹುದು. ಹಲವರು ಕಪ್ಪಣ್ಣನವರು ರೂಪಿಸಿದ ಪರಿಹಾರಗಳಿಗೆ ತದ್ವಿರುದ್ಧ ನಿಲುವಿನವರು ಇರಬಹುದು. ಆದರೆ ಕಪ್ಪಣ್ಣ ಅವರ ಪ್ರಯತ್ನವನ್ನು ಯಾರೂ ಅಲ್ಲಗಳೆಯಲಾರರು. ಹೀಗಾಗಿಯೇ ಈಗ ಎಪ್ಪತ್ತೈದರ ಹಂತ ತಲುಪಿರುವ ಕಪ್ಪಣ್ಣ ಕನ್ನಡ ಸಾಂಸ್ಕೃತಿಕ ಲೋಕದ ಸಾಕ್ಷಿಪ್ರಜ್ಞೆಗಳಲ್ಲಿ ಒಬ್ಬರಾಗಿ ನಡೆದಾಡುವ ರಂಗಚರಿತ್ರಕಾರರಾಗಿ ನಮ್ಮ ನಡುವೆ ಇದ್ದಾರೆ ಎಂದರೆ ತಪ್ಪಾಗಲಾರದು.
ನಾನವರನ್ನು ನನ್ನ ಬಾಲ್ಯ ಕಾಲದಿಂದ ನೋಡುತ್ತಾ ಬೆಳೆದಿದ್ದೇನೆ. ಎಪ್ಪತ್ತರ ದಶಕದಲ್ಲಿನ ನಿರಂತರ ರಂಗಚಟುವಟಿಕೆಯಲ್ಲಿ ದಡಬಡನೆ ಓಡಾಡುತ್ತಾ ಹಲವು ಕೆಲಸಗಳನ್ನು ಮಾಡುತ್ತಿದ್ದ ಶ್ರೀನಿವಾಸ್ ಜಿ ಕಪ್ಪಣ್ಣ ನಾನು ಎಂಬತ್ತರ ದಶಕದಲ್ಲಿ ಸ್ವತಃ ರಂಗಚಟುವಟಿಕೆ ಮಾಡುವ ಕಾಲಕ್ಕೆ ವಾರ್ತಾ ಇಲಾಖೆಯಲ್ಲಿ ಕಲಾವಿದರನ್ನು ಕಟ್ಟಿಕೊಂಡು ನಾಡಿನಾದ್ಯಂತ ರಂಗಪ್ರದರ್ಶನಗಳನ್ನು ಸಂಘಟಿಸುತ್ತಿದ್ದರು. ಮೊದಲಿಗೆ ಇವರೊಬ್ಬ ಸರ್ಕಾರಿ ಅಧಿಕಾರಿ ಎಂದು ಭಾವಿಸಿದ್ದ ನನ್ನಂತಹವರಿಗೆ ಅಚ್ಚರಿಯಾಗುವಂತೆ ಹವ್ಯಾಸೀ ರಂಗಭೂಮಿಯ ಹಲವು ಕಾರ್ಯಕ್ರಮಗಳ ಹಿಂದೆ ಕಪ್ಪಣ್ಣ ಇರುತ್ತಿದ್ದರು. ಅಷ್ಟು ಯಾಕೆ ಸಿನಿಮಾಗಳಿಗೆ ರಾಜ್ಯ ಸರ್ಕಾರ ಪ್ರಶಸ್ತಿ ಕೊಡುವ ಕಾರ್ಯಕ್ರಮದಲ್ಲೂ ಇವರದೇ ಕೆಲಸ. ಎಂಎಸ್ಐಎಲ್ ನವರು ನಡೆಸುವ ಸುಗಮ ಸಂಗೀತದ ಕಾರ್ಯಕ್ರಮದ ರೂವಾರಿ ಕಪ್ಪಣ್ಣ. ವಿಧಾನಸೌಧದ ಮುಂದೆ ವಾರಾಂತ್ಯದಲ್ಲಿ ಆಗುತ್ತಿದ್ದ ಜನಪದ ಜಾತ್ರೆಯ ರೂವಾರಿಯೂ ಕಪ್ಪಣ್ಣ. ಹಲವು ಊರುಗಳಲ್ಲಿ ಹಲವು ಹೆಸರುಗಳಲ್ಲಿ ಆಗುತ್ತಿದ್ದ ಉತ್ಸವಗಳ ಬೆನ್ನೆಲುಬು ಕಪ್ಪಣ್ಣ. ಸರ್ಕಾರದ ಯಾವುದೋ ನಿಲುವು ಅಥವಾ ಯಾವುದೋ ಸಮಕಾಲೀನ ಕೇಡಿನ ವಿರುದ್ಧ ಟೌನ್ಹಾಲ್ ಎದುರು ಸಾಹಿತಿ ಕಲಾವಿದರು ಒಟ್ಟಿಗೆ ಸೇರಿ ಧಿಕ್ಕಾರ ಕೂಗಿದರೆ ಅದರ ವ್ಯವಸ್ಥೆಯ ಹಿಂದೆ ಇರುತ್ತಿದ್ದವರು ಕಪ್ಪಣ್ಣ. ಹೀಗೆ ವರುಷದ ಎಲ್ಲಾ ದಿನವೂ ಕರುನಾಡಿನ ಸಾಂಸ್ಕೃತಿಕ ಚಟುವಟಿಕೆಗೆ ತಮ್ಮ ಜೀವವನ್ನು ಮುಡಿಪಾಗಿಟ್ಟ ಅಪರೂಪದ ಮಾನವೀಯ ಹೃದಯಿ ನಮ್ಮ ಕಪ್ಪಣ್ಣ.
ಸಂಘಟಕ ಕಪ್ಪಣ್ಣ
ಎಂಬತ್ತರ ದಶಕದ ಬಹುಮುಖ್ಯ ನಾಟಕೋತ್ಸವಗಳಲ್ಲಿ ನಾಟ್ಯಸಂಘ ಥಿಯೇಟರ್ ಸೆಂಟರ್ ವ್ಯವಸ್ಥೆ ಮಾಡುತ್ತಿದ್ದ ರಂಗೋತ್ಸವ ಮುಖ್ಯವಾದುದು. ನನಗೆ ವೈಯಕ್ತಿಕವಾಗಿ ಈ ನಾಟಕೋತ್ಸವ ಇಷ್ಟವಾಗಲು ಇದ್ದ ಕಾರಣ ಈ ಉತ್ಸವಲದಲ್ಲಿ ನಾಟಕಗಳಿಗೆ ನಗದು ಬಹುಮಾನ ಕೊಡುತ್ತಿದ್ದರು ಮತ್ತು ನಗದು ಬಹುಮಾನ ನಮಗಾಗ ಬಹುಮುಖ್ಯ ವಿಷಯವಾಗಿತ್ತು. ನಾನು ಕೆಲಸ ಮಾಡುತ್ತಿದ್ದ ಫ್ಯಾಕ್ಟರಿಯಲ್ಲಿದ್ದ ನಾಟಕ ತಂಡದ ಮೂಲಕ ನಾನು ಎರಡು ಸಲ ಈ ರಂಗೋತ್ಸವದಲ್ಲಿ ಪಾಲ್ಗೊಂಡು ಬೇರೆ ಬೇರೆ ಬಗೆಯ ಬಹುಮಾನ ಪಡೆದಿದ್ದೆ. ಆಗೆಲ್ಲ ಈ ಉತ್ಸವಕ್ಕೆ ಅರ್ಜಿ ಸಲ್ಲಿಸಲು ಹೋದರೆ ಎದುರಾಗುತ್ತಿದ್ದವರು ಕಪ್ಪಣ್ಣ. ಅವರ ನಿಜವಾದ ಹೆಸರು ಶ್ರೀನಿವಾಸ್ ಎಂಬುದು ಅರಿವಾಗುವ ಹೊತ್ತಿಗೆ ನನ್ನಂತಹ ಹಲವರಿಗೆ ಈ ಕಪ್ಪಣ್ಣ ಎಂಬ ಹೆಸರು ಎಷ್ಟು ಬಾಯಿಪಾಠ ಆಗಿತ್ತೆಂದರೆ ಈಗಲೂ ಯಾರಾದರೂ ಕಪ್ಪಣ್ಣ ಅನ್ನುವ ಬದಲಿಗೆ ಬೇರೆ ಹೆಸರಿಂದ ಅವರನ್ನು ಕರೆದರೆ ನಮಗೆ ಗುರುತು ಹತ್ತದೆ ಹೋಗಬಹುದು.
ನಾನು ಆಗಷ್ಟೇ ಅಭಿನಯತರಂಗ ಶಾಲೆಯಲ್ಲಿ ರಂಗತರಬೇತಿ ಪಡೆದಿದ್ದವನು ಹೀಗಾಗಿ ರವೀಂದ್ರ ಕಲಾಕ್ಷೇತ್ರದ ಮೆಟ್ಟಿಲುಗಳ ಬಗ್ಗೆ ಮಹಾ ಅಂಜಿಕೆ, ಹಿಂಜರಿಕೆ. ಆದರೆ ಹೇಗಾದರೂ ಈ ನಾಟ್ಯಸಂಘದ ನಾಟಕೋತ್ಸವದಲ್ಲಿ ನನ್ನ ನಾಟಕ ಪ್ರದರ್ಶನ ಆಗುವಂತೆ ಮಾಡಬೇಕೆಂಬ ಹಂಬಲ. ಆ ದಿನದ ಫ್ಯಾಕ್ಟರಿಯ ಕೆಲಸ ಮುಗಿಸಿ ಸಂಜೆ ನಾಲ್ಕರ ಸುಮಾರಿಗೆ ಹೆದರುತ್ತಲೇ ರವೀಂದ್ರ ಕಲಾಕ್ಷೇತ್ರದ ಮೆಟ್ಟಿಲು ಹತ್ತುತ್ತಿದೆ. ಬಾಗಿಲಲ್ಲೇ ಎದುರಾದವರು ಕಪ್ಪಣ್ಣನವರೇ. ನಗೆ ಅವರು ಯಾರೆಂದು ಗೊತ್ತು. ಅವರಿಗೆ ನಾನ್ಯಾರು ಎಂದು ತಿಳಿದಿಲ್ಲದ ಕಾಲ ಅದು. ನಾನು ಅಂಜುತ್ತಾ ಅವರ ಬಳಿ ನಾಟ್ಯಸಂಘ, ಅರ್ಜಿ ಎಂದು ತೊದಲುತ್ತಾ ಹೇಳಿದೆನೆಂದೆನಿಸುತ್ತದೆ. ಅವರು ಕಲಾಕ್ಷೇತ್ದ ಆವರಣದಲ್ಲಿ ಮಾಡಿದ್ದ ಹಂಗಾಮಿ ಕಚೇರಿಯ ದಿಕ್ಕು ತಿಳಿಸಿದರು. ಅಲ್ಲಿಗೆ ದಡಬಡಿಸಿ ಹೋದೆ. ಅಲ್ಲಿದ್ದವರು ಚಂದ್ರಶೇಖರ ಉಷಾಲ ಮತ್ತು ವಿಶ್ವಪ್ರಸಾದ್ ಎಂಬ ಆನಂತರ ನನ್ನ ಗೆಳೆಯರಾದವರು. ಅವರು ನೀಡಿದ ಅರ್ಜಿ ಎಲ್ಲಾ ತುಂಬಿಸಿ ಕೊಟ್ಟೆ. ಅದನ್ನೋದಿದ ಚಂದ್ರಶೇಖರ ಉಷಾಲ ಅವರು “ಸಾರ್, ಸಾರ್” ಎಂದು ಯಾರನ್ನೋ ಕರೆದರು. ಬಂದದ್ದು ಕಪ್ಪಣ್ಣ ಅವರು. ಅವರಿಗೆ ನನ್ನ ಅರ್ಜಿ ಕೊಟ್ಟು ಈ ಹುಡುಗ ನಾಟಕ ತಾನೇ ಬರೆದು ನಿರ್ದೇಶನ ಕೂಡ ಮಾಡ್ತಾ ಇದಾನೆ ಎಂದು ಉಷಾಲ ಅವರು ಹೇಳಿದ್ದಷ್ಟೇ ಕಪ್ಪಣ್ಣ ಅವರು ಅತೀವ ಕಾಳಜಿಯಿಂದ ಏನು ನಾಟಕ? ಹೇಗೆ ಮಾಡಿಸುತ್ತಾ ಇದ್ದೀಯ? ಎಂದೆಲ್ಲಾ ಕೇಳಿದರು. ನಾನು ನನ್ನ ಬಗಲ ಚೀಲದಲ್ಲಿದ್ದ ಅರೆಬರೆ ನಾಟಕದ ಸ್ಕ್ರಿಪ್ಟು ಮತ್ತು ಆ ನಾಟಕದ ಸಜ್ಜಿಕೆಗೆ ಮತ್ತು ಪಾತ್ರಗಳಿಗೆ ಎಂದು ಜೋಡಿಸಿಟ್ಟುಕೊಂಡಿದ್ದ ಫೋಟೊಗಳು, ಇತರೆ ಸಿದ್ಧತೆಗಳನ್ನು ತೋರಿಸಿದೆ. ಅವರದನ್ನೆಲ್ಲಾ ನೋಡುತ್ತಾ ನೋಡುತ್ತಾ “ಏಯ್ ಈ ಹುಡುಗಂಗೆ ಕಾಫಿ ಕೊಡುಸ್ರೊ” ಎಂದು ಸಂಭ್ರಮಿಸುತ್ತಾ ಸುತ್ತಲೂ ಇದ್ದವರಿಗೆಲ್ಲಾ ಇವನು ನಾಟಕಕಾರ, ನಿರ್ದೇಶಕ ಎಂದು ಪರಿಚಯಿಸಿದರು. ಅವರು ಸಂಭ್ರಮ ಪಡುತ್ತಾ ಇದ್ದಾಗ ನಾನು ನಾಟಕ ಹೇಗೆ ಮಾಡಿಸುತ್ತೇನೋ ಎಂಬ ಭಯ ನನಗಿತ್ತು ಎಂಬ ಮಾತು ಬೇರೆ. ಆದರೆ ಕಪ್ಪಣ್ಣ ಅವರು ಹೀಗೆ ನನ್ನಂತಹವನಿಗೆ ಮಾತ್ರ ಅಲ್ಲ ಯಾವುದೇ ಹೊಸ ಕಲಾವಿದ, ನಾಟಕಕಾರ, ಜನಪದ ಅಭ್ಯಾಸಿ ಸಿಕ್ಕರೆ ಇದೇ ಬಗೆಯಲ್ಲಿ ಸಂಭ್ರಮಿಸುತ್ತಾರೆ. ಅಂತಹವರನ್ನು ವೇದಿಕೆಗೆ ಹತ್ತಿಸಲು ಇನ್ನಿಲ್ಲದ ಪ್ರಯತ್ನ ಮಾಡುತ್ತಾರೆ. ಇದು ಕಪ್ಪಣ್ಣ ಅವರ ವಿಶಾಲ ಹೃದಯಿ ಗುಣ.
ಹಲವು ವರ್ಷಗಳ ನಂತರ ನಾನು ಮೈನಾ ಚಂದ್ರು ಅವರ ತಂಡಕ್ಕೆ ರಂ.ಶ್ರೀ. ಮುಗಳಿ ಅವರ ಕಾದಂಬರಿ ಆಧರಿಸಿದ “ಅಗ್ನಿವರ್ಣ” ಎಂಬ ನಾಟಕ ಮಾಡಿಸಲು ಸಿದ್ಧತೆ ಮಾಡುತ್ತಿದ್ದೆ. ಆ ನಾಟಕದಲ್ಲಿ ತೊಗಲುಗೊಂಬೆ ಆಟವನ್ನು ಬಳಸಬೇಕಿತ್ತು. ಯಾರನ್ನು ಸಂಪರ್ಕಿಸುವುದು? ಹೇಗೆ ತಂಡಕ್ಕೆ ಅದನ್ನು ಕಲಿಸುವುದು ಎಂಬ ಗೊಂದಲದಲ್ಲಿದ್ದೆ. ಆಗ ನಾಟಕ ಅಕಾಡೆಮಿಯ ರಿಜಿಸ್ಟ್ರಾರ್ ಆಗಿದ್ದವರು ಕಪ್ಪಣ್ಣ. ಕಾರಂತರ ಕ್ಯಾಂಟೀನ್ ಬಳಿ ನಾನು ಇನ್ಯಾರ ಜೊತೆಗೊ ಆಡುವ ಮಾತು ಕೇಳಿಸಿಕೊಂಡಿದ್ದರು ಅನಿಸುತ್ತದೆ. ರೇವಣ್ಣ ಅವರನ್ನು ನಮ್ಮ ತಾಲೀಮಿನ ಜಾಗಕ್ಕೆ ಕಳಿಸಿ ನನ್ನನ್ನು ಬರಹೇಳಿದರು. ಆಗ ರವೀಂದ್ರ ಕಲಾಕ್ಷೇತ್ರ ಕಟ್ಟದಲ್ಲಿಯೇ ಇದ್ದ ಅಕಾಡೆಮಿಯ ಕಚೇರಿಗೆ ಹೋದವನಿಗೆ ಬೆಳಗಲ್ ವೀರಣ್ಣ ಅವರ ಬಗ್ಗೆ ತಿಳಿಸಿ, ಅವರು ಇಂತಹ ದಿನದಿಂದ ಇಂತಹ ದಿನಕ್ಕೆ ಬೆಂಗಳೂರಿಗೆ ಬರುತ್ತಾರೆ. ನಿಮ್ಮ ತಂಡಕ್ಕೆ ತೊಗಲುಗೊಂಬೆ ಕಲಿಸುತ್ತಾರೆ ಎಂದರು. ನಾನು ಹಣದ ವ್ಯವಸ್ಥೆಗೆ ಏನು ಮಾಡುವುದು ಎಂಬ ಗೊಂದಲದಲ್ಲಿದ್ದಾಗ ಈ ತೊಗಲುಗೊಂಬೆ ಶಿಬಿರವನ್ನು ನಿಮ್ಮ ತಂಡಕ್ಕಾಗಿ ನಾಟಕ ಅಕಾಡೆಮಿ ವ್ಯವಸ್ಥೆ ಮಾಡಿದೆ ಎಂದು ನಮ್ಮ ತಂಡದ ಸಂಕಷ್ಟ ನಿವಾರಿಸಿದ್ದರು. ಹೀಗೆ ಯಾವುದೇ ರಂಗತಂಡವು ಮಾಡುವ ಹೊಸ ಪ್ರಯೋಗಗಳಿಗೆ ಕಪ್ಪಣ್ಣ ಬೆಂಬಲವಾಗಿ ನಿಲ್ಲುತ್ತಿದ್ದರು ಎಂಬುದಕ್ಕೆ ಹಲವು ಉದಾಹರಣೆಗಳನ್ನು ಆಯಾ ತಂಡದವರು ನೀಡಬಹುದು.
ಕೆಲ ವರ್ಷಗಳ ಹಿಂದೆ ನಾನು ಬಳ್ಳಾರಿಯ ಮಾರ್ಗವಾಗಿ ದರೋಜಿ ಈರಮ್ಮ ಅವರ ಊರಿಗೆ ಹೋಗಿದ್ದೆ. ಅಲ್ಲಿ ಸಿಕ್ಕ ಹಲವು ಜನಪದ ಕಲಾವಿದರ ಜೊತೆಗೆ ಮಾತುಕತೆ ಆಡುವಾಗ ಪ್ರತಿಯೊಬ್ಬರೂ ಹೇಳಿದ್ದು ಒಂದೇ ಹೆಸರು. “ಕಪ್ಪಣ್ಣ ಅವರಿಂದ ನಮಗೆ ನಿಯಮಿತ ಆದಾಯ ಬರುವಂತಾಯಿತು. ಅವರು ವ್ಯವಸ್ಥೆ ಮಾಡಿದ ಜನಪದ ಜಾತ್ರೆಗಳು ನಮ್ಮ ಬದುಕಿಗೆ ನೆಮ್ಮದಿ ಒದಗಿಸದವು. ಈಗ ನಮಗೆ ಯಾವುದೇ ಕಾರ್ಯಕ್ರಮವಾದರೂ ಆಹ್ವಾನ ಬರುತ್ತದೆ. ಜೊತೆಗೆ ನಮ್ಮ ಗೌರವಧನ ಕೂಡ ನಿಗದಿಯಾಗಿದೆ.” ಹೀಗೆ ಯಾವುದೋ ಮೂಲೆಯಲ್ಲಿ ಇರುವ ಜನಪದ ಕಲಾವಿದರಿಗೆ ಅವಕಾಶ ಸಿಗುವಂತೆ ಮಾಡುವುದಷ್ಟೇ ಅಲ್ಲ, ಅವರ ಬದುಕಿಗೆ ನೆಮ್ಮದಿಯನ್ನು ಸಹ ಒದಗಿಸುವ ಕೆಲಸ ಯೋಜಿಸುವುದು ಸಣ್ಣ ವಿಷಯವಲ್ಲ. ಕಪ್ಪಣ್ಣ ಅವರು ಹಾಕಿಕೊಟ್ಟ ಮಾರ್ಗ ಮುಂದೆ ಹಲವು ಸಂಘಟಕರಿಗೆ ಜನಪದ ಮೇಳಗಳನ್ನು ಮಾಡಲು ದಾರಿ ಆಯಿತು. ಅಷ್ಟೇ ಅಲ್ಲ, ಹಲವು ರಾಜಕೀಯ ಪಕ್ಷಗಳು ಸಹ ಈ ಜನಪದ ಕಲಾವಿದರನ್ನು ತಮ್ಮ ಮೆರವಣಿಗೆಗೆ, ಮೇಳಕ್ಕೆ ಬಳಸಿಕೊಳ್ಳುವಂತಾಯಿತು. ಒಂದೊಳ್ಳೆಯದು ಹಲವು ದಾರಿಗಳನ್ನು ತೆರೆಯುತ್ತದೆ ಎಂಬುದಕ್ಕೆ ಇದೂ ಒಂದು ಉದಾಹರಣೆಯಷ್ಟೇ.
ನಾನಾಗ ಟಿವಿ ಕಾರ್ಮಿಕರ ಸಂಘಟನೆಗೆ ಕಾರ್ಯದರ್ಶಿಯಾಗಿದ್ದೆ. ಟಿವಿ ಎಂಬ ಮಾಧ್ಯಮಕ್ಕೆ ಕರುನಾಡಲ್ಲಿ ೨೫ ವರ್ಷ ತುಂಬಿದಾಗ ಅದನ್ನು ಸಂಭ್ರಮಿಸಲು ಹಲವು ಊರುಗಳಲ್ಲಿ ಕಾರ್ಯಕ್ರಮ ಯೋಜಿಸಿದ್ದೆ. ಬಾಗಲಕೋಟೆ, ಬಳ್ಳಾರಿ, ಮೈಸೂರು, ದಾವಣಗೆರೆಗಳಲ್ಲಿ ಬೃಹತ್ ಕಾರ್ಯಕ್ರಮಗಳು. ಆ ಊರುಗಳಿಗೆ ಹೋಗುವ ಮುನ್ನ ನಾನು ಭೇಟಿಯಾದದ್ದು ಕಪ್ಪಣ್ಣ ಅವರನ್ನ. ಅವರು ಆಯಾ ಊರಿನಲ್ಲಿ ಯಾರನ್ನು ಸಂಪರ್ಕಿಸಬೇಕು? ಯಾರು ನೇಪಥ್ಯಕ್ಕೆ ಒದಗುತ್ತಾರೆ? ಯಾರು ಸಂಘಟನಾ ಕೆಲಸಕ್ಕೆ ಆಗುತ್ತಾರೆ? ಯಾರು ಕುರ್ಚಿ, ಪೆಂಡಾಲು ವ್ಯವಸ್ಥೆ ಮಾಡುತ್ತಾರೆ? ಯಾರು ಊಟ, ವಸತಿ ನೋಡಿಕೊಳ್ಳುತ್ತಾರೆ ಎಂದು ಪ್ರತಿ ಊರಿನ ಜನರ ಪಟ್ಟಿ ಕೊಟ್ಟರು. ಆ ಎಲ್ಲಾ ಹೆಸರುಗಳ ಪಟ್ಟಿ ಹಿಡಿದು ಆಯಾ ಊರಿಗೆ ಹೋಗಿ ನಮ್ಮ ಕಾರ್ಯಕ್ರಮ ಆಯೋಜಿಸುವಾಗಲೇ ತಿಳಿದದ್ದು ಅವರೆಲ್ಲರೂ ಕಪ್ಪಣ್ಣನವರ ಜೊತೆಗೆ ಕೆಲಸ ಮಾಡಿ ತಯಾರಾದ ಸಂಘಟನಾ ಪಡೆ ಎಂಬುದು. ಈ ಬಗೆಯಲ್ಲಿ ಎಲ್ಲಾ ಊರುಗಳಲ್ಲಿ ರಂಗಭೂಮಿಗೆ ಮಾತ್ರವಲ್ಲ ಯಾವುದೇ ಕಾರ್ಯಕ್ರಮ ಮಾಡುವುದಕ್ಕೆ ಬೃಹತ್ ಪಡೆ ತಯಾರು ಮಾಡುವುದು ಸಣ್ಣ ಮಾತಲ್ಲ. ಇದು ಕಪ್ಪಣ್ಣ ಎಷ್ಟು ಕೆಲಸ ಮಾಡಿದ್ದಾರೆ ಎಂಬುದಕ್ಕೆ ಸ್ಪಷ್ಟವಾದ ಕನ್ನಡಿ ಎನ್ನಬಹುದು.
ಕರ್ನಾಟಕ ಸರ್ಕಾರವು ಸಿನಿಮಾಗಳಿಗೆ ಪ್ರಶಸ್ತಿಗಳನ್ನು ಕೊಡುವ ವಾರ್ಷಿಕ ಚಟುವಟಿಕೆ ಬಹುಕಾಲದಿಂದ ಮಾಡುತ್ತಿದೆ. ಆದರೆ ಅದು ಯಾವಾಗಲೂ ಅವ್ಯವಸ್ಥೆಯ ಆಗರವಾಗಿರುತ್ತಿತ್ತು. ಯಾರಿಗೋ ಹೋಗಬೇಕಾದ ಫಲಕ ಇನ್ಯಾರಿಗೋ? ಯಾರದೋ ಪ್ರಶಸ್ತಿ ಮತ್ಯಾರಿಗೋ? ಪ್ರಶಸ್ತಿ ವಿಜೇತರಿಗೆ ವೇದಿಕೆಯಲ್ಲಿ ಜಾಗವಿಲ್ಲ? ಹೀಗೆಲ್ಲಾ ಆಗುತ್ತಿತ್ತು. ಸುಮಾರು ಎಂಬತ್ತರ ದಶಕದಲ್ಲಿ ಈ ಕಾರ್ಯಕ್ರಮದ ವ್ಯವಸ್ಥೆಯನ್ನು ಕಪ್ಪಣ್ಣ ನೋಡಿಕೊಳ್ಳಲು ಆರಂಭಿಸಿದರು. ಅಲ್ಲಿಂದಾಚೆಗೆ ಈ ಕಾರ್ಯಕ್ರಮಕ್ಕೆ ಅಚ್ಚುಕಟ್ಟುತನ, ಶಿಸ್ತು ಬಂದಿತು. ಯಾರು ಎಲ್ಲಿ ಕೂರಬೇಕು? ಪ್ರಶಸ್ತಿ ಫಲಕಗಳು ಎಲ್ಲಿರಬೇಕು? ಯಾರ ಬಗ್ಗೆ ನಿರೂಪಕರು ಏನು ಮಾತಾಡಬೇಕು? ವೇದಿಕೆಯ ಹಿನ್ನೆಲೆ ಹೇಗಿರಬೇಕು? ಈ ಎಲ್ಲ ವಿವರಗಳನ್ನು ಸ್ವತಃ ಹಿಂದೆಯೇ ನಿಂತು ಸರಿಪಡಿಸಿ ರಾಜ್ಯ ಸರ್ಕಾರದ ಕಾರ್ಯಕ್ರಮಕ್ಕೆ ಒಂದು ಘನತೆ ಬರುವಂತೆ ಮಾಡಿದವರು ಕಪ್ಪಣ್ಣ. ಅವರು ವಾರ್ತಾ ಇಲಾಖೆಯಲ್ಲಿಯೇ ಎಪ್ಪತ್ತರ ದಶಕದಿಂದ ಕೆಲಸ ಮಾಡುತ್ತಿದ್ದರು. ಆದರೆ ಈ ಕೆಲಸದ ವ್ಯವಸ್ಥೆ ನೋಡಿಕೊಳ್ಳುವ ಜವಾಬ್ದಾರಿ ಕಪ್ಪಣ್ಣ ಅವರ ಹೆಗಲೇರಿದ್ದು ಬಹಳ ತಡವಾಗಿ. ಅದರಿಂದಾಗಿ ಪ್ರಶಸ್ತಿ ಪಡೆದವರಿಗೂ ಮತ್ತು ಕೊಡುವವರಿಗೂ ಘನತೆ ಸಿಕ್ಕಂತಾಯಿತು. ಕಪ್ಪಣ್ಣ ಅವರ ನಿವೃತ್ತಿಯ ನಂತರ ರಾಜ್ಯ ಸರ್ಕಾರ ನೀಡಿದ ಪ್ರಶಸ್ತಿ ಪ್ರದಾನದಲ್ಲಿ ಮತ್ತೆ ಕಾಣಿಸಿಕೊಂಡ ಅದೇ ಅವ್ಯವಸ್ಥೆಯು ಕಪ್ಪಣ್ಣ ಅವರ ಕೊಡುಗೆ ಎಂತಹದು ಎಂಬುದನ್ನು ನೆನಪಿಸಿತ್ತು.
ಹೀಗೇ ಕಪ್ಪಣ್ಣನವರ ವಿಶ್ವರೂಪವನ್ನು ಅರಿಯಲು ನನ್ನ ಬದುಕಿನ ಕೆಲವು ಉದಾಹರಣೆ ಹೇಳಬಹುದು. ಸಮಕಾಲೀನ ರಂಗಭೂಮಿಯ ಯಾರನ್ನಾದರೂ ಕೇಳಿದರೆ ಈ ವಿಶ್ವರೂಪದ ಇನ್ನೂ ಹಲವು ಹತ್ತುಮುಖಗಳು ದೊರೆಯಬಹುದು. ಇಂತಹ ನಮ್ಮ ಕಪ್ಪಣ್ಣ ಆಲಿಯಾಸ್ ಜಿ. ಶ್ರೀನಿವಾಸ್ಗೆ ಎಪ್ಪತ್ತೈದಾಗಿದೆ. ಅವರ ಉಳಿದ ಅವಧಿಯಲ್ಲಿ ಮತ್ತಷ್ಟು ದರ್ಶನಗಳನ್ನು ನೀಡುವ ಭಾಗ್ಯ ನಮಗೆ ದೊರೆಯಲಿ. ಕಪ್ಪಣ್ಣ ಕನ್ನಡದ ಸಾಂಸ್ಕೃತಿಕ ಚಳವಳಿಗಳನ್ನು “ನಾಗಮಂಡಲ” ನಾಟಕದಂತೆ ಬೆನ್ನ ಮೇಲೆ ಹೊತ್ತು ಕಾಪಾಡುತ್ತಿರಲಿ. ಆ ಹಾದಿಯಲ್ಲಿ ಮತ್ತಷ್ಟು ಜನ ಮರಿ ಕಪ್ಪಣ್ಣಗಳನ್ನು ಸೃಷ್ಟಿಸುವಂತಾಗಲಿ.
– *** –
ಇತ್ತೀಚಿನ ಪ್ರತಿಕ್ರಿಯೆಗಳು…